ಕುಕನೂರು: ಮಕ್ಕಳು ಸೇವಿಸುವ ಆಹಾರದ ಗುಣಮಟ್ಟ ಮತ್ತು ಪೌಷ್ಟಕತೆ ಬಗ್ಗೆ ಅಡುಗೆದಾರರು ಗಮನಹರಿಸಬೇಕು ಎಂದು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ.ಕಳ್ಳಿ ಹೇಳಿದರು.
ಇದನ್ನೂ ಓದಿ: ಮಹಿಳೆಯರಿಂದ ಮಾರುತಿ ಮಂದಿರ ಸ್ವಚ್ಛತೆ
ಪಟ್ಟಣದ ವಿದ್ಯಾನಂದ ಗುರುಕುಲ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಅಕ್ಷರ ದಾಸೋಹ ಅಡುಗೆದಾರರ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಶನಿವಾರ ಮಾತನಾಡಿದರು.
ಅಕ್ಷರ ದಾಸೋಹ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ ಐದು ದಿನ ಬಿಸಿ ಹಾಲು ಮತ್ತು ಶಾಲಾ ದಿನಗಳಲ್ಲಿ ಬಿಸಿಯೂಟ ವಿತರಿಸಲಾಗುತ್ತದೆ.
ಜತೆಗೆ 80 ದಿನಗಳಿಗೆ ಪೂರಕ ಪೌಷ್ಟಕ ಆಹಾರವಾಗಿ ಕೋಳಿ ಮೊಟ್ಟೆ, ಮೊಟ್ಟೆ ತಿನ್ನದೇ ಇರುವ ಮಕ್ಕಳಿಗೆ ಬಾಳೆಹಣ್ಣು, ಶೇಂಗಾ ಚಿಕ್ಕಿ ಕೊಡಲಾಗುವುದು. ಮಕ್ಕಳಿಗೆ ಪಂಕ್ತಿ ಭೋಜನ ವ್ಯವಸ್ಥೆ ಮಾಡಬೇಕು. ಪ್ರತಿ ದಿನ ಸ್ವಚ್ಛತೆ ಹಾಗೂ ಸುರಕ್ಷತೆಯಿಂದ ಅಡುಗೆ ಸಿದ್ಧಪಡಿಸಿದ ನಂತರ ಇಬ್ಬರು ಶಿಕ್ಷಕರು ಹಾಗೂ ಒಬ್ಬ ಎಸ್ಡಿಎಂಸಿ ಸದಸ್ಯ ಕಡ್ಡಾಯವಾಗಿ ರುಚಿ ನೋಡಿ ದೃಢೀಕರಣ ಮಾಡಬೇಕು ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕ ಶರಣಪ್ಪ ರಾವಣಕಿ ಮಾತನಾಡಿ, ಸಹಶಿಕ್ಷಕರು, ಮುಖ್ಯೋಪಾಧ್ಯಾಯರು, ಎಸ್ಡಿಎಂಸಿ ಹಾಗೂ ಅಡುಗೆದಾರರು ಸಮನ್ವಯದಿಂದ ಕೆಲಸ ನಿರ್ವಹಿಸಿದಾಗ ಅಕ್ಷರ ದಾಸೋಹ ಕಾರ್ಯಕ್ರಮ ಪರಿಣಾಮಕಾರಿ ಅನುಷ್ಠಾನ ಸಾಧ್ಯ ಎಂದರು.
ಅಗ್ನಿ ನಂದಕ ಪ್ರಾತ್ಯಕ್ಷಿಕೆ
ಕುಕನೂರು ಅಗ್ನಿ ಶಾಮಕ ಠಾಣೆಯ ಅಧಿಕಾರಿ ಸಂಗಪ್ಪ, ಮುತ್ತಪ್ಪ, ಅಡುಗೆದಾರರಿಗೆ ಅಗ್ನಿ ನಂದಕ ಬಳಸುವ ವಿಧಾನ, ಪಟ್ಟಣದ ಗ್ಯಾಸ್ ಏಜೆನ್ಸಿಯೊಂದರ ಸಿಬ್ಬಂದಿ ಗ್ಯಾಸ್ ಸ್ಟೌ ಬಳಸುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಅಡುಗೆದಾರರ ವೈಯಕ್ತಿಕ ಸ್ವಚ್ಛತೆ, ಅಡುಗೆ ಕೋಣೆ ಮತ್ತು ದಾಸ್ತಾನು ಕೊಠಡಿ ಶುಚಿತ್ವದ ಬಗ್ಗೆ ಮಾಹಿತಿ ನೀಡಿದರು.
ಪ್ರಾಚಾರ್ಯ ಸೋಮಶೇಖರ ನಿಲೋಗಲ್, ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥಯ್ಯ, ದೇವೇಂದ್ರಪ್ಪ ಬಗನಾಳ, ಶಿವಕುಮಾರ್ ಹೆಳವರ, ಶಿವನಗೌಡ ಪಾಟೀಲ, ಜಯಮ್ಮ, ರೇಣುಕಾ, ಬಸವರಾಜ ಕರಕನಗೌಡ್ರು ಇತರರಿದ್ದರು.