ಜೈಪುರ: ಉತ್ತರಪ್ರದೇಶದ ನೋಯ್ಡಾದಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಿದ ಆರೋಪದ ಮೇಲೆ ಹಿಂದಿ ಬಿಗ್ ಬಾಸ್ ಸೀಸನ್-2 ವಿನ್ನರ್ ಎಲ್ವಿಶ್ ಯಾದವ್ ಉತ್ತರಪ್ರದೇಶ ಪೊಲೀಸರು ಈವರೆಗೂ ಬಂಧಿಸದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇದೀಗ ಎಲ್ವಿಶ್ ಯಾದವ್ನನ್ನು ರಾಜಸ್ಥಾನದ ಕೋಟಾದಲ್ಲಿ ಬಂಧಿಸಿದ ಪೊಲೀಸರು ವಿಚಾರಣೆ ಬಳಿಕ ಬಿಟ್ಟು ಕಳುಹಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ನಡೆ ಸಾಕಷ್ಟು ಖಂಡನೆಗೆ ಗುರಿಯಾಗಿದೆ.
ಇದನ್ನೂ ಓದಿ: ಚುನಾವಣೆಯ ಹೊಸ್ತಿಲಲ್ಲಿ ನಿವೃತ್ತಿಯ ಮಾತುಗಳನ್ನಾಡಿದ ವಸುಂಧರಾ ರಾಜೇ; ಕಾರಣ ಹೀಗಿದೆ
ರಾಜಸ್ಥಾನದ ಕೋಟಾದಲ್ಲಿ ಚುನಾವಣೆ ಕರ್ತವ್ಯದ ವೇಳೆ ಪೊಲೀಸ್ ಅಧಿಕಾರಿಗಳೆ ಅನುಮಾನದ ಮೇರೆಗೆ ಎಲ್ವಿಶ್ ಯಾದವ್ ವಾಹನವನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಅನುಮಾನದ ಮೇರೆಗೆ ಆತನನ್ನು ವಶಕ್ಕೆ ಪಡೆದು ನೋಯ್ಡಾ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಅಲ್ಲಿನ ಪೊಲೀಸ್ ಅಧಿಕಾರಿಗಳು ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮೇಲಿರುವ ಆರೋಪಗಳು ಇನ್ನು ಸಾಬೀತಾಗಿಲ್ಲ ಬಂಧಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ. ವಿಚಾರಣೆ ನಡೆಸಿ ನೋಯ್ಡಾ ಪೊಲೀಸರ ಶಿಫಾರಸ್ಸಿನ ಮೇರೆಗೆ ಬಿಟ್ಟು ಕಳುಹಿಸಿದ್ದೇವೆ ಎಂದು ಕೋಟಾ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತ ರೇವ್ ಪಾರ್ಟಿಗೆ ಸಂಬಂಧಿಸಿದಂತೆ ಪ್ರಕರಣದ ಮುಖ್ಯ ಆರೋಪಿ ಎಲ್ವಿಶ್ ಯಾದವ್ ವಿರುದ್ಧ ಮಾಡಲಾಗಿರುವ ಆರೋಪಗಳು ಈವರೆಗೆ ಸಾಬೀತಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ರೇವ್ ಪಾರ್ಟಿಯಲ್ಲಿ ಎಲ್ವಿಶ್ ಪಾತ್ರದ ಕುರಿತು ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ಎಲ್ವಿಶ್ ವಿರುದ್ಧ ಸಾಕಷ್ಟು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದು, ಪ್ರಭಾವಿಗಳು ಈತನ ಬೆನ್ನಿಗೆ ನಿಂತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ.