ವಿಜಯವಾಡ: ಕೋವಿಡ್ ಭಯಕ್ಕೆ ಕಳೆದ ಎರಡು ವರ್ಷದಿಂದ ಮನೆಯಲ್ಲೇ ಸ್ವಯಂ ಬಂಧಿಯಾಗಿದ್ದ ತಾಯಿ-ಮಗಳ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಇಬ್ಬರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ, ಇಬ್ಬರ ಮಾನಸಿಕ ವರ್ತನೆ ಕೂಡ ಬದಲಾಗಿರುವ ಕಳವಳಕಾರಿ ಸಂಗತಿ ಬಯಲಾಗಿದೆ.
43 ವರ್ಷದ ತಾಯಿ ಮತ್ತು 21 ವರ್ಷದ ಮಗಳು ಆಂಧ್ರ ಪ್ರದೇಶದ ಪೂರ್ವ ಗೋದಾವರಿಯ ಕುಯ್ಯೆರು ಗ್ರಾಮದವರು. ನಿತ್ರಾಣ ಸ್ಥಿತಿಯಲ್ಲಿದ್ದ ಇಬ್ಬರನ್ನು ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 2020ರಲ್ಲಿ ಮೊದಲ ಲಾಕ್ಡೌನ್ ಘೋಷಿಸಿದಾಗಿನಿಂದ ಇಬ್ಬರು ಮನೆಯಲ್ಲಿ ಸ್ವಯಂ ಬಂಧನದಲ್ಲಿದ್ದರು ಎಂದು ಹೇಳಲಾಗಿದೆ. ಇಬ್ಬರು ವಿಚಿತ್ರವಾಗಿ ವರ್ತಿಸುತ್ತಿದ್ದ, ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಕೋವಿಡ್ ಸಮಯದಲ್ಲಿ 43 ವರ್ಷದ ಮಹಿಳೆಯ ಪತಿ ಕೆ. ಸೂರಿಬಾಬು ಎಂಬುವರು ಇಬ್ಬರಿಗೂ ಆಹಾರ ಒದಗಿಸುತ್ತಿದ್ದರು. ಆದರೆ, ಕಳೆದ ಒಂದು ವಾರದಿಂದ ಇಬ್ಬರು ಊಟ ಮಾಡುವುದನ್ನು ನಿಲ್ಲಿಸಿದ್ದರು. ಅಲ್ಲದೆ, ಮನೆಯಿಂದ ಹೊರ ಬರಲು ನಿರಾಕರಿಸಿದ್ದರು. ಇಬ್ಬರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಾಯಿ-ಮಗಳ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.
ಇಬ್ಬರನ್ನು ಕಾಕಿನಾಡದ ಸರ್ಕಾರಿ ಆಸ್ಪತ್ರೆಗೆ ಕಳೆದ ಮಂಗಳವಾರ (ಡಿ.20) ದಾಖಲಿಸಲಾಗಿದೆ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಸುಪ್ರಿಯಾ ಮಾತನಾಡಿ, ಇಬ್ಬರು ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯವು ಹದಗೆಡುತ್ತಿದೆ ಎಂದು ಸೂರಿಬಾಬು ಹೇಳಿದರು. ನಮ್ಮ ಸಿಬ್ಬಂದಿ ಹೋಗಿ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ, ಅವರು ಬೆಡ್ ಶೀಟ್ಗಳಿಂದ ಮುಚ್ಚಿಕೊಳ್ಳಲು ಪ್ರಯತ್ನಿಸಿದರು ಮತ್ತು ಮಾತನಾಡಲಿಲ್ಲ. ನಂತರ ಸ್ಥಳೀಯ ಪಂಚಾಯಿತಿ ಅಧಿಕಾರಿಗಳ ನೆರವಿನಿಂದ ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ಸಿ)ದ ಆರೋಗ್ಯ ಕಾರ್ಯಕರ್ತರು ಮನೆಗೆ ಭೇಟಿ ನೀಡಿದಾಗ ಮಹಿಳೆಯರು ಕಿಟಕಿಗಳ ಮೂಲಕ ಮಾತ್ರ ಅವರೊಂದಿಗೆ ಮಾತನಾಡುತ್ತಿದ್ದರು ಹೊರಗಡೆ ಬರುತ್ತಿರಲಿಲ್ಲ. ಅಗತ್ಯವಿದ್ದಲ್ಲಿ ಅಥವಾ ಮಧ್ಯರಾತ್ರಿಯಲ್ಲಿ ಪ್ರಕೃತಿ ಕರೆಗೆ ಮಾತ್ರ ಹಾಜರಾಗುತ್ತಿದ್ದರು. ಇಬ್ಬರು ಮಹಿಳೆಯರು 2022ರಲ್ಲಿ ಒಮ್ಮೆ ಮಾತ್ರ ಪಿಎಚ್ಸಿಗೆ ಭೇಟಿ ನೀಡಿದ್ದರು ಮತ್ತು ಮಾಸ್ಕ್ ಧರಿಸಿ ಬಂದಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋಗಳಲ್ಲಿ, ಇಬ್ಬರೂ ಬೆಡ್ಶೀಟ್ಗಳ ಹಿಂದೆ ಅಡಗಿಕೊಂಡಿರುವುದು ಮತ್ತು ಮೂಗು ಮುಚ್ಚಿಕೊಳ್ಳುವುದು ಮತ್ತು ಯಾರೊಂದಿಗೂ ಮಾತನಾಡಲು ನಿರಾಕರಿಸುವುದು ಕಂಡುಬಂದಿದೆ. ಆರೋಗ್ಯ ಕಾರ್ಯಕರ್ತರು ಭಯಪಡಬೇಡಿ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ ಎಂದು ತಿಳಿಸಿದರು.
ಮಗಳು ವೈದ್ಯಕೀಯ ಚಿಕಿತ್ಸೆಗೆ ಸಹಕರಿಸುತ್ತಿದ್ದು, ಸಲೈನ್ ಡ್ರಿಪ್ಸ್ ಹಾಕಲಾಗುತ್ತಿದೆ. ತಾಯಿ ಆರಂಭದಲ್ಲಿ ಸಾಕಷ್ಟು ಹಠಮಾರಿಯಾಗಿದ್ದರು. ಸದ್ಯ ಆಕೆಯು ಸ್ಪಂದಿಸುತ್ತಿದ್ದಾಳೆ ಎಂದು ಡಾ.ಸುಪ್ರಿಯಾ ಹೇಳಿದ್ದಾರೆ. (ಏಜೆನ್ಸೀಸ್)
ಡಬಲ್ ಮರ್ಡರ್ಗೆ ಬೆಚ್ಚಿಬಿದ್ದ ಬೆಳಗಾವಿ ಜನ: ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರ ಬರ್ಬರ ಹತ್ಯೆ
ರಸ್ತೆ ಅಭಿವೃದ್ಧಿ ವಿಚಾರವಾಗಿ ಕಾಂಗ್ರೆಸ್ ಶಾಸಕಿಯ ಮುಂದೆಯೇ ಕಿತ್ತಾಡಿಕೊಂಡ ಕೈ ಮುಖಂಡರು
6000 ಟ್ವೀಟ್ಗಳಲ್ಲಿ 4000 ಟ್ವೀಟ್ಗೆ ಪರಿಹಾರ: ಈ ಟ್ವಿಟರ್ ಗರ್ಲ್ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