ನವದೆಹಲಿ: ತಂಡ ಕ್ರೀಡೆಗಳಲ್ಲಿ ವೈಯಕ್ತಿಕ ಆಟಕ್ಕಿಂತ ಸಾಂಘಿಕ ಶ್ರಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಹೀಗಿದ್ದರೂ, ಕೆಲವರು ತಂಡಕ್ಕಿಂತ ವೈಯಕ್ತಿಕ ಲಾಭಕ್ಕೆ ಹೆಚ್ಚಿನ ಒತ್ತು ನೀಡಿ ಆಡುವ ಮನೋಭಾವ ಹೊಂದಿರುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ತನಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಬಲ್ಲ ವ್ಯಕ್ತಿಯೊಬ್ಬರು ಇರುವುದಾಗಿ ಕರ್ನಾಟಕದ ಆಟಗಾರ ಕೆ.ಎಲ್. ರಾಹುಲ್ ಹೇಳಿಕೊಂಡಿದ್ದಾರೆ.
ಅವರೇ ಕ್ಯಾಪ್ಟನ್ ವಿರಾಟ್ ಕೊಹ್ಲಿ ಎಂದು ರಾಹುಲ್ ತಿಳಿಸಿದ್ದಾರೆ. ಟಿವಿ ನಿರೂಪಕ ಮತ್ತು ವೀಕ್ಷಕ ವಿವರಣೆಕಾರ ಸುಹೈಲ್ ಚಾಂಡಾಕ್ ಅವರ ದಿ ಮೈಂಡ್ ಬಿಹೈಂಡ್ ಎಂಬ ಕಾರ್ಯಕ್ರಮಕ್ಕೆ ನೀಡಿರುವ ಸಂದರ್ಶನದಲ್ಲಿ ರಾಹುಲ್ ಈ ಹೇಳಿಕೆ ನೀಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಯಾವ ಸದಸ್ಯರೊಂದಿಗೆ ಜೀವನವಿಡೀ ಗೆಳೆತನ ಸಾಗಿಸಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಅವರು, ನಾನು ವಿರಾಟ್ ಕೊಹ್ಲಿ ಅವರ ಹೆಸರು ತೆಗೆದುಕೊಳ್ಳಲು ಬಯಸುತ್ತೇನೆ. ಅವರೊಬ್ಬ ಶ್ರೇಷ್ಠ ಬ್ಯಾಟ್ಸ್ಮನ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲದೆ, ಅವರೊಂದಿಗೆ ಆಪ್ತ ಗೆಳೆತನ ಹೊಂದಿದ್ದೇನೆ. ಅವರು ನನಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧರಾಗಿದ್ದಾರೆ ಎಂದು ಆತಿಹ್ಯ ಶೆಟ್ಟಿಯಲ್ಲಿ ಅನುರಕ್ತರಾಗಿರುವ ರಾಹುಲ್ ತಿಳಿಸಿದ್ದಾರೆ.