ಧರ್ಮಪುರ: ಸಮೀಪದ ತೋಪಿನ ಗೊಲ್ಲಾಳಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಆರತಿ ಉತ್ಸವ ಸಂಭ್ರಮದಿಂದ ಜರುಗಿತು. ಜಾತ್ರೆ ಫೆ.9ರಿಂದ ಪ್ರಾರಂಭವಾಗಿದ್ದು, ಫೆ.15ರ ವರೆಗೆ ಜರುಗಲಿದೆ.
ಹಿರಿಯೂರು ತಾಲೂಕಿನಲ್ಲಿ ಅತ್ಯಂತ (300 ಎಕರೆ) ವಿಶಾಲ ಮತ್ತು ದಟ್ಟವಾದ ಗಿಡಮರಗಳಿಂದ ಕೂಡಿದ ಪ್ರದೇಶವಾಗಿದ್ದು ಪ್ರತಿ ವರ್ಷ ಇಲ್ಲಿ ದೇವಿಯ ಜಾತ್ರೆ ವೈಭವದಿಂದ ನಡೆಯುತ್ತದೆ.
ಚಿತ್ರದುರ್ಗ, ತುಮಕೂರು, ಮೈಸೂರು, ಬೆಂಗಳೂರು, ಬಳ್ಳಾರಿ, ಶಿವಮೊಗ್ಗ, ಆಂಧ್ರಪ್ರದೇಶದ ಮಡಕಶಿರಾ, ಹಿಂದೂಪುರ ಮತ್ತು ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಭಕ್ತರು ತಂಗಲು ಇಲ್ಲಿ ವಸತಿ ಮತ್ತು ಅನ್ನಸಂತರ್ಪಣೆ ಪ್ರತಿದಿನ ಜರುಗಲಿದೆ.
14ರಂದು ದೇವರ ಉತ್ಸವ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 15ರಂದು ದೇವರನ್ನು ಸ್ವಸ್ಥಾನಕ್ಕೆ ಕೊಂಡೊಯ್ಯಲಾಗುವುದು. ಪ್ರತಿ ದಿನ ವಿವಿಧ ಮನರಂಜನೀಯ ಜಾನಪದೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.