More

    ಖಾಸಗಿ ಆಸ್ಪತ್ರೆಗಳ ವಸೂಲಿ ಜೋರು: ದಿಗ್ವಿಜಯ ಸ್ಟಿಂಗ್​ನಲ್ಲಿ ಬಯಲಾಯ್ತು ಅಸಲಿಯತ್ತು

    ದಿಗ್ವಿಜಯ ನ್ಯೂಸ್ ಬೆಂಗಳೂರು
    ಕರೊನಾ ರೋಗಿಗಳ ಚಿಕಿತ್ಸೆಗೆ ಸರ್ಕಾರ ದರ ನಿಗದಿ ಪಡಿಸಿದ್ದು, ಹೆಚ್ಚುವರಿ ಶುಲ್ಕ ಪಡೆದರೆ ಶಿಕ್ಷೆ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರೂ ರೋಗಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದನ್ನು ದಿಗ್ವಿಜಯ 24/7 ನ್ಯೂಸ್ ಚಾನಲ್ ಬಯಲಿಗೆಳೆದಿದೆ.

    ನಗರದಲ್ಲಿ ಕೋವಿಡ್ -19 ಪ್ರಕರಣಗಳು ಕೈ ಮೀರುತ್ತಿದ್ದು, ಚಿಕಿತ್ಸೆ ಪಡೆಯಲು ಒಂದೆಡೆ ಕರೊನಾ ಸೋಂಕಿತರು ಮತ್ತೊಂದಡೆ ಕರೊನಾ ರಹಿತ ಆರೋಗ್ಯ ಸಮಸ್ಯೆ ಹೊಂದಿರುವವರೂ ಪರದಾಡುತ್ತಿದ್ದಾರೆ. ಸರ್ಕಾರದ ಯಾವ ಆದೇಶ ಹಾಗೂ ಎಚ್ಚರಿಕೆಗೂ ಕವಡೆ ಕಾಸಿನ ಕಿಮ್ಮತ್ತು ನೀಡದ ಕೆಲ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೆಪದಲ್ಲಿ ರೋಗಿಗಳನ್ನು ಸುಲಿಗೆ ಮಾಡುತ್ತಿವೆ. ಹಣ ಇಲ್ಲದ ರೋಗಿಗಳು ಚಿಕಿತ್ಸೆ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಾ ರಸ್ತೆಯಲ್ಲೇ ಪ್ರಾಣ ಬಿಡುತ್ತಿದ್ದಾರೆ.

    ಸ್ಟಿಂಗ್​ನಲ್ಲಿ ಕಂಡಿದ್ದೇನು?

    -ಚಿಕಿತ್ಸೆ ಕೊಡಲು ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿಗೆ ಹಣ ವಸೂಲು

    – ರೋಗಿ ಮುಂಗಡವಾಗಿ ಹಣ ಕಟ್ಟಿದರಷ್ಟೇ ಆಸ್ಪತ್ರೆಯ ಒಳಗೆ ಪ್ರವೇಶ, ದಾಖಲಾತಿ.

    – ವೈದ್ಯರು ಹಾಗೂ ನರ್ಸ್ ಧರಿಸುವ ಪಿಪಿಇ ಕಿಟ್​ಗೂ ಪ್ರತ್ಯೇಕವಾಗಿ 2,500 ಕಟ್ಟಬೇಕು.

    – ಬಡ ಹಾಗೂ ಮಧ್ಯಮವರ್ಗದವರಿಗೆ ಸಾವಿರ ಸಾವಿರ, ಶ್ರೀಮಂತರಾದರೆ ಲಕ್ಷ ಲಕ್ಷ ವಸೂಲಿ.

    ಕೋವಿಡ್ ಟೆಸ್ಟ್​ಗೆ ದುಪ್ಪಟ್ಟು ವಸೂಲಿ:

    ಖಾಸಗಿ ಆಸ್ಪತ್ರೆಗಳ ವಸೂಲಿ ಜೋರು: ದಿಗ್ವಿಜಯ ಸ್ಟಿಂಗ್​ನಲ್ಲಿ ಬಯಲಾಯ್ತು ಅಸಲಿಯತ್ತುಕೋವಿಡ್ ಪರೀಕ್ಷೆಗೆ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ 4,500 ರೂ. ದರ ನಿಗದಿ ಪಡಿಸಿದೆ. ಆದರೆ 5 ರಿಂದ 7 ಸಾವಿರ ರೂ. ವರೆಗೂ ವಸೂಲಿ ಮಾಡಲಾಗುತ್ತಿದೆ. ಮಾತ್ರವಲ್ಲ ಕರೊನಾ ಸೋಂಕಿತರಿಗೆ ಸರ್ಕಾರದಿಂದ ರೆಫರ್ ಆದವರಿಗೆ ಹಾಗೂ ರೋಗಿಗಳೇ ನೇರವಾಗಿ ಚಿಕಿತ್ಸೆಗೆ ಹೋದವರಿಗೆ ಸರ್ಕಾರ ಪ್ರತ್ಯೇಕ ದರ ನಿಗದಿಪಡಿಸಿದೆ. ಆದರೆ ಅದನ್ನು ಮೀರಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಮನಬಂದಷ್ಟು ಹಣ ವಸೂಲಿ ಮಾಡಲಾಗುತ್ತಿದೆ.

