ನವದೆಹಲಿ : ಕರೊನಾ ಚಿಕಿತ್ಸೆಗೆ ಬಳಸುವ ಔಷಧಿಯನ್ನು ಅಕ್ರಮವಾಗಿ ಸಂಗ್ರಹಿಸಿ ವಿತರಿಸಿದ್ದ ಆರೋಪದ ಮೇಲೆ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿರುದ್ಧದ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದಾಗ್ಯೂ, ಈ ಕುರಿತು ದೆಹಲಿ ಹೈಕೋರ್ಟ್ಗೇ ಗಂಭೀರ್ ಅರ್ಜಿ ಸಲ್ಲಿಸಬಹುದು ಎಂದಿದೆ.
ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ, ಕರೊನಾ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳು ಸಾಕಷ್ಟು ಪೂರೈಕೆ ಇಲ್ಲದ ಸಮಯದಲ್ಲಿ, ಫ್ಯಾಬಿಫ್ಲು ಮಾತ್ರೆಗಳನ್ನು ಗಂಭೀರ್ ತಮ್ಮ ಕ್ಷೇತ್ರದ ಜನರಿಗೆ ಉಚಿತವಾಗಿ ವಿತರಿಸಿದ್ದರು. ದೆಹಲಿ ಹೈಕೋರ್ಟ್ನಲ್ಲಿ ಈ ವಿಚಾರ ಬಂದಾಗ, ಕರೊನಾ ದುರಂತದ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ರಕ್ಷಕರ ರೀತಿ ವರ್ತಿಸುವುದನ್ನು ಮುಖಂಡರು ನಿಲ್ಲಿಸಬೇಕು ಎಂದು ಕೋರ್ಟ್ ಹೇಳಿತ್ತು. ಡ್ರಗ್ ಕಂಟ್ರೋಲ್ ಅಧಿಕಾರಿಗಳಿಗೆ ಇಂತಹ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿತ್ತು.
ಇದನ್ನೂ ಓದಿ: ಕೊಲೆ, ಸಾಕ್ಷಿನಾಶ: ಪೊಲೀಸ್ ಇನ್ಸ್ಪೆಕ್ಟರ್, ಕಾಂಗ್ರೆಸ್ ನಾಯಕನ ಬಂಧನ
ಹೈಕೋರ್ಟ್ನ ಈ ಹೇಳಿಕೆಯ ವಿರುದ್ಧ ಗಂಭಿರ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಜನಸೇವೆಗಾಗಿ ಮಾಡಿದ ಕೆಲಸದ ಬಗ್ಗೆ ಹೈಕೋರ್ಟ್ ಆಡಿರುವ ಮಾತುಗಳು ಗಂಭೀರ್ ಅವರನ್ನು ತಪ್ಪಿತಸ್ಥರೆಂಬಂತೆ ಕಾಣಿಸುತ್ತವೆ ಎಂದು ಅವರ ವಕೀಲರು ವಾದಿಸಿದರು. ಗಂಭೀರ್ ವಿರುದ್ಧ ಕಾರ್ಯಾಚರಣೆ ನಡೆಯದಂತೆ ಆದೇಶಿಸಬೇಕಾಗಿ ಕೋರಿದರು.
ಆದರೆ, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಎಂ.ಆರ್.ಷಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಆ ರೀತಿಯ ಆದೇಶ ಮಾಡುವುದಿಲ್ಲ ಎಂದಿತು. “ಜನರು ಔಷಧಿಗಾಗಿ ಅಲೆದಾಡುತ್ತಿರುವಾಗ ಒಂದು ಟ್ರಸ್ಟ್ ಅಥವಾ ಜನರ ಗುಂಪಿಗೆ ಔಷಧಿಗಳನ್ನು ವಿತರಿಸಲು ಅವಕಾಶ ನೀಡಲಾಗುವುದಿಲ್ಲ. ಹಾಗೆ ಬಿಟ್ಟರೆ, ಎಲ್ಲರೂ ಔಷಧಿಗಳನ್ನು ಖರೀದಿಸಿ ತಂತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ವಿತರಿಸುತ್ತಾರೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. (ಏಜೆನ್ಸೀಸ್)
ಪ್ರೀ-ಕ್ವಾರ್ಟರ್ಫೈನಲ್ಸ್ಗೆ ಮೇರಿ ಕೋಂ ಮುನ್ನಡೆ; ಚಿನ್ನದ ಮೇಲೆ ಕಣ್ಣು!