ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ಅಭಿನಯ ಚಕ್ರವರ್ತಿ ಹಾಗೂ ಬಾದ್ಷಾ ಕಿಚ್ಚ ಸುದೀಪ್ ಇಂದು (ಸೆ.02) 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಮೂಲಿಯಂತೆಯೇ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಹೊಸ ಸಿನಿಮಾಗಳ ಅಪ್ಡೇಟ್ನೊಂದಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಈ ಬಾರಿಯ ವಿಶೇಷ ಏನೆಂದರೆ ಬರೋಬ್ಬರಿ 9 ವರ್ಷಗಳ ಬಳಿಕ ಮತ್ತೆ ಕಿಚ್ಚ ನಿರ್ದೇಶನಕ್ಕೆ ಇಳಿದಿದ್ದಾರೆ.
ಪ್ರತಿಬಾರಿ ಮನೆಯ ಮುಂದೆ ಸುದೀಪ್ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದರು. ಹಾರ-ತುರಾಯಿ, ಕೇಕ್ ಮತ್ತು ಗಿಫ್ಟ್ ಸೇರಿದಂತೆ ಯಾವುದನ್ನು ತೆಗೆದುಕೊಂಡು ಬರಬೇಡಿ, ಅದೇ ಹಣದಲ್ಲಿ ನಿರಾಶ್ರಿತರಿಗೆ ಏನಾದರೂ ಸಹಾಯ ಮಾಡಿ ಎಂದು ಕೋರಿದ್ದರು. ಈ ಬಾರಿಯು ಇದೇ ಮನವಿಯನ್ನು ಮಾಡಿದ್ದರು. ಆದರೆ, ಈ ಬಾರಿಯ ವಿಶೇಷ ಏನೆಂದರೆ ಮನೆಯನ್ನು ಬಿಟ್ಟು, ನ್ಯಾಯಂಡಹಳ್ಳಿಯ ಪಂತರಪಾಳ್ಯದಲ್ಲಿರುವ ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ಅಭಿಮಾನಿಗಳ ಸಾಗರದ ನಡುವೆ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: video: ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಸೂಪರ್ ಓವರ್ನಲ್ಲಿ ತಂಡವನ್ನು ಗೆಲ್ಲಿಸಿದ ರಿಂಕು ಸಿಂಗ್
ಮನೆಯ ಮುಂದೆ ಆಚರಣೆ ಮಾಡಿಕೊಂಡಲ್ಲಿ ಅಕ್ಕ-ಪಕ್ಕದ ಮನೆಯವರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಕಿಚ್ಚ ಈ ನಿಲುವು ತೆಗೆದುಕೊಂಡಿದ್ದಾರೆ. ನಿನ್ನೆ (ಸೆ.01) ರಾತ್ರಿಯೇ ನಂದಿ ಲಿಂಕ್ ಗ್ರೌಂಡ್ಸ್ಗೆ ಜಮಾಯಿಸಿದ ಅಭಿಮಾನಿಗಳು ನೆಚ್ಚಿನ ನಟನನ್ನು ಕಣ್ತುಂಬಿಕೊಂಡು, ಶುಭ ಹಾರೈಸಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ತನ್ನ ಮೇಲಿ ಇಟ್ಟಿರುವ ಪ್ರೀತಿಗೆ ನಾನು ಸದಾ ಋಣಿ ಎಂದು ಹೇಳುವ ಮೂಲಕ ಕಿಚ್ಚ ಕೂಡ ಅಭಿಮಾನಿಗಳ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು ಮತ್ತು ಸಾಕಷ್ಟು ಸಮಯ ಅಭಿಮಾನಿಗಳ ಜತೆ ಕಳೆದರು.
