More

    ‘ಅಭಿಮಾನಿ ದೇವರುಗಳೇ.. ನಮಸ್ಕಾರ ದೇವರು’: ಡಾ.ರಾಜ್​ ಆದರ್ಶದ ಡಾ.ಬ್ರೋ!

    ಬೆಂಗಳೂರು: “ಅಭಿಮಾನಿ ದೇವರುಗಳೇ..’ ಎಂದಾಕ್ಷಣ ಯಾರಿಗಾದರೂ ಮನಸಲ್ಲಿ ಮೂಡುವ ಏಕೈಕ ಹೆಸರು ನಟ ಸಾರ್ವಭೌಮ ಡಾ.ರಾಜ್​ ಅವರದ್ದು. ಹಾಗೇ “ನಮಸ್ಕಾರ ದೇವರು’ ಎಂದಾಕ್ಷಣ ಬಹುತೇಕ ಎಲ್ಲರ ನೆನಪಿಗೆ ಬರುವ ಹೆಸರು ಎಂದರೆ ಡಾ.ಬ್ರೋ.

    ‘ನಮಸ್ಕಾರ ದೇವರು’ ಎನ್ನುತ್ತಲೇ ಕನ್ನಡಿಗರಿಗೆ ಜಗತ್ತಿನ ವಿವಿಧ ಪ್ರದೇಶಗಳನ್ನು ತೋರಿಸುತ್ತ ಅಲ್ಲಿನ ವಿಶೇಷತೆಗಳನ್ನು ಕನ್ನಡದಲ್ಲೇ ವಿವರಿಸುತ್ತ ಮನಗೆದ್ದಿರುವ ಗಗನ್​ ಶ್ರೀನಿವಾಸ್​ ತಮ್ಮ ವಿಶ್ವಪರ್ಯಟನೆಯ ಮಧ್ಯೆ ಕಳೆದ ವಾರ ‘ವಿಜಯವಾಣಿ’ ಕಚೇರಿಗೆ ಭೇಟಿ ನೀಡಿ, ದಶ ದೇಶಗಳ ದರ್ಶನದ ಅನುಭವಗಳನ್ನು ಹಂಚಿಕೊಂಡಿದ್ದರು.

    ಹತ್ತು ದೇಶಗಳನ್ನು ಸುತ್ತಿ ಉಳಿದ ದೇಶಗಳ ಪರ್ಯಟನೆಗೆ ಪ್ರಯಾಣ ಬೆಳೆಸುವ ನಡುವಿನ ಒಂದು ಸಣ್ಣ ಗ್ಯಾಪ್​ನಲ್ಲಿ ವಿಜಯವಾಣಿ ಕಚೇರಿಯಲ್ಲಿನ ಸಂವಾದದಲ್ಲಿ ಪಾಲ್ಗೊಂಡ ಗಗನ್​ ಶ್ರೀನಿವಾಸ್​, ತಮ್ಮ ಅನಿಸಿಕೆ-ಅನುಭವಗಳನ್ನು ಹಂಚಿಕೊಂಡರು. ಡಾ.ಬ್ರೋ ಡಾ.ರಾಜ್​ ಅವರ ಹಾದಿಯಲ್ಲೇ ಅಂದರೆ ರಾಜಕುಮಾರ್​ ಅವರ ಆದರ್ಶಗಳನ್ನೇ ಅನುಸರಿಸುತ್ತಿರುವುದು ಈ ವೇಳೆ ನಿಚ್ಚಳವಾಗಿ ಗೋಚರಿಸಿದೆ.

    ಡಾ.ರಾಜಕುಮಾರ್​ ಯಾವಾಗಲೂ ತಮ್ಮ ಅಭಿಮಾನಿಗಳನ್ನು “ಅಭಿಮಾನಿ ದೇವರುಗಳೇ’ ಎಂದು ಕರೆಯುತ್ತಿದ್ದರು. ಅಂತೆಯೇ ಡಾ.ಬ್ರೋ ಕೂಡ ತಮ್ಮ ಪ್ರತಿ ವಿಡಿಯೋದಲ್ಲಿ ಮಾತ್ರವಲ್ಲ, ತಮ್ಮ ವೀಕ್ಷಕರನ್ನು ಉದ್ದೇಶಿಸಿ ಮಾತನಾಡುವಾಗಲೂ “ನಮಸ್ಕಾರ ದೇವರು’ ಎಂದೇ ಹೇಳುತ್ತಾರೆ. ಡಾ.ರಾಜ್​ ತಮ್ಮ ಅಭಿಮಾನಿಗಳನ್ನು ದೇವರೆಂದರೆ ಡಾ.ಬ್ರೋ ತಮ್ಮ ವೀಕ್ಷಕರನ್ನೇ ದೇವರು ಎನ್ನುತ್ತಾರೆ.

