ನವದೆಹಲಿ: ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ಸೋನಿಯಾ ಗಾಂಧಿಯವರ ಆಪ್ತ, ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ರನ್ನು ಶನಿವಾರ ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ಮಧ್ಯಾಹ್ನ 12 ಗಂಟೆಗೆ ಪಟೇಲ್ ನಿವಾಸಕ್ಕೆ ಆಗಮಿಸಿದ ಅಧಿಕಾರಿಗಳ ತಂಡ ರಾತ್ರಿ 8 ಗಂಟೆಯವರೆಗೆ ಸತತವಾಗಿ ವಿಚಾರಣೆ ನಡೆಸಿತು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅಹ್ಮದ್ ಪಟೇಲ್, ಭಾರತ-ಚೀನಾ ಬಿಕ್ಕಟ್ಟಿನಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಈ ದಾಳಿ ಮಾಡಿಸಿದೆ ಎಂದು ಆರೋಪಿಸಿದರು.
ಇದನ್ನೂ ಓದಿ ಕರೊನಾದಷ್ಟೇ ಮಾರಕವಾಗಿದ್ದ ಈ ಕಾಯಿಲೆ ಕೊನೆಗೂ ತೊಲಗಿದೆ…!
ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಮತ್ತು ಸ್ಟರ್ಲಿಂಗ್ ಸಮೂಹದ ಪ್ರಮುಖ ಪ್ರವರ್ತಕರಾದ ಸಂದೇಸರ ಸಹೋದರರನ್ನು ಒಳಗೊಂಡ ಪ್ರಕರಣ ಇದಾಗಿದೆ. ಇ.ಡಿ.ಯ ಮೂವರು ಅಧಿಕಾರಿಗಳು ದೆಹಲಿಯಲ್ಲಿ ಪಟೇಲ್ ಮನೆಗೆ ತೆರಳಿ ಅಕ್ರಮ ಹಣ ವರ್ಗಾವಣೆ ತಡೆ ಕಾನೂನು (ಪಿಎಂಎಲ್ಎ) ಅನ್ವಯ ಅವರ ಹೇಳಿಕೆ ದಾಖಲಿಸಿಕೊಂಡರು. ಹಿಂದೆಯೂ ಎರಡು ಬಾರಿ ವಿಚಾರಣೆಗೆ ಹಾಜರಾಗಲು ಅಹ್ಮದ್ಗೆ ಇ.ಡಿ. ನೋಟಿಸ್ ನೀಡಿತ್ತು. ಆದರೆ ಲಾಕ್ಡೌನ್ ಕಾರಣ ನೀಡಿ ಅವರು ಹಾಜರಾಗಿರಲಿಲ್ಲ.
ಸ್ಟರ್ಲಿಂಗ್ ಬಯೋಟೆಕ್ ನಡೆಸಿದ ಬಹುಕೋಟಿ ಬ್ಯಾಂಕ್ ವಂಚನೆ ಸಂಬಂಧ ಚೇತನ್ ಹಾಗೂ ನಿತಿನ್ ಸಂದೇಸರ, ಇತರ ಹಲವರ ವಿರುದ್ಧ ತನಿಖೆ ನಡೆಯುತ್ತಿದೆ. ಆಂಧ್ರ ಬ್ಯಾಂಕ್ ನೇತೃತ್ವದ ಬ್ಯಾಂಕ್ಗಳ ಕೂಟದಿಂದ ಕಂಪನಿ ಪಡೆದ ಸಾಲಗಳನ್ನು ಮರುಪಾವತಿ ಮಾಡದ್ದರಿಂದ ಅದು ಮರಳಿ ಬಾರದ ಸಾಲ (ಎನ್ಪಿಎ) ಎಂದು ಪರಿಗಣಿಸಲಾಗಿತ್ತು. ಸಿಬಿಐ ಸಲ್ಲಿಸಿದ ದೂರಿನ ಮೇರೆಗೆ ಸಲ್ಲಿಸಲಾದ ಮೂಲ ಆರೋಪ ಪಟ್ಟಿಯಲ್ಲಿ ಇದನ್ನು ನಮೂದಿಸಲಾಗಿದೆ.
ತೀವ್ರಗೊಂಡ ಕರೊನಾ: ಸತ್ತವರ ಅಂತ್ಯಕ್ರಿಯೆಗೆ ಹೆಚ್ಚಿನ ಜಾಗ ಗುರುತಿಸಲು ಸೂಚನೆ