ನವದೆಹಲಿ: ಲಡಾಖ್ ಪೂರ್ವಭಾಗದಲ್ಲಿ ಸೇನೆಯನ್ನು ಹಿಂದೆಗೆದುಕೊಳ್ಳುವ ಬಗ್ಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವ್ಯಾಂಗ್ ಯೀ ನಡುವೆ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆದಿದ್ದರೂ, ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಜಟಿಲಗೊಂಡಿದೆ ಎಂದು ಚೀನಾ ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಚೀನಾ, ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ತುಂಬಾ ಜಟಿಲವಾಗಿದೆ. ಉಭಯ ರಾಷ್ಟ್ರಗಳು ಒಪ್ಪಿತವಾಗಿರುವ ವ್ಯೋಹಾತ್ಮಕ ನಿರ್ಧಾರಗಳಿಗೆ ಬದ್ಧರಾಗುಳಿಯಬೇಕೆ ಹೊರತು, ಬೆದರಿಕೆ ತಂತ್ರವನ್ನು ಅನುಸರಿಸಬಾರದು ಎಂದು ಹೇಳಿದೆ. ದೋವಲ್-ವ್ಯಾಂಗ್ ನಡುವಿನ ಮಾತುಕತೆಯ ಬಳಿಕ ಚೀನಾ ಈ ಹೇಳಿಕೆ ಬಿಡುಗಡೆ ಮಾಡಿದೆ.
ಜೂನ್ 30ರ ಸಭೆ ಹಾಗೂ ಅದಕ್ಕೂ ಮೊದಲು ಭಾರತದ 14 ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಮತ್ತು ಸೌತ್ ಕ್ಸಿನ್ಕಿಯಾಂಗ್ ಮಿಲಿಟರಿ ವಲಯದ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ನಡುವಿನ ಮಾತುಕತೆಗಳನ್ನು ಪ್ರಸ್ತಾಪಿಸಿ ಚೀನಾ ಈ ಹೇಳಿಕೆ ನೀಡಿದೆ.
ಇದನ್ನೂ ಓದಿ: ಕೆ.ಪಿ. ಓಲಿಗೆ ಸಂಕಷ್ಟ, ಹೊಸ ಗಡಿಠಾಣೆ ಬಿಟ್ಟು ಓಡಿದರಾ ನೇಪಾಳ ಯೋಧರು
ಲಡಾಖ್ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವಿನ ಮಿಲಿಟರಿ ಮತ್ತು ರಾಜತಾಂತ್ರಿಕ ಸಭೆಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಈ ವಿಷಯವಾಗಿ ಒಮ್ಮತಾಭಿಪ್ರಾಯಕ್ಕೆ ಬರುವ ನಿಟ್ಟಿನಲ್ಲಿ ಮಾತುಕತೆಗಳನ್ನು ಮುಂದುವರಿಸಲು ಸಮ್ಮತಿಸಲಾಗಿದೆ. ಈ ಸಭೆಯಲ್ಲಿ ಒಪ್ಪಿಕೊಳ್ಳಲಾದ ಅಂಶಗಳನ್ನು ಶೀಘ್ರವೇ ಅನುಷ್ಠಾನಕ್ಕೆ ತರಬೇಕು. ಹಾಗೂ ಆದಷ್ಟು ಬೇಗ ಸೇನೆಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ವ್ಯಾಂಗ್ ಅವರು ದೋವಲ್ ಅವರಿಗೆ ಹೇಳಿದ್ದರು ಎನ್ನಲಾಗಿದೆ.
ದೋವಲ್ ಮತ್ತು ವ್ಯಾಂಗ್ ನಡುವಿನ ಮಾತುಕತೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿದ್ದ ಭಾರತ, ಲಡಾಖ್ನಲ್ಲಿ ಆದಷ್ಟು ಬೇಗ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆ ಮುಗಿಸಬೇಕು ಮತ್ತು ಹಂತ ಹಂತವಾಗಿ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಹೇಳಿತ್ತು.
ಕರೊನಾ ಸೋಂಕಿಗೆ ಟೊಯೋಟಾ ಕಂಪನಿ ಉದ್ಯೋಗಿ ಬಲಿ, ತಂದೆ ಸತ್ತ ನಾಲ್ಕೇ ದಿನಕ್ಕೆ ಮಗನ ಸಾವು