ಆನೇಕಲ್: ಇಲ್ಲೊಂದು ಮಾಜಿ ಸೈನಿಕರ ಕುಟುಂಬ ಭೂಗಳ್ಳರ ಹಾವಳಿಗೆ ಬೇಸತ್ತಿದೆ. ಇವರ ಮನೆಯಲ್ಲಿ ಹೆಣ್ಣು ಮಕ್ಕಳಿದ್ದು ರಾತ್ರಿಯಾದರೆ ನುಗ್ಗಿ ದಾಂದಲೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಭೂಮಿ ಕಬಳಿಕೆ ಹಿಂದಿರುವವರು ಯಾರು?
ಈ ಪ್ರಕರಣ ಬೆಳಕಿಗೆ ಬಂದಿರುವುದು ಆನೇಕಲ್ ತಾಲೂಕಿನ ಚಿಕ್ಕ ನೆಕ್ಕುಂದಿ ಗ್ರಾಮದಲ್ಲಿ. ಮಾಜಿ ಸೈನಿಕ ಎಂ.ರಾಮು ಕುಟುಂಬ ಭೂಗಳ್ಳರ ಹಾವಳಿಗೆ ಕಂಗಾಲಾಗಿದ್ದಾರೆ. ಮಾಜಿ ಸೈನಿಕ ರಾಮು 1982ರಲ್ಲಿ ಸೈನ್ಯದಲ್ಲಿದ್ದಾಗ ತಲೆಗೆ ಏಟಾಗಿ ನಿವೃತ್ತಿ ಪಡೆದಿದ್ದರು. ಅವರಿಗೆ ದರಕಾಸ್ತು ಮೂಲಕ ಭೂಮಿ ಸರ್ಕಾರದಿಂದ ಮಂಜೂರಾಗಿತ್ತು.
ಖಾತೆ ಮ್ಯುಟೇಷನ್ ಕೂಡ ಆಗಿ ರಾಮ ಕುಟುಂಬ ಜೀವನ ನಡೆಸುತ್ತಿದ್ದರು. ಮನೆ ನಿರ್ಮಾಣ ಮಾಡಿ ವ್ಯವಸಾಯ ಮಾಡಿಕೊಂಡಿದ್ದರು. 2013 ರಲ್ಲಿ ಮಾಜಿ ಸೈನಿಕ ರಾಮು ತೀರಿಕೊಂಡಿದ್ದರು. ಇದಾದ ಬಳಿಕ ಮಾಜಿ ಸೈನಿಕರ ಜಮೀನು ಕಬಳಿಸಲು ಕೆಲವರು ಹುನ್ನಾರ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಗಣೀಕೃತ ಪಹಣಿಯಲ್ಲಿ ಕೈತಪ್ಪಿ, ಸಾಗುವಳಿ ಖಾಲಂನಲ್ಲಿ ರಾಮು ಹೆಸರೇ ಬರುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಬಳಿ ಮಾಜಿ ಸೈನಿಕರ ಕುಟುಂಬದವರು ಅರ್ಜಿ ಸಲ್ಲಿಸಿದ್ದರು. ಈ ನಡುವೆ ಜಮೀನು ನಮಗೆ ಸೇರಿದ್ದು ಎಂದು ಪದೇ ಪದೇ ಕೆಲವರು ತೊಂದರೆ ಕೊಡುತ್ತಿದ್ದು ಮೂರು ವರ್ಷದಿಂದಲೂ ಮಾಜಿ ಸೈನಿಕರ ಕುಟುಂಬ ನಿರಂತರ ಹಿಂಸೆ ಅನುಭವಿಸುತ್ತಿದೆ. ಮಾಜಿ ಸೈನಿಕರ ಪತ್ನಿ ಲಕ್ಷ್ಮಿ ಎಂಬುವವರ ಮೇಲೆ ನೆನ್ನೆ ರಾತ್ರಿ ಲಾಂಗು ಮಚ್ಚಿನಿಂದ ಹಲ್ಲೆ ಕೂಡ ಮಾಡಲಾಗಿದೆ.
