ವಿಶಾಖಪಟ್ಟಣಂ: ಶನಿವಾರ ವೈಜಾಗ್ನ ಹಿಂದೂಸ್ಥಾನ್ ಶಿಪ್ಯಾರ್ಡ್ ಲಿಮಿಟೆಡ್ (ಎಚ್ಎಸ್ಎಲ್) ನಲ್ಲಿ ನಡೆದ ಕ್ರೇನ್ ದುರಂತದಲ್ಲಿ ಮೃತಪಟ್ಟ ಸಂಬಂಧಿಯ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಒಂದು ಕುಟುಂಬದ ಮೂವರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಭಾನುವಾರ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ನಾಗಮಣಿ (48), ಸೊಸೆ ಲಾವಣ್ಯ (23) ಹಾಗೂ ಕಾರು ಚಾಲಕ ರೌಟು ದ್ವಾರಕ (23) ಎಂದು ಗುರುತಿಸಲಾಗಿದೆ. ಕ್ರೇನ್ ಅಪಘಾತದಲ್ಲಿ ಮೃತಪಟ್ಟ ನಾಗಮಣಿ ಅಳಿಯ ಪಿ. ಭಾಸ್ಕರ್ ರಾವ್ ಅಂತ್ಯಕ್ರಿಯೆಗೆ ಮೃತರು ವಿಶಾಖಪಟ್ಟಣಂಗೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಶ್ರೀಕಾಕುಳಂ ಜಿಲ್ಲೆಯ ಕಾಂಚಿಲಿಯಲ್ಲಿ ಸ್ಟೇಷನರಿ ತುಂಬಿದ ಟ್ರಕ್ ಹಿಂಬದಿಗೆ ಕಾರು ಗುದ್ದಿ ಅವಘಢ ಸಂಭವಿಸಿದೆ.
ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತೆಗೆ ಲೈಂಗಿಕ ದೌರ್ಜನ್ಯ, ಅಪರಿಚಿತ ವೈದ್ಯನಿಂದಲೇ ಹೀನಕೃತ್ಯ
ಅವಘಡದಲ್ಲಿ ನಾಗಮಣಿಯ ಇಬ್ಬರು ಗಂಡು ಮಕ್ಕಳು ಹಾಗೂ ಮತ್ತೊರ್ವ ಸೊಸೆ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಸೋಂಪೇಟ್ನ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶ್ರೀಕಾಕುಳಂಗೆ ದಾಖಲಿಸಲಾಯಿತು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಕ್ರೇನ್ ದುರಂತದಲ್ಲಿ ಅಳಿಯ ಮೃತಪಟ್ಟಿದ್ದಾನೆ ಎಂದು ತಿಳಿದ ತಕ್ಷಣವೇ ಕುಟುಂಬ ಪಶ್ಚಿಮಬಂಗಾಳದ ಖರಗ್ಪುರದಿಂದ ಹೊರಟಿದ್ದರು. ಆದರೆ, ಮಾರ್ಗ ಮಧ್ಯೆಯೇ ಮೂವರ ಪ್ರಾಣ ಹೋಗಿರುವುದು ದುರ್ದೈವದ ಸಂಗತಿ.
ಇನ್ನು ಶನಿವಾರ ಎಚ್ಎಸ್ಎಲ್ ಸಂಭವಿಸಿದ ಬೃಹತ್ ಕ್ರೇನ್ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು. ಇದರಲ್ಲಿ ನಾಲ್ವರು ಖಾಯಂ ನೌಕರರು ಹಾಗೂ 7 ಮಂದಿ ಗುತ್ತಿಗೆ ನೌಕರರು ಸಾವೀಗಿಡಾಗಿದ್ದರು. ಮೃತಪಟ್ಟ ಭಾಸ್ಕರ್ ರಾವ್ (35) ಮುಖ್ಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಕ್ರೇನ್ ದುರಂತದ ತನಿಖೆಗೆ ಆದೇಶಿಸಲಾಗಿದ್ದು, ತನಿಖಾ ಸಮಿತಿಯನ್ನು ರಚಿಸಲಾಗಿದೆ. ಅಲ್ಲದೆ, ಮೃತರಿಗೆ ತಲಾ 50 ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ. (ಏಜೆನ್ಸೀಸ್)
ಇದನ್ನೂ ಓದಿ: ಸಾವಿಗೂ ಮುನ್ನ ಕೊನೆ 2 ಗಂಟೆಯವರೆಗೆ ಸುಶಾಂತ್ ಮಾಡಿದ್ದೇನು?: ಪೊಲೀಸ್ ಆಯುಕ್ತರ ಕುತೂಹಲಕಾರಿ ಹೇಳಿಕೆ!
ಹಳಿಗಳ ಮೇಲೆ ಸೈಕಲ್ ಸವಾರಿ; ಆನಂದ್ ಮಹೀಂದ್ರಾ ಮೆಚ್ಚಿದ್ದಾರೆ ಈ ಸಂಶೋಧನೆ…!