ಹೈದರಾಬಾದ್: ನಾಲೆಯೊಂದರಲ್ಲಿ ಮಹಿಳೆಯೊಬ್ಬರ ಕತ್ತರಿಸಿದ ಕಾಲು ತೇಲುತ್ತಿರುವುದನ್ನು ನೋಡಿ ಜನರು ಬೆಚ್ಚಿಬಿದ್ದಿರುವ ಘಟನೆ ಹೈದರಾಬಾದಿನ ಚಾಂಪಪೇಟ್ ಏರಿಯಾದಲ್ಲಿ ನಡೆದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಲನ್ನು ವಶಕ್ಕೆ ಪಡೆದಿದ್ದು ಮಹಿಳೆಯ ಶವಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪತ್ತೆಯಾಗಿರುವುದು ಮಹಿಳೆಯ ಎಡ ಭಾಗದ ಕಾಲು. ಚಾಂಪಪೇಟ್ನ ರೆಡ್ಡಿ ಕಾಲನಿ ನಾಲೆಯಲ್ಲಿ ತೇಲಿಬಂದಿದೆ. ಸಾಯಿದಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನಾಲೆಯ ಆಸು-ಪಾಸಿನಲ್ಲಿ ಹುಡುಕಾಟ ನಡೆಯುತ್ತಿದೆ. ಸುಮಾರು 3 ಗಂಟೆಗಳ ಕಾರ್ಯಾಚರಣೆ ನಡೆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಸದ್ಯ ಕಾಲನ್ನು ವಶಕ್ಕೆ ಪಡೆದಿದ್ದು, ಒಸ್ಮಾನಿಯಾ ಶವಗಾರಕ್ಕೆ ಕಳುಹಿಸಲಾಗಿದೆ.
ಶ್ವಾನ ದಳದಿಂದಲೂ ಸ್ಥಳಾ ತಪಾಸಣೆ ನಡೆಸಿ ತನಿಖೆ ಆರಂಭಿಸಲಾಗಿದೆ. ಮಹಿಳೆಗೆ ಸಂಬಂಧಿಸಿದ ಕಾಲು ಆಗಿದ್ದು, ಆಕಸ್ಮಿಕವಾಗಿ ನಾಲೆಗೆ ಕಾಲು ಜಾರಿ ಬಿದ್ದು ದುರಂತ ಸಂಭವಿಸಿರಬಹುದೆಂದು ನಂಬಿದ್ದಾರೆ. ಸುಳಿಯು ದೊರೆಯದೇ ಇರುವುದರಿಂದ ಪೊಲೀಸರು ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಸಮೀಪದ ಪೊಲೀಸ್ ಠಾಣೆಗಳಲ್ಲಿ ಯಾರಾದರೂ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆಯೇ? ಎಂಬುದನ್ನು ವಿಚಾರಿಸುತ್ತಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯಿಂದ ಮನೆಗೆ ಬರುವಾಗ ಗಂಡನ ಕಣ್ಣೆದುರಲ್ಲೇ ಪತ್ನಿ-ಮಗಳು ದುರ್ಮರಣ!
ಇನ್ನು ತೆರೆದ ನಾಲೆಗಳು ತುಂಬಾ ಅಪಾಯಕಾರಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅದರಲ್ಲೂ ಮಾನ್ಸೂನ್ ಕಾಲದಲ್ಲಿ ಜನರ ಬಲಿಗಾಗಿ ನಾಲೆಗಳು ಕಾದು ಕುಳಿತಿರುತ್ತವೆ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ. ಕಳೆದ ಕೆಲವು ದಿನಗಳಿಂದ ಹಲವೆಡೆ ಭಾರಿ ಮಳೆಯಾಗುತ್ತಿರುವುದರಿಂದ ನಾಲೆಗಳಲ್ಲಿ ನೀರಿನ ಪ್ರಮಾಣವೂ ಹೆಚ್ಚಾಗಿದೆ.
ಕೆಲವೇ ದಿನಗಳ ಹಿಂದೆ ತೆರೆದ ಚರಂಡಿಯಿಂದಾಗಿ ನೆರೆದ್ಮೆಟ್ನ 12 ವರ್ಷದ ಬಾಲಕಿ ಸುಮೇಧ ಮೃತಪಟ್ಟಿದ್ದಳು. ಸೈಕಲ್ ಸವಾರಿ ಮಾಡುತ್ತಾ ಮನೆಯನ್ನು ಬಿಟ್ಟ ಬಾಲಕಿ ಮರಳಿ ಬರಲೇ ಇಲ್ಲ. ಸಾಕಷ್ಟು ಹುಡುಕಾಟದ ಬಳಿಕ ಪಾಲಕರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಾಕಷ್ಟು ಶೋಧ ಕಾರ್ಯಗಳ ಬಳಿಕ ಚರಂಡಿಯೊಂದರ ಬಳಿ ಬೈಸಿಕಲ್ ಪತ್ತೆಯಾಗಿತ್ತು. ಇದೇ ಸುಳಿವಿನಿಂದ ಮತ್ತಷ್ಟು ಹುಡುಕಾಡಿದಾಗ ಬಾಲಕಿಯ ಮೃತದೇಹವು ಆಕೆಯ ಮನೆಯಿಂದ ಎರಡು ಕಿ.ಮೀ. ದೂರದಲ್ಲಿ ಪತ್ತೆಯಾಗಿತ್ತು.
ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಅಥವಾ ಎಡವಟ್ಟಿನಿಂದ ಏನೆಲ್ಲ ಅವಘಡಗಳು ಸಂಭವಿಸುತ್ತವೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ. (ಏಜೆನ್ಸೀಸ್)