ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸಚಿನ್ ತೆಂಡುಲ್ಕರ್ ಕ್ರಿಕೆಟ್ ದೇವರು ಎಂದೇ ಪ್ರಖ್ಯಾತರು. ಬದ್ಧವೈರಿ ಪಾಕಿಸ್ತಾನ ಸೇರಿ ಎದುರಾಳಿ ತಂಡದವರು ಕೂಡ ಇವರನ್ನು ಗೌರವಿಸುತ್ತಿದ್ದರು. ಆದರೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಕೆಲವೊಮ್ಮೆ ಸಚಿನ್ಗೆ ಸ್ಲೆಡ್ಜ್ ಮಾಡಿ ಸಾಕಷ್ಟು ಪೆಟ್ಟು ತಿಂದಿದ್ದಾರೆ.
ಹಾಗಾಗಿ, ಸಚಿನ್ ತೆಂಡುಲ್ಕರ್ ಅವರಿಗೆ ಏನೂ ಅನ್ನಲು ಹೋಗಬೇಡಿ… ಅಂದಿರಿ ಎಂದರೆ ಪಶ್ಚಾತ್ತಾಪ ಪಡುವುದು ಗ್ಯಾರಂಟಿ ಎಂದು ಆಸ್ಟ್ರೇಲಿಯಾ ತಂಡದ ಬೌಲಿಂಗ್ ಕ್ಯಾಪ್ಟನ್ ಆಗಿರುತ್ತಿದ್ದವರು ತಮ್ಮ ತಂಡದ ಯುವ ಬೌಲರ್ಗಳಿಗೆ ಎಚ್ಚರಿಕೆ ನೀಡುತ್ತಿದ್ದಂತೆ!
ಈ ವಿಷಯವನ್ನು ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್ ಲೀ ಹೇಳಿದ್ದಾರೆ. ನಾನು ಅದೇ ತಾನೆ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿದ್ದೆ. ಆಗ ಗ್ಲೆನ್ ಮೆಕ್ಗ್ರಾಥ್ ನಮ್ಮ ತಂಡದ ಬೌಲಿಂಗ್ ಕ್ಯಾಪ್ಟನ್ ಆಗಿದ್ದರು. ಅವರು ತಂಡಕ್ಕೆ ಯಾರೇ ಹೊಸಬ ಬೌಲರ್ ಬರಲಿ, ಅದು ಮಿಚೆಲ್ ಜಾನ್ಸನ್ ಇರಲಿ ಅಥವಾ ಬೇರೆ ಯಾರೇ ಆಗಿರಲಿ ಒಂದು ಮಾತನ್ನು ಮೊದಲಿಗೆ ಸ್ಪಷ್ಟಪಡಿಸುತ್ತಿದ್ದರು. ನೀವು ಯಾರಿಗಾದರೂ ಸ್ಲೆಡ್ಜ್ ಮಾಡಿ, ಆದರೆ, ಭಾರತದ ಸಚಿನ್ ತೆಂಡುಲ್ಕರ್ ಎದುರು ಮಾತ್ರ ಇಂಥ ತಂತ್ರಗಾರಿಕೆ ಅನುಸರಿಸಬೇಡಿ. ಅವರನ್ನು ದುರುಗುಟ್ಟಿಕೊಂಡು ನೋಡಬೇಡಿ. ಹಾಗೇನಾದರೂ ಮಾಡಿದರೆ, ಕೊನೆಯಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಹೇಳುತ್ತಿದ್ದರು ಎಂದು ಬ್ರೆಟ್ ಲೀ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಶತಕಗಳ ಶತಕ ಸಾಧನೆ ಮಾಡಿರುವ ಸಚಿನ್ ತೆಂಡುಲ್ಕರ್ ಅವರ ಆಸ್ಟ್ರೇಲಿಯಾ ವಿರುದ್ಧದ ಸಾಧನೆಯನ್ನು ಗಮನಿಸಿದಾಗ ಮೆಕ್ ಗ್ರಾಥ್ ಮಾತಿನಲ್ಲಿ ಸತ್ಯ ಇದೆ ಎಂಬುದು ಸ್ಪಷ್ಟವಾಗುತ್ತದೆ.
ಮೆಕ್ಗ್ರಾಥ್, ಬ್ರೆಟ್ ಲೀ, ಶೇನ್ ವಾರ್ನ್ ಸೇರಿ ಆಸೀಸ್ನ ಘಟಾನುಘಟಿ ಬೌಲರ್ಗಳನ್ನು ಚೆಂಡಾಡಿರುವ ಕ್ರಿಕೆಟ್ ದೇವರು, 39 ಟೆಸ್ಟ್ಗಳಿಂದ 55ರ ಸರಾಸರಿಯಲ್ಲಿ 11 ಶತಕಗಳು ಒಳಗೊಂಡಂತೆ 3,630 ರನ್ ಗಳಿಸಿದ್ದಾರೆ. 71 ಏಕದಿನ ಪಂದ್ಯಗಳಿಂದ 9 ಶತಕಗಳು ಸೇರಿ 3,077 ರನ್ಗಳನ್ನು ಗಳಿಸಿದ್ದಾರೆ.
ಕೆ.ಎಲ್. ರಾಹುಲ್ಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ವ್ಯಕ್ತಿಯೊಬ್ಬರು ಟೀಮ್ ಇಂಡಿಯಾದಲ್ಲಿದ್ದಾರೆ ಅಂತೆ!