ಬೆಂಗಳೂರು: ‘ನಾನೊಬ್ಬ ವಿಜ್ಞಾನಿ. ನಾನು ಡ್ರೋನ್ ತಯಾರಿಸಿದ್ದೇನೆ’ ಎಂದು ಹೇಳಿಕೊಂಡು, ಕನ್ನಡಿಗರನ್ನು ದೇಶ-ವಿದೇಶಿಗರು, ದೊಡ್ಡ ದೊಡ್ಡ ರಾಜಕಾರಣಿಗಳನ್ನು, ಮಾಧ್ಯಮಗಳನ್ನೂ ಯಾಮಾರಿಸಿ ಭಾರೀ ಸುದ್ದಿಯಾಗಿದ್ದ ಮಂಡ್ಯ ಮೂಲದ ಯುವಕ ಪ್ರತಾಪ್(ಡ್ರೋನ್ ಪ್ರತಾಪ್). ಈತನ ವಿರುದ್ಧ ಹಲವು ಕೇಸ್ಗಳೂ ದಾಖಲಾಗಿದ್ದವು. ಕೆಲಕಾಲ ತಲೆ ಮರೆಸಿಕೊಂಡಿದ್ದ ಪ್ರತಾಪ್, ಕೊನೆಗೆ ಪೊಲೀಸರಿಂದ ವಿಚಾರಣೆಯನ್ನೂ ಎದುರಿಸಿದ್ದ. ಬಳಿಕ ಎರಡು ವರ್ಷ ಸದ್ದಿಲ್ಲದಂತೆ ಮಾಯವಾಗಿದ್ದ ಪ್ರತಾಪ್, ಇದೀಗ ಮತ್ತೆ ಪ್ರತ್ಯಕ್ಷವಾಗಿದ್ದು, ತಾನೊಂದು ಕಂಪನಿ ಸ್ಟಾರ್ಟ್ ಮಾಡುತ್ತಿರುವುದಾಗಿ ಘೋಷಿಸಿದ್ದಾನೆ.
ಇಂದು(ನ.10) ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದ ಪ್ರತಾಪ್, ‘ಎಲ್ಲರೂ ನನ್ನನ್ನು ಗೇಲಿ ಮಾಡ್ತಿದ್ರು. ನಾನು ಡ್ರೋನ್ ಕಂಡು ಹಿಡಿಯಲ್ಲ ಎಂದು. ಆಡಿಕೊಳ್ಳೋರು ಆಡಿಕೊಳ್ಳಲಿ. ಕಮೆಂಟ್ ಮಾಡೋರು ಮಾಡಲಿ. ನೀವು ಟ್ರೋಲ್ ಅನ್ನು ಕಂಟಿನ್ಯೂ ಮಾಡಿ. ನಾನು ನನ್ನ ಕೆಲಸ ಕಂಟಿನ್ಯೂ ಮಾಡ್ತೀನಿ. ಟ್ರೋಲಿಗರಿಗೆ ದೇವರು ಒಳ್ಳೇದು ಮಾಡಲಿ. ಗೇಲಿ ಮಾಡೋರಿಗೆ ನಾನು ನನ್ನ ಕೆಲಸ ಮೂಲಕವೇ ಉತ್ತರ ನೀಡುತ್ತೇನೆ’ ಎಂದು ಶಪಥ ಮಾಡುತ್ತಲೇ ಹೊಸ ಕಂಪನಿ ಬಗ್ಗೆ ಮಾಹಿತಿ ನೀಡಿದ್ದಾನೆ.
ಇನ್ಸ್ಟಾಗ್ರಾಂ ಲೈವ್ನಲ್ಲಿ ಪ್ರತಾಪ್ ಹೇಳಿದ್ದೇನು?: ‘ಹಾಯ್.. ಹಾಯ್.. ಎಲ್ರಿಗೂ ನಮಸ್ಕಾರ, ಎಲ್ರೂ ಹೇಗಿದ್ದೀರಾ? ಕನ್ನಡಿಗರಿಗೆ ನಮಸ್ಕಾರ. ನಾನಿವತ್ತು ಇಂಪಾರ್ಟೆಂಟ್ ವಿಷ್ಯ ಅನೌನ್ಸ್ ಮಾಡ್ತಿದ್ದೀನಿ. ‘ಟುನಾರ್ಕ್ ಏರೋಸ್ಪೇಸ್’ ಎಂಬ ಕಂಪನಿ ಶುರು ಮಾಡ್ತಿದ್ದೀನಿ. ಬೆಂಗಳೂರು, ಪುಣೆ, ನಾಸಿಕ್, ಸೇರಿದಂತೆ ನಾಲ್ಕು ಸ್ಥಳಗಳನ್ನ ಕೇಂದ್ರೀಕರಿಸಿದ್ದೇವೆ. ಅಗ್ರಿಕಲ್ಚರಲ್ ಡ್ರೋನ್ ತಯಾರಿಸಲು ನಮಗೆ ಆಗಲೇ ಆರ್ಡರ್ಸ್ ಬಂದಿದೆ. ಡ್ರೋನ್ ಇಂಡಸ್ರ್ಟಿಯಲ್ಲಿ ಕೆಲಸ ಮಾಡುತ್ತಿರುವವರನ್ನ ನಮ್ಮ ಕಂಪನಿಗೆ ಸೇರಿಸಿಕೊಳ್ತಿದ್ದೀವಿ. ಯಾರಿಗೆಲ್ಲ ಆಸಕ್ತಿ ಇದೆ ಅಗ್ರಿಕಲ್ಚರ್ ಡ್ರೋನ್ ಬಗ್ಗೆ ಅವರೆಲ್ಲರೂ ನಮ್ಮ ಕಂಪನಿಯನ್ನ ಸಂಪರ್ಕಿಸಬಹುದು. ಆಸಕ್ತಿವುಳ್ಳವರು ಡ್ರೋನ್ ಅನ್ನು ಖರೀದಿಸಬಹುದು ಮತ್ತು ಬಾಡಿಗೆಗೆ ಪಡೆಯಬಹುದು’ ಎಂದು ಪ್ರತಾಪ್ ಹೇಳಿದ್ದಾನೆ.
