ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಚಟುವಟಿಕೆಯಲ್ಲಿ ನಿರತರಾಗಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮತದಾನ ಮುಗಿಯುತ್ತಿದ್ದಂತೆ ಆರೋಗ್ಯ ತಪಾಸಣೆಗಾಗಿ ಸಿಂಗಾಪುರಕ್ಕೆ ತೆರಳಿದ್ದರು. ಇಂದು ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ತಡರಾತ್ರಿಯೇ ಎಚ್ಡಿಕೆ ಬೆಂಗಳೂರಿಗೆ ಬಂದಿಳಿದಿದ್ದಾರೆ.
ರಾತ್ರಿ 12.20ರ ವಿಮಾನದಲ್ಲಿ ಮಾಜಿ ಸಿಎಂ ಎಚ್ಡಿಕೆ ಸಿಂಗಾಪುರದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಸಾಕಷ್ಟು ಅಭಿಮಾನಿಗಳು ಅವರ ಜತೆ ಪೊಟೋಗೆ ಮುಗಿಬಿದ್ದರು.
ಕೆಲ ಕಾಲ ಅಲ್ಲಿಯೇ ನಿಂತು ಮಾಜಿ ಸಿಎಂ ಎಚ್ಡಿಕೆ ಫೋಟೋ ತೆಗೆಸಿಕೊಂಡರು. ವಿದೇಶಿ ಪ್ರಯಾಣಿಕರ ಆಗಮನ ದ್ವಾರದ ಬಳಿ ಏರ್ಪೊಟ್ ಸಿಬ್ಬಂದಿ ಮತ್ತು ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಬಳಿಕ ಎಚ್ಡಿಕೆ ಅಲ್ಲಿಂದ ಹೊರಟರು.
ಕರ್ನಾಟಕದ 16ನೇ ವಿಧಾನಸಭೆಗೆ ಮೇ 10ರಂದು ಮತದಾನ ನಡೆದಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಕರ್ನಾಟಕವು ಒಟ್ಟು 224 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಯಾವುದೇ ಪಕ್ಷ ಅಧಿಕಾರ ರಚನೆ ಮಾಡಲು 113 ಸ್ಥಾನಗಳನ್ನು ಗೆಲ್ಲಬೇಕಿದೆ. ಒಂದು ವೇಳೆ ಯಾರಿಗೂ ಬಹುಮತ ಬರದಿದ್ದರೆ ಮತ್ತೆ ಅತಂತ್ರ ಸರ್ಕಾರ ರಚನೆಯಾಗಲಿದೆ. (ದಿಗ್ವಿಜಯ ನ್ಯೂಸ್)