    ಡಾ.ರಾಜ್​ ಕನ್ನಡ ಬಿಟ್ಟು ಬೇರೆ ಯಾವ ಭಾಷೆಗಳ ಸಿನಿಮಾದಲ್ಲೂ ನಟಿಸಿಲ್ಲ. ಡಾ.ಬ್ರೋ ಕೂಡ ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಬಗ್ಗೆ ಹೇಳುವಾಗ ಕನ್ನಡಕ್ಕೇ ಆದ್ಯತೆ ನೀಡಿದ್ದಾರೆ, ನೀಡುತ್ತಿದ್ದಾರೆ. ‘ನೀವು ಇಂಗ್ಲಿಷ್​ ಮಾಧ್ಯಮದಲ್ಲಿ ಓದಿದ್ದು ಎನ್ನುತ್ತೀರಿ, ವಿದೇಶಗಳಲ್ಲಿ ಹೋದಾಗ ಕನ್ನಡದ ಜತೆಗೆ ಇಂಗ್ಲಿಷ್​ನಲ್ಲೂ ಕಂಟೆಂಟ್​ ಮಾಡಿ ಹಾಕಿದರೆ ಹೆಚ್ಚು ಜನರನ್ನು ತಲುಪುತ್ತದೆ, ಸಬ್​ಸ್ಕ್ರೈಬರ್ಸ್​ ಸಂಖ್ಯೆಯೂ ಹೆಚ್ಚಾಗುತ್ತದೆ’ ಎಂದರೆ ಅವರು ಹೇಳಿದ್ದಿಷ್ಟು. ‘ನಾನು ಇಂಗ್ಲಿಷ್​ ಮಾಧ್ಯಮದಲ್ಲಿ ಓದಿದ್ದರೂ ನಾನು ಪಕ್ಕಾ ಕನ್ನಡದ ಹುಡುಗ. ನನ್ನ ಶಕ್ತಿ ಕನ್ನಡ, ನನ್ನ ಗೆಳೆಯರ ಬಳಗ ಕೂಡ ಕನ್ನಡಿಗರದ್ದೇ. ನಾನು ಕನ್ನಡದಲ್ಲಿ ಹೇಳಿದಷ್ಟು ಸರಳವಾಗಿ ಹಾಗೂ ಆಳವಾಗಿ ಇಂಗ್ಲಿಷ್​ನಲ್ಲಿ ಹೇಳಲು ಸಾಧ್ಯವಿಲ್ಲ. ಹಾಗಾಗಿ ಕನ್ನಡಕ್ಕೇ ನನ್ನ ಆದ್ಯತೆ..

    ಡಾ.ರಾಜಕುಮಾರ್​ ಅವರ ಸಿನಿಮಾಗಳೆಂದರೆ ಅಲ್ಲಿ ಕಂಟೆಂಟೇ ಅಲ್ಟಿಮೇಟ್​. ಡಾ.ಬ್ರೋ ಕೂಡ ಅದನ್ನೇ ಪಾಲಿಸುತ್ತಿದ್ದಾರೆ. “ಈಗಲೂ ಮುಂದೆಯೂ.. ಯಾವತ್ತಿಗೂ ಕಂಟೆಂಟೇ ಕಿಂಗು. ಎಂಥ ಒಳ್ಳೆಯ ಕ್ಯಾಮರಾ ಇದ್ದರೂ, ಯಾವ ಬಟ್ಟೆ ಧರಿಸಿದ್ದರೂ, ಜಾಗ ಯಾವುದೇ ಆಗಿದ್ದರೂ ಕಂಟೆಂಟ್​ ಮುಖ್ಯ. ವಿಡಿಯೋ ಕ್ಲ್ಯಾರಿಟಿಗಿಂತಲೂ ಕಂಟೆಂಟ್​ ಕ್ವಾಲಿಟಿ ಅತ್ಯಂತ ಮುಖ್ಯ’ ಎನ್ನುತ್ತಾರೆ ಡಾ.ಬ್ರೋ.

    ಇನ್ನು “ಆಕಸ್ಮಿಕ’ ಸಿನಿಮಾದಲ್ಲಿ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಿಬೇಕು’ ಎಂದು ತೆರೆ ಮೇಲೆ ಸಾರಿದ್ದ ಡಾ.ರಾಜ್​, “ನೂರಾರು ಊರು ಸುತ್ತಿ ಏನೇನೋ ಕಂಡ ಮೇಲು, ನಮ್ಮೂರೇ ನಮಗೆ ಮೇಲು’ ಎಂದಿದ್ದರು. ಅದೇ ರೀತಿ ದೇಶದೊಳಗೇ ಹತ್ತಾರು ರಾಜ್ಯಗಳಲ್ಲಿ ಪ್ರವಾಸ ಮಾಡಿ, ಈಗಾಗಲೇ ಹತ್ತು ದೇಶಗಳನ್ನು ಸುತ್ತಿ ಬಂದಿರುವ ಡಾ.ಬ್ರೋ ಕೂಡ, ‘ಎಲ್ಲಿಗೇ ಹೋದರೂ ನಮ್ಮೂರೇ ನಮಗೆ ಮೇಲು ಎನ್ನುತ್ತಾರೆ. ಬೆಂಗಳೂರಿಗೆ ಬಂದ ತಕ್ಷಣ ನನಗೆ ತವರಿಗೆ ಬಂದ ಹಾಗೆ ಆಗುತ್ತದೆ’ ಎನ್ನುತ್ತಾರೆ ಗಗನ್​.

    ಅನೇಕ ದೇಶಗಳನ್ನು ಸುತ್ತಿ ಬಂದಿರುವ ಡಾ.ಬ್ರೋ, ಭಾರತದ ಬಗ್ಗೆ ಹೆಮ್ಮೆ ಪಡುತ್ತಾರೆ. ನಾನು ಸುತ್ತಿದ ದೇಶಗಳಲ್ಲಿ ಬಹುತೇಕವು ನಮ್ಮ ಕರ್ನಾಟಕದಷ್ಟು ಜನಸಂಖ್ಯೆ ಹೊಂದಿವೆ. ಆದರೆ ನಮ್ಮ ಭಾರತ 140 ಕೋಟಿ ಜನಸಂಖ್ಯೆ ಹೊಂದಿದ್ದು, ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆ ಇದ್ದೂ ಈ ರೀತಿ ಬೆಳವಣಿಗೆ ಕಾಣುತ್ತಿರುವುದು ಒಂಥರ ಅಚ್ಚರಿ ಎನ್ನುತ್ತಾರೆ.

    ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್​’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ

    ‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts