ಕೊಲ್ಕತ : ಪೆಗಾಸಸ್ ಬೇಹುಗಾರಿಕೆ ಬಗ್ಗೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಿರೋಧಪಕ್ಷಗಳು ಸಂಸತ್ತಿನಲ್ಲಿ ದೊಡ್ಡ ಗದ್ದಲ ಎಬ್ಬಿಸಿರುವ ಸಮಯದಲ್ಲಿ, ಬಂಗಾಳದ ದೀದಿ ಸರ್ಕಾರ ಈ ವಿಚಾರದಲ್ಲಿ ತನಿಖೆಗೆ ಆದೇಶಿಸಿದೆ. ಪೆಗಾಸಸ್ ಸಾಫ್ಟ್ವೇರ್ ಬಳಸಿ ರಾಜ್ಯದಲ್ಲಿ ನಡೆಯುತ್ತಿದೆ ಎನ್ನಲಾದ ಫೋನ್ ಹ್ಯಾಕಿಂಗ್ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯೊಂದು ಸಮಗ್ರ ತನಿಖೆ ನಡೆಸಲಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಬಿಜೆಪಿಯನ್ನು ಎದುರಿಸಲು ದೇಶದ ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಒಟ್ಟಾಗಬೇಕು ಎಂದು ಹೇಳುತ್ತಲೇ ಬಂದಿರುವ ಬ್ಯಾನರ್ಜಿ, ನವದೆಹಲಿಗೆ ಮೂರು ದಿನಗಳ ಪ್ರವಾಸ ಹೊರಟಿದ್ದಾರೆ. ದೆಹಲಿಯಲ್ಲಿ ವಿಪಕ್ಷ ನಾಯಕರ ಭೇಟಿಯ ಉದ್ದೇಶವಿರುವ ಬ್ಯಾನರ್ಜಿ, ದೆಹಲಿಗೆ ತೆರಳುವ ಮುನ್ನ ಇಂದು ಕೊಲ್ಕತದಲ್ಲಿ ಪೆಗಾಸಸ್ ಬಗ್ಗೆ ತನಿಖೆ ನಡೆಸುವ ಮಹತ್ವದ ನಿರ್ಣಯವನ್ನು ತಮ್ಮ ಸಂಪುಟ ತೆಗೆದುಕೊಂಡಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ಕೆಆರ್ಎಸ್ ಡ್ಯಾಂಗೆ ದೃಷ್ಟಿ ನಿವಾರಣೆ ಪೂಜೆ ಮಾಡಿದ ಜೆಡಿಎಸ್ ಶಾಸಕರು!
“ಕೇಂದ್ರ ಸರ್ಕಾರವು ಪೆಗಾಸಸ್ ಪ್ರಕರಣದಲ್ಲಿ ಒಂದು ನಿಷ್ಪಕ್ಷಪಾತವಾದ ತನಿಖೆಯನ್ನು ಆಯೋಜಿಸುತ್ತದೆ ಎಂದು ಭಾವಿಸಿದ್ದೆ. ಆದರೆ ಅದು ನಡೆದಿಲ್ಲವಾದ್ದರಿಂದ ನಮ್ಮ ರಾಜ್ಯ ತನ್ನದೇ ಆದ ತನಿಖೆಯನ್ನು ಕೈಗೊಳ್ಳಲು ನಿರ್ಧರಿಸಿದೆ” ಎಂದು ಬ್ಯಾನರ್ಜಿ ಹೇಳಿದರು. ಈ ತನಿಖಾ ಸಮಿತಿಗೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಾದ ಎಂ.ವಿ.ಲೋಕೂರ್ ಮತ್ತು ಕೊಲ್ಕತ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಜ್ಯೋತಿರ್ಮಯ ಭಟ್ಟಾಚಾರ್ಯ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ. ರಾಜ್ಯದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಮೊಬೈಲ್ ಫೋನುಗಳ ಹ್ಯಾಕಿಂಗ್, ಮಾನಿಟರಿಂಗ್, ಸರ್ವಿಲೆನ್ಸ್, ಟ್ಯಾಪಿಂಗ್, ರೆಕಾರ್ಡಿಂಗ್ ಮುಂತಾದವನ್ನು ಅವರು ತನಿಖೆ ನಡೆಸಲಿದ್ದಾರೆ ಎಂದರು.
“ಹ್ಯಾಕಿಂಗ್ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಸಮಿತಿಯು ತನಿಖೆ ನಡೆಸಲಿದೆ. ಈ ಚಿಕ್ಕ ಹೆಜ್ಜೆಯು ಬೇರೆಯವರಿಗೆ ಎಚ್ಚರಿಕೆ ಘಂಟೆಯಾದೀತೆಂದು ಭಾವಿಸಿದ್ದೇವೆ. ಬಂಗಾಳದಲ್ಲಿ ಹಲವು ಜನರ ಫೋನ್ಗಳನ್ನು ಟ್ಯಾಪ್ ಮಾಡಲಾಗಿದೆ” ಎಂದರು. ಕೆಲವು ದಿನಗಳ ಮುನ್ನ ಮಮತಾರ ಸೋದರಳಿಯನಾದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಕೂಡ ಪೆಗಾಸಸ್ ಸ್ಪೈವೇರ್ನ ಸಂಭಾವ್ಯ ಟಾರ್ಗೆಟ್ಗಳಲ್ಲಿ ಒಬ್ಬರು ಎಂಬ ವಿಚಾರ ಹೊರಬಂದಿತ್ತು. (ಏಜೆನ್ಸೀಸ್)
ಕರೊನಾ ಔಷಧಿ ವಿತರಣೆ: ಸಂಸದ ಗೌತಮ್ ಗಂಭೀರ್ ವಿರುದ್ಧ ಕಾರ್ಯಾಚರಣೆಗೆ ತಡೆ ನಿರಾಕರಿಸಿದ ಸುಪ್ರೀಂ ಕೋರ್ಟ್