ಮೈಸೂರು: ಅವಸರವೇ ಅಪಘಾತಕ್ಕೆ ಕಾರಣ, ಅತಿವೇಗ ತಿಥಿಬೇಗ ಎಂಬಂಥ ಬರಹಗಳು ಬಸ್ಗಳ ಮೇಲೆಯೇ ಸಾಮಾನ್ಯವಾಗಿ ಬರೆದಿಡಲಾಗಿರುತ್ತದೆ. ಅದಾಗ್ಯೂ ಇಲ್ಲಿ ಚಾಲಕನೊಬ್ಬನ ವೇಗದ ಆವೇಗಕ್ಕೆ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ.
ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಕೆ.ಆರ್.ನಗರದ ಸತ್ತಿ ಗ್ರಾಮದ ಪುಟ್ಟಶೆಟ್ಟಿ ಎಂಬವರ ಪತ್ನಿ ನೀಲಮ್ಮ (69) ಅನ್ಯಾಯವಾಗಿ ಸಾವಿಗೀಡಾದ ವೃದ್ಧೆ. ಕೆಎಸ್ಆರ್ಟಿಸಿ ಬಸ್ ಚಾಲಕ ಇನ್ನೊಂದು ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಈಕೆಗೆ ಡಿಕ್ಕಿ ಹೊಡೆದಿದ್ದು, ನೀಲಮ್ಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಅಪಘಾತದ ತೀವ್ರತೆಗೆ ನೀಲಮ್ಮ ಗಂಭೀರ ಗಾಯಗೊಂಡು ರಕ್ತಸ್ರಾವಕ್ಕೆ ಒಳಗಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪ್ರಕರಣ ನಡೆಯುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ. ದೇವರಾಜ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಕೆ.ಆರ್. ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.