ಬೆಂಗಳೂರು: ಬಹಳ ವರ್ಷಗಳ ನಂತರ ದಿಗಂತ್ ಹಾಗೂ ಐಂದ್ರಿತ ರೇ ಜತೆಯಾಗಿ ನಟಿಸಿರುವ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಚಿತ್ರೀಕರಣ ಕಳೆದ ತಿಂಗಳೇ ಮುಗಿದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ.
ಚಿತ್ರದ ಎಡಿಟಿಂಗ್ ಕೆಲಸಗಳು ಈಗಾಗಲೇ ಮುಗಿದಿದ್ದು, ಪ್ರಜ್ವಲ್ ಪೈ ಅವರ ಸ್ಟುಡಿಯೋದಲ್ಲಿ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಅದರ ಮೊದಲ ಹಂತವಾಗಿ, ಹಿರಿಯ ನಟಿ ಉಮಾಶ್ರೀ ಅವರು ಡಬ್ಬಿಂಗ್ ಮಾಡಿದ್ದು, ತಮ್ಮ ಭಾಗವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಸದ್ಯದಲ್ಲೇ ಬೇರೆ ನಟ-ನಟಿಯರು ಸಮ ತಮ್ಮ ಭಾಗದ ಡಬ್ಬಿಂಗ್ ಕೆಲಸಗಳನ್ನು ಮುಗಿಸಲಿದ್ದಾರೆ.
ಇದನ್ನೂ ಓದಿ: ‘ರಾಬರ್ಟ್’ ಟ್ರೇಲರ್ಗೆ ಕಾಯ್ತಿದ್ದಾರೆ ದರ್ಶನ್ ಫ್ಯಾನ್ಸ್ …
ಈ ಚಿತ್ರವನ್ನು ಪತ್ರಕರ್ತ ವಿನಾಯಕ ಕೊಡ್ಸಾರ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಅವರೇ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ. ದಿಗಂತ್ ಈ ಚಿತ್ರದಲ್ಲಿ ಮಲೆನಾಡಿನ ಅಡಿಕೆ ಬೆಳೆಗಾರ ಮತ್ತು ಗೊಬ್ಬರದ ಅಂಗಡಿಯ ಮಾಲೀಕನಾಗಿ ಅಭಿನಯಿಸಿದ್ದಾರೆ. ಅವನ ಜೀವನದಲ್ಲಿ ನಡೆಯುವ ಹಲವು ಘಟನೆಗಳನ್ನು ಆಧರಿಸಿ ಈ ಚಿತ್ರ ಮಾಡಲಾಗುತ್ತಿದೆ.
ಮೂಲತಃ ಮಲೆನಾಡಿನ ತೀರ್ಥಹಳ್ಳಿಯವರಾದ ದಿಗಂತ್ ಅವರಿಗೆ ಮಲೆನಾಡಿನ ಭಾಗದಲ್ಲಿ ಚಿತ್ರೀಕರಣ ಮಾಡಿದ್ದು ತುಂಬಾ ಖುಷಿಯ ವಿಚಾರವಂತೆ. ‘ಈ ಚಿತ್ರದ ಕಥೆ ನನಗೆ ಬಹಳ ಇಷ್ಟವಾಯಿತು. ಟಿಪಿಕಲ್ ಮಲೆನಾಡಿನ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಏಳು ವರ್ಷಗಳ ನಂತರ ಐಂದ್ರಿತಾ ರೇ ಜತೆಗೆ ನಟಿಸುತ್ತಿದ್ದೇನೆ. ನಾವು ಮದುವೆಯಾದ ಮೇಲೆ ನಮ್ಮಿಬ್ಬರ ಅಭಿನಯದಲ್ಲಿ ಚಿತ್ರ ಮಾಡುವುದಕ್ಕೆ ಹಲವರು ಬಂದರು. ಆದರೆ, ಕಥೆಗಳು ಇಷ್ಟ ಆಗುತ್ತಿರಲಿಲ್ಲ. ಈ ಚಿತ್ರದಲ್ಲಿ ಐಂದ್ರಿತಾಗೆ ಬಹಳ ಒಳ್ಳೆಯ ಪಾತ್ರವಿದೆ. ಈ ಪಾತ್ರ ನೀನೇ ಮಾಡಿದರೆ ಚೆನ್ನ ಎಂದು ಹೇಳಿದ್ದೆ. ಅದಕ್ಕೆ ಸರಿಯಾಗಿ ಅವರೂ ಒಪ್ಪಿ ಈ ಚಿತ್ರದಲ್ಲಿ ನಟಿಸಿದ್ದಾರೆ’ ಎನ್ನುತ್ತಾರೆ ದಿಗಂತ್.
ಇದನ್ನೂ ಓದಿ: ಸುಶಾಂತ್ ಸಿಂಗ್ ಸೋದರಿ ಪ್ರಿಯಾಂಕಾ ವಿರುದ್ಧ ಸಿಬಿಐ ತನಿಖೆಗೆ ಕೋರ್ಟ್ ಅಸ್ತು
ಈ ಚಿತ್ರದಲ್ಲಿ ದಿಗಂತ್ ಅಲ್ಲದೆ ಐಂದ್ರಿತಾ ರೇ, ‘ಕನ್ನಡತಿ’ ಖ್ಯಾತಿಯ ರಂಜಿನಿ ರಾಘವನ್, ಉಮಾಧ್ರೀ, ರವಿಕಿರಣ್, ಕಾಸರಗೋಡು ಚಿನ್ನ, ಪಿ.ಡಿ. ಸತೀಶ್ ಹಾಗೂ ನೀನಾಸಂನ ಹಲವು ಕಲಾವಿದರು ನಟಿಸಿದ್ದು, ಸಾಗರ, ಸಿಗಂದೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.
ಉಪ್ಪಿ ಎಂಟರ್ ಟೈನರ್ ಲಾಂಛನದಲ್ಲಿ ಸಿಲ್ಕ್ ಮಂಜು ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪ್ರಜ್ವಲ್ ಪೈ ಅವರ ಸಂಗೀತ ನಿರ್ದೇಶನವಿದೆ. ರವೀಂದ್ರ ಜೋಶಿ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದರೆ, ನಂದ ಕಿಶೋರ್ ಎನ್ ರಾವ್ ಛಾಯಾಗ್ರಹಣ ಮಾಡಿದ್ದಾರೆ.
ಕನ್ನಡ ಬಿಗ್ಬಾಸ್-8 ಆರಂಭಕ್ಕೆ ಮುಹೂರ್ತ ನಿಗದಿಪಡಿಸಿದ ಕಿಚ್ಚ ಜೋಯಿಸರು!