‘ಈಗಾಗಲೇ 2 ರೀತಿಯ ಡ್ರೋನ್ ತಯಾರಿಸಿದ್ದೇವೆ. ಮೊದಲ ಡ್ರೋನ್ 10 ಲೀಟರ್ ಸಮಾರ್ಥ್ಯದ್ದು. ಇನ್ನೊಂದು 16 ಲೀಟರ್ ಸಾಮಾರ್ಥ್ಯದ ಡ್ರೋನ್. ಸದಸ್ಯದಲ್ಲೇ 25 ಲೀಟರ್ ಸಾಮರ್ಥ್ಯದ ಡ್ರೋನ್ ತಯಾರು ಮಾಡ್ತೀವಿ. ನಾನು ಡ್ರೋನ್ ಕಂಡು ಹಿಡಿಯಲ್ಲ ಅಂತ ಎಲ್ರೂ ನನ್ನನ್ನು ಗೇಲಿ ಮಾಡ್ತಿದ್ರು. ಆಡಿಕೊಳ್ಳೋರು ಆಡಿಕೊಳ್ಳಲಿ. ಕಮೆಂಟ್ ಮಾಡೋರು ಮಾಡಲಿ. ಗೇಲಿ ಮಾಡೋರು ಗೇಲಿ ಮಾಡಲಿ. ಟ್ರೋಲ್ ಮಾಡೋರು ಟ್ರೋಲ್ ಮಾಡೋದನ್ನೇ ಕಂಟಿನ್ಯೂ ಮಾಡಿ. ನಾನು ನನ್ನ ಕೆಲಸ ಕಂಟಿನ್ಯೂ ಮಾಡ್ತೀನಿ. ನಿಮಗೆಲ್ಲಾ ದೇವರು ಒಳ್ಳೇದು ಮಾಡಲಿ. ನಾನು ನನ್ನ ಕೆಲಸದ ಮೂಲಕವೇ ನಿಮಗೆಲ್ಲಾ ಉತ್ತರ ನೀಡುತ್ತೇನೆ. ನಾನು ಹೊಸ ಕಂಪನಿ ಶುರು ಮಾಡಿದ್ದೀನಿ. ಈ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಕೂಡ ನಾನೇ. ಇದನ್ನು ಅನೌನ್ಸ್ ಮಾಡಬೇಕಿತ್ತು. ಅದಕ್ಕೆ ಇಂದು ಇನ್ಸ್ಟಾಗ್ರಾಂ ಲೈವ್ ಬಂದೆ. ನನ್ನ ಫಾಲೋವರ್ಸ್ಗಳು ನನಗೆ ಸಹಕರಿಸ್ತಾರೆ’ ಎಂದು ಪ್ರತಾಪ್ ಹೇಳಿದ್ದಾನೆ.
ವಾರದ ಹಿಂದೆಯೇ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರತ್ಯಕ್ಷವಾಗಿದ್ದ ಪ್ರತಾಪ್, ಈ ಬಾರಿ ಹೊಸದಾಗಿ ಏನೋ ಪ್ರಾರಂಭಿಸುತ್ತಿರುವಂತೆ ಫೋಟೋವೊಂದನ್ನು ಹಾಕಿ ಮುನ್ಸೂಚನೆ ನೀಡಿದ್ದ. “ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯಲು ಪ್ರಾರಂಭಿಸುತ್ತವೆ” ಎಂದು ಅಡಿಬರಹ ಹಾಕಿ ಫೋಟೋ ಅಪ್ಲೋಡ್ ಮಾಡಿದ್ದ. ಟೇಬಲ್ ಮೇಲೊಂದು ಲ್ಯಾಪ್ಲಾಪ್ ಇಟ್ಟು, ಅದಕ್ಕೆ ಡಾಟಾ ಕೇಬಲ್ ಅವಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡು, ಎರಡು ಕೈಗಳಿಗೆ ಹಳದಿ ಬಣ್ಣದ ರಕ್ಷಾ ಕವಚ ಹಾಗೂ ಕಣ್ಣಿಗೆ ಸುರಕ್ಷಿತ ಕನ್ನಡಕ ಧರಿಸಿ, ಒಂದು ಕೈಯಲ್ಲಿ ಸಾಲ್ಡರಿಂಗ್ ಮಷಿನ್ ಹಿಡಿದು ನಗುತ್ತಾ ಕ್ಯಾಮರಾಗೆ ಪೋಸ್ ನೀಡಿದ್ದ. ಟೇಬಲ್ ಮೇಲೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳಿದ್ದವು. ಟೇಬಲ್ನ ಒಂದು ಬದಿಯಲ್ಲಿ ಡ್ರೋನ್ ಕ್ಯಾಮರಾದ ಅರ್ಧ ಚಿತ್ರ ಕಾಣುತ್ತಿತ್ತು. ಈ ಫೋಟೋ ನೋಡಿದ ನೆಟ್ಟಿಗರು, ಇನ್ಸ್ಟಾಗ್ರಾಂ ಖಾತೆಯಲ್ಲಿ ಬಗೆಬಗೆಯ ಕಮೆಂಟ್ಗಳೊಂದಿಗೆ ಕಾಲೆಳೆಯುತ್ತಲೇ ಇದ್ದರು.