    ಯಾವ್ಯಾವ ಆಸ್ಪತ್ರೆಗಳಲ್ಲಿ ವಸೂಲಿ?: ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಕರೊನಾ ಟೆಸ್ಟ್ ಮಾಡಿಸಿಕೊಳ್ಳಲು ಸರ್ಕಾರ 4,500 ರೂ. ದರ ನಿಗದಿ ಪಡಿಸಿದ್ದರೆ ರೋಗಿಯೊಬ್ಬರಿಂದ ಸರ್ವೀಸ್ ದರ, ಸ್ವಾ್ಯಬ್ ಕಿಟ್ ದರ ಎಂದೆಲ್ಲಾ ಹೇಳಿ 5,100 ರೂ. ವಸೂಲಿ ಮಾಡಲಾಗಿದೆ. ವರದಿ ಬರೋಕೆ 48 ಗಂಟೆಗಳಾಗುತ್ತದೆ. ನೆಗೆಟಿವ್ ಇದ್ರೆ ಮಾತ್ರ ಆಸ್ಪತ್ರೆಗೆ ಬನ್ನಿ, ಪಾಸಿಟಿವ್ ಇದ್ದರೆ ಬಿಬಿಎಂಪಿ ಕಡೆಗೆ ಹೋಗಬೇಕು ಎನ್ನುತ್ತಾರೆ ಸಿಬ್ಬಂದಿ.

    ಗೊರಗುಂಟೆ ಪಾಳ್ಯದ ಪೀಪಲ್ ಟ್ರೀ ಆಸ್ಪತ್ರೆ, ಹೆಸರುಘಟ್ಟದ ಸಪ್ತಗಿರಿ ಆಸ್ಪತ್ರೆ, ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಶೇಷಾದ್ರಿಪುರಂನ ಅಪೊಲೋ ಆಸ್ಪತ್ರೆ, ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆ, ಮಾಧವನಗರದ ಮಲ್ಲಿಗೆ ಆಸ್ಪತ್ರೆ, ಮಹಾವೀರ ಜೈನ್ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಒಳಪಡುವವರು ಹಾಗೂ ಕರೊನಾ ಸೋಂಕಿತರಿಂದ ಮನಬಂದಂತೆ ಹಣ ವಸೂಲಿ ಮಾಡುತ್ತಿರುವುದನ್ನು ದಿಗ್ಬಿಜಯ ನ್ಯೂಸ್ ತಂಡ ಸಾಕ್ಷ್ಯ ಸಮೇತ ಬಯಲಿಗೆ ಎಳೆದಿದೆ.

    ಹೆಚ್ಚು ದರ ಪಡೆದರೆ ಕಾನೂನು ಕ್ರಮ: ದಿಗ್ವಿಜಯ ನ್ಯೂಸ್ ಸ್ಟಿಂಗ್ ಆಪರೇಷನ್​ನಲ್ಲಿ ಬಯಲಾದ ಹೆಚ್ಚುವರಿ ದರ ವಸೂಲಿ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಯಡಿಯೂರಪ್ಪ ಅವರು ಸರ್ಕಾರ ನಿಗದಿಪಡಿಸಿರುವ ದರಕ್ಕಿಂಥ ಹೆಚ್ಚು ಪಡೆದರೆ ಅಂಥಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

    ಸಂಪುಟದಲ್ಲೂ ಆಕ್ರೋಶ: ಕರೊನಾ ಪರೀಕ್ಷೆ ಮತ್ತು ಚಿಕಿತ್ಸೆಗೆ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವರ್ತನೆ ಸಚಿವ ಸಂಪುಟ ಸಭೆಯಲ್ಲೂ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಸಚಿವರು ಈ ವಿಷಯ ಪ್ರಸ್ತಾಪಿಸಿ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಂಥ ಆಸ್ಪತ್ರೆಗಳಿಗೆ ವಿದ್ಯುತ್, ನೀರು ಕಡಿತ ಮಾಡಿ ಬುದ್ಧಿ ಕಲಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸುಗ್ರೀವಾಜ್ಞೆ ಮೂಲಕ ಖಾಸಗಿ ಆಸ್ಪತ್ರೆಯ ಎಲ್ಲ ಹಾಸಿಗೆಗಳನ್ನು ಕರೊನಾ ಚಿಕಿತ್ಸೆಗಾಗಿ ಸರ್ಕಾರದ ವಶಕ್ಕೆ ಏಕೆ ತೆಗೆದುಕೊಳ್ಳಬಾರದೆಂದು ಕೆಲ ಸಚಿವರು ಪ್ರಶ್ನಿಸಿದರೆನ್ನಲಾಗಿದೆ. ಆದರೆ ಸಿಎಂ ಇದಕ್ಕೆ ಒಪ್ಪದೆ, ಇನ್ನೊಮ್ಮೆ ಮನವಿ ಮಾಡೋಣ. ಬೇಕಾದರೆ ಮತ್ತೆ ಸಭೆ ನಡೆಸೋಣ ಎಂದಿದ್ದಾರೆ. ಖಾಸಗಿ ಆಸ್ಪತ್ರೆ ಮಾಲೀಕರ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವಂತೆ ಸಚಿವರಾದ ಡಾ.ಕೆ.ಸುಧಾಕರ್, ಆರ್. ಅಶೋಕ್​ಗೆ ಸೂಚಿಸಿದರೆಂದು ಹೇಳಲಾಗಿದೆ.