ನಿರ್ದೇಶಕನಕ್ಕಿಳಿದ ಕಿಚ್ಚ
ಸಿನಿಮಾ ವಿಚಾರಕ್ಕೆ ಬರುವುದಾದರೆ ಹುಟ್ಟುಹಬ್ಬದ ದಿನ ಹೊಸ ಸಿನಿಮಾಗಳು ಘೋಷಣೆಯಾಗುವುದು ಸಹಜ. ಅದರಂತೆ ಕಿಚ್ಚನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಹೊಸ ಸಿನಿಮಾಗಳ ಅಪ್ಡೇಟ್ ಹೊರಬಿದ್ದಿದೆ. ಈ ಬಾರಿಯ ಸರ್ಪ್ರೈಸ್ ಏನೆಂದರೆ ಬರೋಬ್ಬರಿ 9 ವರ್ಷಗಳ ಬಳಿಕ ನಟ ಸುದೀಪ್ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಕಿಚ್ಚನ 47ನೇ ಸಿನಿಮಾವನ್ನು ತಾವೇ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾವನ್ನು ಕೆಆರ್ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜು ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ಸಿನಿಮಾ ಟೈಟಲ್ ಮತ್ತು ಸಿನಿಮಾ ತಂಡದ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಸಿಗಲಿದೆ.
ಕಿಚ್ಚ 46 ಟೈಟಲ್ ರಿವೀಲ್
ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ಅವರೊಂದಿಗೆ ಕಿಚ್ಚ ಸಿನಿಮಾ ಮಾಡುತ್ತಿರುವುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಈ ಸಿನಿಮಾದ ಡೆಮನ್ ಟೀಸರ್ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ, ಈ ಸಿನಿಮಾದ ಟೈಟಲ್ ಮಾತ್ರ ಈವರೆಗೂ ರಿವೀಲ್ ಆಗಿರಲಿಲ್ಲ. ಆದರೆ, ಇದೀಗ ಕಿಚ್ಚನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಚಿತ್ರತಂಡ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ. ಕಿಚ್ಚ 46 ಸಿನಿಮಾಗೆ “ಮ್ಯಾಕ್ಸ್” ಎಂಬ ಟೈಟಲ್ ಫಿಕ್ಸ್ ಆಗಿದೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗಲಿದೆ. ಇದು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಆಗಿದೆ.
ಉಳಿದಂತೆ ಆರ್ ಚಂದ್ರು ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟಿಸಲಿದ್ದಾರೆ. ಅಲ್ಲದೆ, ವಿಕ್ರಾಂತ್ ರೋಣ ಸಿನಿಮಾ ಬಳಿಕ ಕಿಚ್ಚ ಮತ್ತೆ ಅನೂಪ್ ಭಂಡಾರಿ ಜತೆ ಕೈಜೋಡಿಸಲಿದ್ದು, ಬಿಲ್ಲಾ ರಂಗ ಭಾಷಾ ಸಿನಿಮಾ ಮಾಡಲಿದ್ದಾರೆ. ಆದರೆ, ಈ ಸಿನಿಮಾಗಳು ಯಾವಾಗ ಸೆಟ್ಟೆರುತ್ತವೆ ಎಂಬ ಕುತೂಹಲ ಮನೆ ಮಾಡಿದೆ.
ಒಟ್ಟಾರೆ ಈ ಬಾರಿಯ ಕಿಚ್ಚನ ಹುಟ್ಟುಹಬ್ಬ ಆಚರಣೆ ತುಸು ವಿಭಿನ್ನವಾಗಿತ್ತು. ಇದೇ ಮೊದಲ ಬಾರಿಗೆ ವಿಶಾಲ ಮೈದಾನದಲ್ಲಿ ಅಭಿಮಾನಿಗಳೊಂದಿಗೆ ಕಿಚ್ಚ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಅಲ್ಲದೆ, ಅಭಿಮಾನಿಗಳಿಗೆ ಸಾಕಷ್ಟು ಸರ್ಪ್ರೈಸ್ ನೀಡಿದ್ದು, ಇದಕ್ಕಿಂತ ದೊಡ್ಡ ಉಡುಗೊರೆ ಬೇರೊಂದಿಲ್ಲ ಎಂದು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.