ಕೆಲ ಪುಡಿರೌಡಿಗಳು ಮನೆಗೆ ಹೋಗುವ ರಸ್ತೆಗೆ ಮಣ್ಣು ಸುರಿದು ಹಲ್ಲೆ ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ. ರಾಮು ತೀರಿಕೊಂಡ ಬಳಿಕ ಜಮೀನು ತನ್ನ ಹೆಸರಿಗೆ ಮಾಡಿಕೊಳ್ಳಲು ಪತ್ನಿ ವಿಳಂಬ ಮಾಡಿದ್ದು ಇದನ್ನೇ ದುರುಪಯೋಗ ಮಾಡಿಕೊಂಡಿರುವ ಕೆಲ ಪುಡಿರೌಡಿಗಳು ಭೂಮಿ ಕಬಳಿಸಲು ಮುಂದಾಗಿದ್ದಾರೆ ಎಂದು ಮಾಜಿ ಸೈನಿಕರ ಕುಟುಂಬದವರು ಆರೋಪಿಸಿದ್ದಾರೆ.
ಹೀಗೆಲ್ಲಾ ಮಾಡಿ ಭೂಮಿಯನ್ನು ಕಬಳಿಸುವ ಪ್ರಯತ್ನ, ಪವತಿ ಖಾತೆಗೆ ಹೋದಾಗ ನಕಲಿ ದಾಖಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಮಾಜಿ ಸೈನಿಕರ ಕುಟುಂಬ ಕಿರುಕುಳಕ್ಕೆ ಒಳಗಾಗಿದೆ. ಮಾಜಿ ಸೈನಿಕರ ಕುಟುಂಬ ಈಗ ನ್ಯಾಯ ಒದಗಿಸಲು ಕಣ್ಣೀರು ಸುರಿಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರ ಮನೆ ಬಳಿ ಬಂದು ಗುಂಪೊಂದು ತೊಂದರೆ ನೀಡುತ್ತಿದ್ದಾರೆ. ಈ ಕುಟುಂಬ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ಯಾವ ಕ್ರಮವನ್ನೂ ಪೊಲೀಸರು ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಡು ಕಷ್ಟದಲ್ಲೂ ಆಶಾಕಿರಣ:
ಇಷ್ಟೆಲ್ಲಾ ಕಷ್ಟದ ನಡುವೆ ಮಾಜಿ ಸೈನಿಕ ರಾಮು ಕುಟುಂಬದ ಪರವಾಗಿ ನಿವೃತ್ತ ಯೋಧರೊಬ್ಬರು ಸಹಾಯಕ್ಕೆ ನಿಂತಿದ್ದಾರೆ. ಅವರ ಮೂಲಕ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ನೊಂದ ಕುಟುಂಬದ ಪರ ನಿಂತಿದೆ. ನಿವೃತ್ತ ಯೋಧ ವೇಣು ಅವರಿಂದ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಮನವಿ ಸಲ್ಲಿಸಲಾಗಿದೆ.
ಎಲ್ಲಾ ದಾಖಲೆ ಇದ್ದರೂ ಸಹ ನಕಲಿ ದಾಖಲೆ ಸೃಷ್ಟಿ ಮಾಡಿ ಹುನ್ನಾರ ಎಂದು ಆರೋಪಿಸಲಾಗಿದ್ದು ವೇಣುಗೋಪಾಲ್ ಎಂಬುವವರಿಂದ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ ಎನ್ನಲಾಗಿದೆ. ವೇಣುಗೋಪಾಲ್,ಕೃಷ್ಣ, ಆಂಜಿ, ಮಹೇಶ್, ಹಾಗೂ ಬೇಬಿಶ್ರಿ ಎಂಬುವವರ ಮೇಲೆ ಗಂಭೀರ ಆರೋಪವನ್ನು ಹೊರಿಸಲಾಗಿದೆ.