ಕೊಚ್ಚಿ: ಕೇರಳದಲ್ಲಿಯೇ ಅತಿದೊಡ್ಡ ಮನೆ, ಅಲ್ಲ ‘ಅರಮನೆ’ಯನ್ನೇ ಕಟ್ಟಿರುವ ಉದ್ಯಮಿಯೊಬ್ಬರು ದುಬೈಯಲ್ಲಿ ಮೃತಪಟ್ಟಿದ್ದಾರೆ. ಆದರೆ, ಅವರ ದೇಹವನ್ನು ಭಾರತಕ್ಕೆ ತರಲಾಗುತ್ತಿಲ್ಲ. ನೋಡಿ ಇದೆಂಥ ದುಸ್ಥಿತಿ….
ಇಂಥದ್ದೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಲ್ಲಿದೆ ಫ್ಯಾಕ್ಟ್ಚೆಕ್.
ಜಾಯ್ ಅರಕ್ಕಲ್ (54) ಮುಖ್ಯ ಕಚೇರಿ ಹೊಂದಿರುವ ಇನ್ನೋವಾ ರಿಫೈನಿಂಗ್ ಆ್ಯಂಡ್ ಟ್ರೇಡಿಂಗ್ ಕಂಪನಿಯ ಸಂಸ್ಥಾಪಕರು. ಶಾರ್ಜಾ, ಯುಎಇ, ಸೌದಿ ಅರೇಬಿಯಾಗಳಲ್ಲಿ ಈ ಕಂಪನಿಯು ರಿಫೈನರಿಗಳನ್ನು ಹೊಂದಿದೆ. ಇದಲ್ಲದೇ, ವಾಹನೋದ್ಯಮ, ಕೈಗಾರಿಕೆ ಹಾಗೂ ಹಡಗುಗಳಿಗೆ ತೈಲೋತ್ಪನ್ನಗಳನ್ನು ಪೂರೈಸುತ್ತದೆ. ಇದಲ್ಲದೇ ಟ್ಯಾಂಕರ್, ಹಡಗುಗಳ ಮೂಲಕ ಪೂರೈಸಲಾಗುವ ತೈಲಗಳ ಸಂಗ್ರಹ ಹಾಗೂ ನಿರ್ವಹಣಾ ವ್ಯವಸ್ಥೆ ಹೊಂದಿದೆ. ಇದಕ್ಕಾಗಿ ಶಾರ್ಜಾ, ದುಬೈ, ದಮ್ಮಂ ಮೊದಲಾದ ಕಡೆ ಕಾರ್ಗೋ ಘಟಕಗಳನ್ನು ಸ್ಥಾಪಿಸಿದೆ. ಕೊಲ್ಲಿ ರಾಷ್ಟ್ರದಲ್ಲಿಯೇ ಸಾವಿರಾರು ಕೋಟಿಗಳ ಒಡೆಯರಾಗಿದ್ದಾರೆ ಜಾಯ್ ಅರಕ್ಕಲ್.
ಇನ್ನು, ಭಾರತದಲ್ಲಿ 11 ಕಂಪನಿಗಳ ನಿರ್ದೇಶಕ ಮಂಡಳಿಯಲ್ಲಿ ಜಾಯ್ ಸ್ಥಾನ ಪಡೆದಿದ್ದಾರೆ. ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ.
ಕೇರಳದ ವಯನಾಡ್ ಜಿಲ್ಲೆಯ ಮಾನಂದವಾಡಿ ಸಮೀಪದ ವರಾಯಲ್ ಗ್ರಾಮದವರಾದ ಜಾಯ್, ರೈತಾಪಿ ಕುಟುಂಬದ ಹಿನ್ನೆಯುಳ್ಳವರು. ಪಾರ್ಟ್ಟೈಮ್ ಜಾಬ್ ಮಾಡುತ್ತಲೇ ಜಾಯ್ ಶಿಕ್ಷಣ ಪಡೆದರು. ಕೊನೆಗೆ ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರದತ್ತ ಮುಖ ಮಾಡಿದರು. ಕೆಲ ಸಮಯದಲ್ಲಿಯೇ ಅಲ್ಲೊಂದು ಕಂಪನಿ ಆರಂಭಿಸಿ ಯಶಸ್ಸಿನ ಉತ್ತುಂಗಕ್ಕೇರಿದರು.
ಜಾಯ್ ಅರಕ್ಕಲ್ ಬಗ್ಗೆ ಭಾರಿ ಚರ್ಚೆಗಳು ಶುರುವಾಗಿದ್ದು, ಮಾನಂದವಾಡಿಯಲ್ಲಿ ಮನೆ ಕಟ್ಟಲು ಆರಂಭಿಸಿದಾಗ. ಅಂದಾಜು ಒಂದು ಎಕರೆಗೂ ಹೆಚ್ಚು ವಿಸ್ತೀರ್ಣವಿರುವ ಈ ಮನೆಯನ್ನು “ಅರಕ್ಕಲ್ ಪ್ಯಾಲೇಸ್” ಎಂದೇ ಕರೆಯಲಾಗುತ್ತದೆ. ಕೇರಳದಲ್ಲಿಯೇ ಅತ್ಯಂತ ದೊಡ್ಡ ಮನೆ ಎಂಬ ಖ್ಯಾತಿ ಇದಕ್ಕಿದೆ.
ಇಂಥ ಹಿನ್ನೆಲೆಯ ಜಾಯ್ ಅರಕ್ಕಲ್ ಏಪ್ರಿಲ್ 23 (ಗುರುವಾರ) ದುಬೈನಲ್ಲಿ ಮೃತಪಟ್ಟಿದ್ದಾರೆ. ತೀವ್ರ ಹೃದಯ ಸ್ತಂಭನದಿಂದ ಇವರ ಸಾವು ಸಂಭವಿಸಿದೆ ಹೊರತು ಇನ್ಯಾವ ಕಾರಣವೂ ಇಲ್ಲ. ಇವರಿಗೆ ಪತ್ನಿ ಸೆಲಿನಾ ಜಾಯ್ ಮಕ್ಕಳಾದ ಅರುಣ್ ಹಾಗೂ ಆಶ್ಲೇ ಇದ್ದಾರೆ.
ಸದ್ಯ ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಮೃತದೇಹವನ್ನು ಕೇರಳಕ್ಕೆ ತರಲು, ಅಲ್ಲಿಂದ ಮಾನಂದವಾಡಿಗೆ ಕೊಂಡೊಯ್ಯಲು ಕುಟುಂಬದವರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಕರೊನಾ…… ಎಲ್ಲೆಲ್ಲಿ ಹುಡುಕಲಿ ನಿನ್ನ, ಕೊಚ್ಚೆ ನೀರಿನ ಮೇಲೂ ಕಣ್ಣಿಟ್ಟಿದ್ದಾರೆ ವಿಜ್ಞಾನಿಗಳು