ನವದೆಹಲಿ: 20 ವರ್ಷದ ಹಿಂದೆ ಮೃತಪಟ್ಟಿರುವುದಾಗಿ ವಂಚಿಸಿದ್ದ ಭಾರತೀಯ ನೌಕಾ ಪಡೆಯ ಮಾಜಿ ಉದ್ಯೋಗಿಯೊಬ್ಬನನ್ನು ಮೂರು ಕೊಲೆಗಳ ಆರೋಪದ ಮೇಲೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಾಲೇಶ್ ಕುಮಾರ್ (60) ಎಂಬ ಹೆಸರಿನ ಈ ವ್ಯಕ್ತಿ ಅಮನ್ ಸಿಂಗ್ ಎಂದು ಹೆಸರು ಬದಲಾಯಿಸಿಕೊಂಡು ನಜ್ಗಢದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಮನೆಯಿಂದಲೇ ಆತನನ್ನು ಬಂಧಿಸಲಾಗಿದೆ. ಒಂದು ಕೊಲೆ ಹಾಗೂ ಇಬ್ಬರನ್ನು ಜೀವಂತ ಸುಟ್ಟು ಹಾಕಿದ ಆರೋಪ ಬಾಲೇಶ್ ಮೇಲಿದೆ. ಬಾಲೇಶ್ 40 ವರ್ಷದವನಿದ್ದಾಗ ತನ್ನ ಭಾವ ರಾಜೇಶ್ ಆಲಿಯಾಸ್ ಖುಷಿರಾಂ ಎಂಬಾತನನ್ನು ಕೊಲೆ ಮಾಡಿದ್ದ. ಹಣಕಾಸಿನ ವಿಚಾರವಾಗಿ 2004ರಲ್ಲಿ ದೆಹಲಿಯ ಬವಾನಾ ಪ್ರದೇಶದಲ್ಲಿ ಈ ಕೊಲೆ ನಡೆದಿತ್ತು. ಆತ ರಾಜೇಶ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂದೂ ಹೇಳಲಾಗಿತ್ತು. ರಾಜೇಶ್ ಕೊಲೆಯಲ್ಲಿ ಒಳಗೊಂಡಿದ್ದ ಬಾಲೇಶ್ ಸೋದರ ಸುಂದರ್ ಲಾಲ್ನನ್ನು ಪೊಲೀಸರು 2004ರಲ್ಲಿ ಬಂಧಿಸಿದ್ದರು.
ಆದರೆ, ಬಾಲೇಶ್ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಆಗ ಸಾರಿಗೆ ವ್ಯವಹಾರ ನಡೆಸುತ್ತಿದ್ದ ಬಾಲೇಶ್ ಒಂದು ಟ್ರಕ್ನಲ್ಲಿ ರಾಜಸ್ಥಾನಕ್ಕೆ ಪಲಾಯನ ಮಾಡಿದ್ದ. ಅಲ್ಲಿ ಟ್ರಕ್ಗೆ ಬೆಂಕಿ ಹಚ್ಚಿ ತನ್ನ ಇಬ್ಬರು ಕಾರ್ಮಿಕರನ್ನು ಸುಟ್ಟು ಹಾಕಿದ್ದ. ಮೃತರಲ್ಲಿ ಒಬ್ಬಾತ ಬಾಲೇಶ್ ಎಂದು ರಾಜಸ್ಥಾನ ಪೊಲೀಸರು ನಿರ್ಧರಿಸಿದ್ದರು ಎಂದು ವಿಶೇಷ ಪೊಲೀಸ್ ಕಮಿಷನರ್ (ಕೆಂ) ರವೀಂದ್ರ ಯಾದವ್ ಹೇಳಿದ್ದಾರೆ. ಹೀಗಾಗಿ ರಾಜೇಶ್ ಕೊಲೆಯ ಪ್ರಮುಖ ಶಂಕಿತ ಮೃತಪಟ್ಟಿದ್ದಾನೆಂದು ಪ್ರಕರಣವನ್ನು ಅಂತ್ಯಗೊಳಿಸಲಾಗಿತ್ತು.