ಇಂದು(ಗುರುವಾರ) ಇನ್ಸ್ಟಾಗ್ರಾಂನಲ್ಲಿ ಹೊಸ ಕಂಪನಿಯ ಪೂಜೆ ಮಾಡಿರುವ ರೀತಿಯಲ್ಲಿ ಫೋಟೋವೊಂದನ್ನು ಹಾಕಿ ಲೈವ್ಗೆ ಬಂದಿದ್ದ ಪ್ರತಾಪ್, ತಾನೊಂದು ಕಂಪನಿ ಆರಂಭಿಸುತ್ತಿರುವುದಾಗಿ ಘೋಷಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ತರೇಹವಾರಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಶುಭವಾಗಲಿ ಎಂದರೆ ಹಲವರು ಟೀಕಿಸಿದ್ದಾರೆ. ‘ಅಣ್ಣ ಬಂದ ಅಣ್ಣ ಬಂದ…’. ‘ಕುಕ್ಕರ್ನ 3 ವಿಸಿಲ್ ಆಯ್ತು ಅನ್ಸುತ್ತೆ, ಹೋಗಿ ಗ್ಯಾಸ್ ಆಫ್ ಮಾಡು ಅಣ್ಣ’. ‘ಇಲ್ಲೆಲ್ಲಾದಾರು ಸುಟ್ಟು ವಾಸನೆ ಬರ್ತಿದೀಯಾ’. ‘ಈ ಸಲ ನೀನು ಈ ದೇಶದಲ್ಲಿ ನಿನ್ನ ಹೆಸರು ಅಚ್ಚಳಿಯದ ಹಾಗೆ ಮತ್ತೊಮ್ಮೆ ಬೌನ್ಸ್ ಬ್ಯಾಕ್ ಆಗಿ ಬೆಳೆಯಿರಿ’. ‘ಛಲ ಬಿಡದ ಪ್ರತಾಪ’… ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
View this post on Instagram
ನಟ ಜಗ್ಗೇಶ್ ಅವರಿಂದ ಹಿಡಿದು ಅನೇಕರು ಘಟಾನುಘಟಿಗಳು ಡ್ರೋನ್ ಪ್ರತಾಪ್ಗೆ ಹಣದ ನೆರವು ನೀಡಿದ್ದರು. ಆದರೆ, ಆತ ಯುವ ವಿಜ್ಞಾನಿಯಲ್ಲ ನಕಲಿ ವಿಜ್ಞಾನಿ, ಆತ ಎಲ್ಲರ ಕಿವಿಗೆ ಹೂ ಇಟ್ಟಿದ್ದಾನೆ ಅಂತಾ ಗೊತ್ತಾದಾಗ ಆತನನ್ನು ನಂಬಿದ್ದ ಅದೇ ಜನ ಯಾರನ್ನು ನಂಬೋದು ಅಂತಾ ಬೇಸರಪಟ್ಟುಕೊಂಡು ಹಿಡಿಶಾಪ ಹಾಕಿದ್ದರು. ಕರ್ನಾಟಕದ ಜನ ಇಂದಿಗೂ ಈತನನ್ನು ಕಾಗೆ ಪ್ರತಾಪ್ ಅಂತಾನೇ ಕರೆಯುತ್ತಿದ್ದಾರೆ.
ಚಿನ್ನದ ವ್ಯಾಮೋಹಕ್ಕೆ ಭೂಮಿ ಹೋಯ್ತು! 20 ಲಕ್ಷ ರೂಪಾಯಿಗೆ 8 ಕೆಜಿ ಚಿನ್ನದ ಆಮಿಷ… ಸಂಕಷ್ಟದಲ್ಲಿ ದಂಪತಿ…
ಏನಿದು ಡ್ರೋನ್ ಪ್ರತಾಪನ ಹೊಸ ಅವತಾರ? ನೆಟ್ಟಿಗರ ಬಗೆಬಗೆಯ ಕಾಮೆಂಟ್ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!