ತುಮಕೂರು: ರಕ್ಷಣೆ ಕೊಡಬೇಕಾದ ಪೊಲೀಸಪ್ಪನೇ ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಪತಿರಾಯನ ಕಿರುಕುಳಕ್ಕೆ ಬೇಸತ್ತ ಪತ್ನಿ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಸಂತ್ರಸ್ತ ಮಹಿಳೆಯ ಹೆಸರು ಸಹನಾ. ಈಕೆಯ ಪತಿ ಸುನೀಲ್ ಕುಮಾರ್, ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರಸಿಕೆರೆ ಮೂಲದ ಸಹನಾ, ಒಂದೂವರೆ ವರ್ಷದ ಹಿಂದೆ ಸುನೀಲ್ ಕುಮಾರ್ನನ್ನು ವರಿಸಿದ್ದಾರೆ. ಮದುವೆಯಾದ ಎರಡೇ ತಿಂಗಳಲ್ಲಿ ಸಹನಾಗೆ ಬ್ರೈನ್ ಟ್ಯೂಮರ್ ಕಾಣಿಸಿಕೊಂಡಿತು. ಈ ವೇಳೆ ಅವರ ಮನೆಯವರೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿದ್ದರು.
ಮದುವೆಯ ಸಂದರ್ಭದಲ್ಲಿ 25 ಗ್ರಾಂ ಚಿನ್ನದ ಸರ, 12 ಗ್ರಾಂ ಉಂಗುರ ಹಾಗೂ 30 ಗ್ರಾಂ ಬಂಗಾರದ ಬಳೆಯನ್ನು ವರದಕ್ಷಿಣೆ ನೀಡಿ, ಸುಮಾರು 18 ಲಕ್ಷ ರೂಪಾಯಿ ಖರ್ಚು ಮಾಡಿ, ಅರಸೀಕೆರೆ ವೀರಶೈವ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ, ಕಳೆದ ಒಂದು ವರ್ಷದಿಂದ ಸುನೀಲ್ ನಿರಂತರವಾಗಿ ಕಿರುಕುಳ ಕೊಡುತ್ತಿದ್ದಾರೆ ಎಂದು ಸಹನಾ ಆರೋಪ ಮಾಡಿದ್ದಾರೆ.
ಮನೆ ಕಟ್ಟಬೇಕು, ಕಾರು ತಗೋಬೇಕು, 20 ಲಕ್ಷ ಹಣ ತಗೊಂಡು ಬಾ ಎಂದು ನಿರಂತವಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದಾರಂತೆ. ಅಲ್ಲದೆ ಲಾಠಿಯಿಂದ ಥಳಿಸಿರುವ ಆರೋಪವೂ ಕೇಳಿಬಂದಿದೆ. ಹೀಗಾಗಿ ಸುನಿಲ್ ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗೆ ಸಹನಾ ದೂರು ನೀಡಿದ್ದು, ಎಸ್.ಪಿ ಆದೇಶದ ಮೇರೆಗೆ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)