ನವದೆಹಲಿ: ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ರೈತ ಸಂಘಟನೆಗಳಿಂದ ಭಾರೀ ವಿರೋಧ ಎದುರಿಸುತ್ತಿದ್ದ ಮೂರು ವಿವಾದಿತ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಇಂದು ಸಂವಿಧಾನಾತ್ಮಕ ರೀತಿಯಲ್ಲಿ ರದ್ದುಗೊಳಿಸಿದೆ. ಈ ಕಾನೂನುಗಳ ರದ್ದತಿಗೆ ಮಂಡಿಸಲಾದ ಮಸೂದೆಯನ್ನು ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.
2020ರ ಆಗಸ್ಟ್ ತಿಂಗಳಿಂದ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಅನೇಕ ರೈತ ಸಂಘಟನೆಗಳು ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದವು. ಸಾವಿರಾರು ರೈತರು ದೆಹಲಿಯ ಗಡಿ ಭಾಗಗಳಲ್ಲಿ ಮೊಕ್ಕಾಂ ಹೂಡಿದ್ದರು. ಇದೇ ನ.20 ರಂದು ಪ್ರಧಾನಿ ನರೇಂದ್ರ ಮೋದಿ ಈ ಕಾನೂನುಗಳನ್ನು ವಾಪಸ್ ಪಡೆಯಲಾಗುವುದೆಂದು ಘೋಷಿಸಿ, ಪ್ರತಿಭಟನಾ ನಿರತ ರೈತರಿಗೆ ಮನೆಗಳಿಗೆ ವಾಪಸಾಗಲು ಹೇಳಿದ್ದರು.
ಇದನ್ನೂ ಓದಿ: “ರೈತರ ಏಳಿಗೆಗೆ ಹಿನ್ನಡೆ… ಕೃಷಿ ಸುಧಾರಣೆಗಳ ಬಾಗಿಲು ಮುಚ್ಚಿದ ಹಾಗಾಗಿದೆ”
ಇಂದು ಕೃಷಿ ಕಾಯ್ದೆಗಳ ರದ್ದತಿ ಮಸೂದೆ, 2021 ಅನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಯಲ್ಲಿ ಮಂಡಿಸಿದರು. ಮಸೂದೆಯನ್ನು ಮಂಡಿಸಿದಾಗ ಸಂಸತ್ ಅಧಿವೇಶನದಲ್ಲಿ ಶಾಂತಿ ಕಾಪಾಡುವಂತೆ ಸ್ಪೀಕರ್ ಓಂ ಬಿರ್ಲಾ ಮನವಿ ಮಾಡಿದರು. ಆದರೆ, ಮಸೂದೆ ಅಂಗೀಕರಿಸುವ ಮುನ್ನ ಚರ್ಚೆ ನಡೆಯಬೇಕೆಂದು ಪಟ್ಟು ಹಿಡಿದ ವಿರೋಧ ಪಕ್ಷಗಳ ಸಂಸದರು, ಘೋಷಣೆಗಳನ್ನು ಕೂಗುತ್ತಾ ಗದ್ದಲ ಎಬ್ಬಿಸಿದರು. ಗದ್ದಲದ ನಡುವೆಯೇ ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಧ್ವನಿಮತಗಳೊಂದಿಗೆ ಅಂಗೀಕರಿಸಲಾಯಿತು.
ಲೋಕಸಭೆಯಲ್ಲಿ ಈ ರದ್ದತಿ ಮಸೂದೆ ಅಂಗೀಕಾರವಾದ ನಂತರ ರಾಜ್ಯಸಭೆಯಲ್ಲೂ ಮಸೂದೆಯನ್ನು ಅಂಗೀಕರಿಸಲಾಯಿತು. ಇದೀಗ ಮೂರು ಕೃಷಿ ಕಾನೂನುಗಳು ಅಧಿಕೃತವಾಗಿ ರದ್ದಾಗಿವೆ. (ಏಜೆನ್ಸೀಸ್)
ಆರು ದಿನಗಳಲ್ಲಿ ಮೂರನೇ ಜೀವ ಬೆದರಿಕೆ! ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ ಎಂದ ಇ-ಮೇಲ್!
ಲಸಿಕೆಗೆ ಹೆದರಿ ಮನೆ ಮಾಳಿಗೆ ಏರಿದ! ಅಧಿಕಾರಿಗಳೂ ಏಣಿ ಹತ್ತಿದರು!