ಚೆನ್ನೈ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಅವರ ಪುತ್ರ ಯಾತ್ರಾ ರಾಜಗೆ ತಮಿಳುನಾಡು ಪೊಲೀಸರು 1000 ರೂಪಾಯಿ ದಂಡ ವಿಧಿಸಿರುವುದು ಎಲ್ಲರ ಗಮನ ಸೆಳೆದಿದೆ.
ಪರವಾನಗಿ ಇಲ್ಲದೆ ಬೈಕ್ ಸವಾರಿ ಮಾಡಿದ್ದಕ್ಕೆ ಯಾತ್ರಾ ರಾಜಗೆ ದಂಡ ವಿಧಿಸಲಾಗಿದೆ. ಯಾತ್ರಾ ಬೈಕ್ ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಂಡಿದ್ದಾರೆ. ಅಲ್ಲದೆ, ಯಾತ್ರಾಗೆ ತಮಿಳುನಾಡು ಪೊಲೀಸರು ಬುದ್ಧಿ ಮಾತು ಸಹ ಹೇಳಿದ್ದಾರೆ.
ಶುಕ್ರವಾರ (ನ.17) ಪೋಸ್ ಗಾರ್ಡನ್ನಿಂದ ಧನುಷ್ ಮನೆಗೆ ಯಾತ್ರಾ ಆರ್15 ಬೈಕ್ ಚಾಲನೆ ಮಾಡಿಕೊಂಡು ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಾಕಷ್ಟು ಟೀಕೆಗಳಿಗೆ ಗುರಿಯಾಯಿತು. ಅಪ್ರಾಪ್ತರಿಗೆ ಬೈಕ್ ಓಡಿಸಲು ನಿರ್ಬಂಧವಿದೆ. ಆದರೆ, 17 ವರ್ಷದ ಧನುಷ್ ಪುತ್ರ ಆರಾಮಾಗಿ ಬೈಕ್ ಚಲಾಯಿಸಿಕೊಂಡು ಹೋಗಿದ್ದಕ್ಕೆ ನೆಟ್ಟಿಗರು ಟೀಕೆ ಮಾಡಿ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು. ಇದರ ಬೆನ್ನಲ್ಲೇ ಪೊಲೀಸರು ಯಾತ್ರಾಗೆ ದಂಡ ವಿಧಿಸಿದ್ದಾರೆ.
ಅಂದಹಾಗೆ ಧನುಷ್ ಮತ್ತು ಐಶ್ವರ್ಯಾ ರಜಿನಿಕಾಂತ್ ತಮ್ಮ ಸುದೀರ್ಘ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದ್ದರೂ ಇಬ್ಬರು ಚೆನ್ನೈನ ಪೋಸ್ ಗಾರ್ಡ್ ಏರಿಯಾದಲ್ಲಿ ಅಕ್ಕ-ಪಕ್ಕದಲ್ಲೇ ನೆಲೆಸಿದ್ದಾರೆ. ತಮ್ಮ ತಾಯಿಯನ್ನು ಭೇಟಿ ಮಾಡಲು ಇಬ್ಬರು ಮಕ್ಕಳ ಅನುಕೂಲಕ್ಕಾಗಿ ಧನುಷ್ ಇತ್ತೀಚೆಗೆ ಪೋಸ್ ಗಾರ್ಡನ್ ಬಳಿ ಹೊಸ ಕಟ್ಟಡವನ್ನು ನಿರ್ಮಿಸಿದ್ದಾರೆ.
ಡಿವೋರ್ಸ್ ಘೋಷಣೆ
2022ರ ಜ. 17 ರಂದು ಟ್ವೀಟ್ ಮೂಲಕ ಡಿವೋರ್ಸ್ ನಿರ್ಧಾರ ತಿಳಿಸಿದ ಧನುಷ್, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್ ಟ್ವೀಟ್ ಮಾಡಿದ್ದರು. ಇಷ್ಟೇ ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿದ್ದರು. ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದರು. ಐಶ್ವರ್ಯಾ ಕೂಡ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದರು.
ಐಶ್ವರ್ಯಾ ಮತ್ತು ಧನುಷ್ 2004ರ ನವೆಂಬರ್ 18ರಂದು ಮದುವೆಯಾದರು. ವಿವಾಹಕ್ಕೂ ಮುನ್ನ ದಂಪತಿ 6 ತಿಂಗಳು ಡೇಟಿಂಗ್ ನಡೆಸಿದ್ದರು. ದಂಪತಿಗಳಿಗೆ ಯಾತ್ರಾ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. (ಏಜೆನ್ಸೀಸ್)
CWC2023 INDvsAUS: ಟೀಮ್ ಇಂಡಿಯಾ ವಿಶ್ವಕಪ್ ಗೆಲುವು!; ಅಯೋಧ್ಯಾ ರಾಮ ಮಂದಿರದ ಅರ್ಚಕರು ಹೇಳಿದ್ದಿಷ್ಟು
ಫೈನಲ್ನಲ್ಲಿ ನೋಡಿ! ಡ್ರೆಸ್ ಬಗ್ಗೆ ನಾಲಿಗೆ ಹರಿಬಿಟ್ಟವರಿಗೆ ಮಯಾಂತಿ ಕೊಟ್ಟ ಮಾತಿನ ಪಂಚ್ ಹೀಗಿತ್ತು…
ಆಂಧ್ರಾಗೆ ಹವಾಮಾನ ಇಲಾಖೆ ಅಲರ್ಟ್: ಕೋಲಾರದಲ್ಲೂ ತುಂತುರು ಮಳೆ ಸಾಧ್ಯತೆ…