    ಸರ್ಕಾರ ನಿಗದಿ ಮಾಡಿದ ದರ

    ಸಾಮಾನ್ಯ ವಾರ್ಡ್ 5,200 ರೂ.

    ಸ್ಪೆಷಲ್ ವಾರ್ಡ್ 7000 ರೂ.

    ಐಸೋಲೇಷನ್ ವಾರ್ಡ್(ವೆಂಟಿಲೇಟರ್ ರಹಿತ) 8,500 ರೂ.

    ಐಸೋಲೇಷನ್ ವಾರ್ಡ್ (ವೆಂಟಿಲೇಟರ್ ಸಹಿತ) 10,000 ರೂ.

    ನೇರವಾಗಿ ಚಿಕಿತ್ಸೆಗೆ ಹೋಗುವವರಿಗೆ

    ಸಾಮಾನ್ಯ ವಾರ್ಡ್ 10,000 ರೂ.

    ಸ್ಪೆಷಲ್ ವಾರ್ಡ್ 12,000 ರೂ.

    ಐಸೋಲೇಷನ್ ವಾರ್ಡ್(ವೆಂಟಿಲೇಟರ್ ರಹಿತ) 15,000 ರೂ.

    ಐಸೋಲೇಷನ್ ವಾರ್ಡ್ (ವೆಂಟಿಲೇಟರ್ ಸಹಿತ) 20,000 ರೂ.

    ಕರೊನಾ ಕಷ್ಟದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಸುಲಿಗೆಗೆ ಇಳಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮಾನವೀಯತೆಯಿಂದ ಸರ್ಕಾರದ ಜತೆ ಸ್ಪಂದಿಸಬೇಕು. ಸಭೆ ನಡೆಸಿದಾಗ ಸರ್ಕಾರದ ನಿಯಮಾವಳಿ ಪ್ರಕಾರ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ನಡೆದುಕೊಳ್ಳಬೇಕು.
    -ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ
     
    ಸರ್ಕಾರದ ಮಾರ್ಗಸೂಚಿ-ನಿಯಮ ಉಲ್ಲಂಘಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಪ್ರಕೃತಿ ವಿಕೋಪ ಕಾಯ್ದೆಯನ್ವಯ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು.
    -ಆರ್. ಅಶೋಕ್, ಕಂದಾಯ ಸಚಿವ
    ಸರ್ಕಾರ ನಿಗದಿಸಿರುವ ದರಕ್ಕಿಂತ ಹೆಚ್ಚಿನ ದರ ತೆಗೆದುಕೊಂಡರೆ ಅಂಥ ಖಾಸಗಿ ಆಸ್ಪತ್ರೆ ವಿರುದ್ಧ ಮೊಕದ್ದಮೆ ದಾಖಲಿಸುತ್ತೇವೆ. ಶೇ.50 ಹಾಸಿಗೆಗಳಿಗೆ ಸರ್ಕಾರ ನಿಗದಿ ಮಾಡಿದ ದರವನ್ನೇ ಪಡೆಯಬೇಕು.
    – ಬಿ.ಶ್ರೀರಾಮುಲು, ಆರೋಗ್ಯ ಸಚಿವ
    ಖಾಸಗಿ ಆಸ್ಪತ್ರೆಯವರು ಮಾನವೀಯತೆಯಿಂದ ವರ್ತಿಸಬೇಕು. ಲಾಕ್​ಡೌನ್ ಸಮಯದಲ್ಲಿ ಒಪಿಡಿ ಸಹ ತೆರೆಯಲಿಲ್ಲ. ಸರ್ಕಾರ ಕೋರಿದರೂ ಪ್ರಯೋಜನವಾಗಲಿಲ್ಲ. ಸರ್ಕಾರದ ಸೂಚನೆ ಪಾಲಿಸಬೇಕು.
    -ಜಗದೀಶ್ ಶೆಟ್ಟರ್, ಬೃಹತ್ ಕೈಗಾರಿಕೆ ಸಚಿವ

    ಟಿಕ್​ಟಾಕ್ ಜಾಗಕ್ಕೆ ಟಿಕ್​ಟಾಕ್​ ಪ್ರೋ ಬಂದಿದೆ- ಆದರೆ ಅದು ಆ್ಯಪ್​ ಅಲ್ಲ ಹುಷಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts