ಮೈಸೂರು: ಗೃಹಿಣಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಲೆಯಾಗಿದೆ ಎಂದು ಆರಂಭದಲ್ಲಿ ಎಲ್ಲರು ನಂಬಿದ್ದ ಪ್ರಕರಣವೀಗ ರೋಚಕ ತಿರುವು ಪಡೆದುಕೊಂಡಿದೆ. ಮತ್ತೊಬ್ಬನ ಮೇಲಿನ ದ್ವೇಷಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವುದು ಬಹಿರಂಗವಾಗಿದೆ.
ಹೆಂಡತಿಗೆ ಮೆಸೇಜ್ ಮಾಡಿದ ಎಂಬ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದೇ ಗಲಾಟೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲು ಜತೆಗಿದ್ದ ಸ್ನೇಹಿತನನ್ನೇ ಕೊಲೆ ಮಾಡಿ, ಆ ಕೊಲೆಯನ್ನು ಮತ್ತೊಬ್ಬನ ಮೇಲೆ ಹಾಕಿ, ಸೇಡು ತೀರಿಸಿಕೊಳ್ಳಲು ಯತ್ನಿಸಿದ ದುಷ್ಕರ್ಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ವಿವರಣೆಗೆ ಬರುವುದಾದರೆ, ಎಚ್.ಡಿ. ಕೋಟೆ ತಾಲೂಕಿನ ನೇರಳೆಹುಂಡಿ ಗ್ರಾಮದಲ್ಲಿ ಭಾನುಪ್ರಕಾಶ್ ಅಲಿಯಾಸ ಸಿದ್ದ ಎಂಬ ಯುವಕನ ಬರ್ಬರ ಕೊಲೆಯಾಗಿತ್ತು. ಅದೇ ಗ್ರಾಮದ ಎನ್.ಪ್ರಕಾಶ್ ಸೇರಿದಂತೆ ಸಿದ್ದನ ಜತೆ ಗಲಾಟೆ ಮಾಡಿದ್ದ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೆಂಡತಿಗೆ ಮೆಸೇಜ್ ಮಾಡಿದ್ದಕ್ಕೆ ಸಿದ್ದನ ಜತೆ ಪ್ರಕಾಶ ಜಗಳವಾಡಿದ್ದ.
ಆದರೆ ತನಿಖೆ ನಡೆಸಿದಾಗ ಕೊಲೆ ಮಾಡಿರುವುದು ಪ್ರಕಾಶ್ ಅಲ್ಲ, ಸಿದ್ದನ ಆತ್ಮೀಯ ಸ್ನೇಹಿತ ದಿನೇಶ್ ಎಂಬುದು ಬಹಿರಂಗವಾಗಿದೆ. ಆರೋಪಿ ದಿನೇಶ್, ತನ್ನ ಗೆಳೆಯ ಭೀಮನ ಜತೆ ಸೇರಿ ಸಿದ್ದನನ್ನು ಕತ್ತು ಸೀಳಿ ಕೊಲೆ ಮಾಡಿದ್ದರು. ಬಳಿಕ ಗ್ರಾಮದ ಹೊರ ವಲಯದಲ್ಲಿ ಶವ ಬಿಟ್ಟು, ಡ್ರ್ಯಾಗರ್ ಅನ್ನು ಕಬಿನಿ ನದಿಗೆ ಬಿಸಾಕಿದ್ದರು. ಹಳೇ ಸೇಡಿನ ಹಿನ್ನೆಲೆಯಲ್ಲಿ ಈ ಕೊಲೆಯನ್ನು ಅದೇ ಗ್ರಾಮದ ಎನ್.ಪ್ರಕಾಶ್ ಎಂಬುವರ ಮೇಲೆ ಬರುವಂತೆ ದಿನೇಶ್ ಮಾಡಿರುವುದು ಬೆಳಕಿಗೆ ಬಂದಿದೆ.
ಮೊಬೈಲ್ ಟವರ್ ಲೊಕೇಶನ್ ಮೂಲಕ ಕೊಲೆ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಗಳಿಬ್ಬರು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಎನ್.ಪ್ರಕಾಶ್ ಮೇಲಿನ ಹಳೆಯ ದ್ವೇಷಕ್ಕೆ ಆತ್ಮೀಯ ಸ್ನೇಹಿತನನ್ನೇ ದಿನೇಶ್ ಕೊಂದಿದ್ದಾನೆ. ಈ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
video: ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಸೂಪರ್ ಓವರ್ನಲ್ಲಿ ತಂಡವನ್ನು ಗೆಲ್ಲಿಸಿದ ರಿಂಕು ಸಿಂಗ್