ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕ್ಯಾಮರಾ ಟ್ರ್ಯಾಪ್ನಲ್ಲಿ ಸೆರೆಯಾದ ಮರಿ ಚಿರತೆಯೊಂದರ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಿ ಅದು ಬೆಂಗಳೂರಿನ ಬನಶಂಕರಿಯ ಆರನೇ ಹಂತದಲ್ಲಿ ಕೆಲ ಘಂಟೆಗಳ ಹಿಂದೆ ಕಾಣಿಸಿಕೊಂಡಿತು ಎಂದು ನಮೂದಿಸುತ್ತಿರುವುದರ ಕುರಿತು ತಜ್ಞರು ಸ್ಪಷ್ಟನೆ ನೀಡಿದ್ದಾರೆ.
‘‘ಈಗಷ್ಟೇ ಈ ಪ್ರಾಣಿ ಜನರ ಕಣ್ಣಿಗೆ ಬಿದ್ದಿದೆ, ಆ ಪ್ರದೇಶದಲ್ಲಿ ಓಡಾಡುವವರು ಜಾಗ್ರತೆಯಿಂದಿರಬೇಕು’’ ಎಂದೆಲ್ಲ ಈ ಫೋಟೋವನ್ನು ಫಾರ್ವರ್ಡ್ ಮಾಡುತ್ತಿರುವವರು ಎಚ್ಚರಿಸುತ್ತಿದ್ದಾರೆ. ಆದರೆ ಸತ್ಯ ಬೇರೆಯೇ ಇದೆ. ಆದನ್ನು ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ ಮಾಗಡಿ ಚಿರತೆ ಬೋನಿಗೆ ಬಿತ್ತು- ಇನ್ನೂ ಒಂದಿದೆ ಹಿಡೀರಿ ಅಂತಿದ್ದಾರೆ ಗ್ರಾಮಸ್ಥರು..
‘‘ಈ ಕ್ಯಾಮರಾ ಟ್ರ್ಯಾಪ್ ಚಿತ್ರವನ್ನು ನಾವು ಡಿಸೆಂಬರ್ 2019ರಲ್ಲಿ ತುಮಕೂರು ಜಿಲ್ಲೆಯ ಹೆಬ್ಬೂರು ಪ್ರದೇಶದಲ್ಲಿ ತೆಗೆದಿದ್ದೆವು. ಬೆಂಗಳೂರಿನ ಬನಶಂಕರಿಯಲ್ಲಿ ಅಲ್ಲ. ಈ ತರಹದ ಸುಳ್ಳು ಸುದ್ದಿಗಳು ಸಾರ್ವಜನಿಕರಲ್ಲಿ ಕಳವಳ ಮತ್ತು ಭೀತಿಯನ್ನುಂಟು ಮಾಡುತ್ತವೆ. ಜನರೂ ಆ ಪ್ರದೇಶದಲ್ಲಿರುವ ಚಿರತೆಗಳನ್ನು ಹಿಡಿಯಲು ಒತ್ತಡ ಹೇರಲಾರಂಭಿಸುತ್ತಾರೆ’’ ಎಂದು ಅವರು ಎಚ್ಚರಿಸಿದ್ದಾರೆ.
‘‘ಇತ್ತೀಚಿಗೆ ಸುಳ್ಳು ಸುದ್ದಿಗಳು ವನ್ಯಜೀವಿ ಮತ್ತು ಅವುಗಳ ಸಂರಕ್ಷಣೆಗೆ ಹಾನಿಕಾರವಾಗುತ್ತಿವೆ. ಈ ಸುಳ್ಳು ಸುದ್ದಿಗಳು ಚಿರತೆಗಳಿಗೂ ಸಾರ್ವಜನಿಕರಿಗೂ ಹಾನಿಕಾರಕ. ಹಾಗಾಗಿ ಈ ತರಹದ ಸುಳ್ಳು ಸುದ್ದಿಗಳನ್ನು ಯಾರೂ ಹರಡಬಾರದು’’ ಎಂದು ಅವರು ವಿನಂತಿಸಿದ್ದಾರೆ.