ಬೆಂಗಳೂರು: ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುವ ಮೂಲಕ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಲಭೆಗೆ ಕಾರಣನಾದ ನವೀನ್ ಎಂಬಾತನಿಗೂ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೂ ಯಾವುದೇ ರಾಜಕೀಯ ಸಂಬಂಧ ಇರಲಿಲ್ಲ. ನವೀನ್ ಬಿಜೆಪಿ ಅಭಿಮಾನಿ, ಕಾರ್ಯಕರ್ತ ಎಂದು ಡಿ.ಕೆ. ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ವೇಳೆ ನವೀನ್ ಬಿಜೆಪಿ ಪರ ಫೇಸ್ಬುಕ್ನಲ್ಲಿ ಮಾಡಿಕೊಂಡಿದ್ದ ಪೋಸ್ಟ್ ಅನ್ನು ಕೆಪಿಸಿಸಿ ಕಚೇರಿಯಲ್ಲಿ ಪ್ರದರ್ಶಿಸಿದ ಡಿಕೆಶಿ, ಸತ್ಯಶೋಧನೆಗಾಗಿ ಹಿರಿಯ ನಾಯಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ. ನಿರಾಪರಾಧಿಗಳ ವಿರುದ್ಧ ಕ್ರಮಕೈಗೊಳ್ಳಬೇಡಿ. ಮನೆಯಲ್ಲಿ ಮಲಗಿರುವವರನ್ನೆಲ್ಲ ಬಂಧಿಸಬೇಡಿ ಎಂದರು.
ಇದನ್ನೂ ಓದಿರಿ ಡಿಜೆ ಹಳ್ಳಿ ಗಲಭೆ ಹಿಂದಿದೆ ಮಾಜಿ ಸಚಿವರೊಬ್ಬರ ಕೈವಾಡ; ನಳೀನ್ ಕುಮಾರ್ ಕಟೀಲ್
ಡಿಜೆ ಹಳ್ಳಿಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ತಮ್ಮದೇ ಪಕ್ಷದ ಶಾಸಕರೊಬ್ಬರ ಮನೆಗೆ ಗಲಭೆಕೋರರು ಬೆಂಕಿ ಇಟ್ಟಿದ್ದರೂ ಕಾಂಗ್ರೆಸ್ ನಾಯಕರು ಮೌನವಾಗಿದ್ದರು. ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ಡಿ.ಜೆ.ಹಳ್ಳಿ ಗಲಭೆಯನ್ನು ಖಂಡಿಸುತ್ತೇನೆ. ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುವ ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸಬೇಕು. ಈ ಗಲಭೆಯನ್ನು ಕಾಂಗ್ರೆಸ್ ಖಂಡಿಸಲಿದೆ ಎಂದಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೋಮುಗಲಭೆಗಳಲ್ಲಿ ಸಾವು-ನೋವಿಗೆ ಒಳಗಾಗುವವರು ಅಮಾಯಕರು ಎಂಬ ಸತ್ಯವನ್ನು ಅನುಭವದ ಪಾಠ ನಮಗೆ ಹೇಳಿಕೊಟ್ಟಿದೆ. ಮೊದಲು ಎರಡೂ ಧರ್ಮಗಳ ಹಿರಿಯರು ಒಂದೆಡೆ ಕೂತು ಪರಸ್ಪರ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಬೇಕು ಎಂದು ಕೋರಿದ್ದರು.
ಇದಾದ ಕೆಲ ಗಂಟೆಗಳ ಮೌನಮುರಿದ ಡಿಕೆಶಿ, ಅವಹೇಳನಾಕಾರಿ ಪೋಸ್ಟ್ ಹಾಕಿದ್ದ ನವೀನ್ಗೂ ನಮ್ಮ ಶಾಸಕರಿಗೂ ಯಾವುದೇ ರಾಜಕೀಯ ಸಂಬಂಧ ಇರಲಿಲ್ಲ. ಆತ ಲೋಕಸಭಾ ಚುನಾವಣೆ ವೇಳೆ ಬಿಜೆಪಿಗೆ ಮತ ಹಾಕಿದ್ದಾಗಿ ಪೋಸ್ಟ್ ಮಾಡಿಕೊಂಡಿದ್ದ. ಬಿಜೆಪಿ ಗೆಲ್ಲಲಿದೆ ಎಂದೂ ಹೇಳಿದ್ದ ಎನ್ನುವ ಮೂಲಕ ಬಿಜೆಪಿಯತ್ತ ಬೊಟ್ಟುಮಾಡಿದ್ದಾರೆ. ಪೊಲೀಸ್ ಠಾಣೆಯನ್ನೇ ರಕ್ಷಿಸಿಕೊಳ್ಳದವರು ಇನ್ನೇನು ರಕ್ಷಿಸುತ್ತಾರೆ? ಎಂದೂ ಅವರು ಲೇವಡಿ ಮಾಡಿದ್ದಾರೆ.