ಬೆಂಗಳೂರು : ಇತ್ತೀಚೆಗೆ ಸಿಬಿಐ ಹಾಗೂ ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ಉದ್ಯಮಿಗಳನ್ನು ಹೆದರಿಸಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಇಬ್ಬರು ದುಷ್ಕರ್ಮಿಗಳು ಸಿಕ್ಕಿಬಿದ್ದಿದ್ದರು. ಇದೀಗ ಈ ಕೃತ್ಯದ ಹಿಂದೆ ಇದ್ದ ಎನ್ನಲಾದ ಎನ್ಫೋರ್ಸ್ಮೆಂಟ್ ಡೈರೆಕ್ಟೊರೇಟ್(ಇಡಿ)ನ ಅಧಿಕಾರಿಯೊಬ್ಬನನ್ನು ಬುಧವಾರ ಸಿಬಿಐ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ಇನ್ಸ್ಪೆಕ್ಟರ್ ಮಟ್ಟದ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲಲಿತ್ ಬಜಾಡ್ ಎಂಬುವನೇ ಬಂಧಿತ ಅಧಿಕಾರಿ. ಬಂಧನದ ನಂತರ ಬಜಾಡ್ನನ್ನು ಇಡಿ ಕಚೇರಿಗೆ ಕರೆದುಕೊಂಡು ಹೋಗಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐ ಜಪ್ತಿ ಮಾಡಿದೆ. ಈತನ ಹಿಂದೆ ಇಡಿಯ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ನಿಕಿತಾ ತೋಮರ್ ಹತ್ಯೆ : ಇಬ್ಬರು ಯುವಕರನ್ನು ಅಪರಾಧಿಗಳೆಂದು ಘೋಷಿಸಿದ ಕೋರ್ಟ್
ಕೆಲವು ದಿನಗಳ ಹಿಂದೆ, ಇಡಿ, ಸಿಬಿಐನಿಂದ ದಾಳಿ ನಡೆಸುವುದಾಗಿ ಉದ್ಯಮಿಗೆ ಬೆದರಿಸಿ 2 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ನಗರದ ಇಡಿ ಕಚೇರಿಯಲ್ಲಿ ಮಲ್ಟಿ ಟಾಸ್ಕಿಂಗ್ ಆಫೀಸರ್ (ಡಿ ದರ್ಜೆ ನೌಕರ ) ಆಗಿದ್ದ ಡಿ.ಚೆನ್ನಕೇಶವುಲು ಮತ್ತು ಶಾಸಕರೊಬ್ಬರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಈತನ ಸ್ನೇಹಿತ ವೀರೇಶ್ಅನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಈ ಇಬ್ಬರು ಆರೋಪಿಗಳ ವಿಚಾರಣೆ ನಡೆಸಿದಾಗ ಇಡಿ ಇನ್ಸ್ಪೆಕ್ಟರ್ ಲಲಿತ್ ಬಜಾಡ್ ಸೂಚನೆ ಮೇರೆಗೆ ಈ ಕೃತ್ಯ ಎಸಗುತ್ತಿದ್ದ ಸಂಗತಿ ಬಯಲಾಗಿದೆ.
‘ಸದನದ ಘನತೆ ಹರಾಜು ಹಾಕುವುದು ತಪ್ಪು’ : ಸುಧಾಕರ್ ಹೇಳಿಕೆಗೆ ಶಾಸಕಿಯರ ಅಸಮಾಧಾನ