ತುಮಕೂರು: ಬುಡಕಟ್ಟು ಜನಾಂಗದವರ ಗಂಜಿಗೂ ಕುತ್ತು ತಂದಿರುವ ಆರೋಪ ಎದುರಿಸುತ್ತಿರುವ ತಹಸೀಲ್ದಾರ್ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ತೇಜಸ್ವಿನಿ ವಿರುದ್ಧ ಚಿಕ್ಕನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಕೇದಿಗೆಹಳ್ಳಿ ಗ್ರಾಮದ ಗುಂಡು ತೋಪಿನಲ್ಲಿ ಅಲೆಮಾರಿ ಸಮುದಾಯದವರು ವಾಸವಿದ್ದ ಕಾಲನಿ ವ್ಯಾಪಕ ಮಳೆಯಿಂದ ಸಂಪೂರ್ಣ ಜಲಮಯವಾಗಿತ್ತು. ಈ ವೇಳೆ ಸರ್ಕಾರದ ವತಿಯಿಂದ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಗಂಜಿ ಕೇಂದ್ರ ತೆರೆದು ಅಲೆಮಾರಿ ಕುಟುಂಬಗಳನ್ನು ಅಲ್ಲಿ ಇರಿಸಲಾಗಿತ್ತು.
ನಂತರ ವಾತಾವರಣ ಸಹಜ ಸ್ಥಿತಿಗೆ ಬಂದ ಹಿನ್ನೆಲೆಯಲ್ಲಿ ಗಂಜಿ ಕೇಂದ್ರವನ್ನು ಬಿಟ್ಟು ಬೇರೆಡೆ ಹೋಗಲು ತಹಸೀಲ್ದಾರ್ ತೇಜಸ್ವಿನಿ ಸೂಚಿಸಿದ್ದರು. ಇದಕ್ಕೆ ನಿರಾಕರಿಸಿದ ಅಲೆಮಾರಿ ಸಮುದಾಯದವರು, ತಮಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ಒತ್ತಾಯಿಸಿದ್ದರು.
ಆದರೆ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದ ತಹಸೀಲ್ದಾರ್, ಕಚೇರಿ ಸಿಬ್ಬಂದಿ ಜತೆ ಬಂದು, ಕೂಡಲೇ ಗಂಜಿ ಕೇಂದ್ರ ಖಾಲಿ ಮಾಡುವಂತೆ ಅಲೆಮಾರಿ ಸಮುದಾಯಗಳ ವಿರುದ್ಧ ದೌರ್ಜನ್ಯ ಎಸಗಿದ್ದಾರೆಂದು ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಕಳೆದ ಡಿಸೆಂಬರ್ನಲ್ಲಿ ನಡೆದಿದ್ದ ಪ್ರಕರಣಕ್ಕೆ ಇಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಲ್ಲದೆ ದಲಿತ ಮಹಿಳೆಯ ತಂದೆಯ ಆಧಾರ ಕಾರ್ಡ್ ಬ್ಲ್ಯಾಕ್ಲಿಸ್ಟ್ಗೆ ಸೇರಿಸಿ, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ತಡೆಹಿಡಿಯುವುದಾಗಿಯೂ ತಹಸೀಲ್ದಾರ್ ಬೆದರಿಕೆ ಒಡ್ಡಿದ್ದರು ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಿಎಸ್ವೈ ಮೊಮ್ಮಗಳ ಆತ್ಮಹತ್ಯೆ: ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡ ಸೇರಿ ಹಲವರಿಂದ ಸಾಂತ್ವನ
ಠಾಣೆಗೇ ಬಂದಿತ್ತು ಎಸ್ಪಿ ಕಾರು: ಸರ್ಕಲ್ ಇನ್ಸ್ಪೆಕ್ಟರ್ಗೂ ಮುಳುವಾಯ್ತು ಎಸ್ಐ ದರ್ಬಾರು…