ನವದೆಹಲಿ : ರೈತ ಹೋರಾಟದ ಹೆಸರಿನಲ್ಲಿ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಗಲಭೆ ಮತ್ತು ಹಿಂಸಾಚಾರದ ವೇಳೆ ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ಸ್ತಂಬದಲ್ಲಿ ಧಾರ್ಮಿಕ ಬಾವುಟವನ್ನು ಹಾರಿಸಿದ ಎನ್ನಲಾದ ಪಂಜಾಬಿ ನಟ ದೀಪ್ ಸಿಧು, ದೆಹಲಿ ಪೊಲೀಸರು ತಮ್ಮ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೆಹಲಿ ಹಿಂಸಾಚಾರವನ್ನು ಉತ್ತೇಜಿಸಿದ ಆರೋಪಿಯಾಗಿ ಬಹಳ ಸಮಯ ತಲೆಮರೆಸಿಕೊಂಡಿದ್ದ ನಂತರ ಬಂಧಿತನಾಗಿದ್ದ ಸಿಧುಗೆ ದೆಹಲಿ ಮ್ಯಾಜಿಸ್ಟ್ರೇಟರ ಕೋರ್ಟ್ ಶನಿವಾರ ಜಾಮೀನು ನೀಡಿತ್ತು. ಜಾಮೀನಿನ ಮೇಲೆ ಸಿಧು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದೆಹಲಿ ಪೊಲೀಸ್ ಅಪರಾಧ ವಿಭಾಗದವರು, ರಾಷ್ಟ್ರೀಯ ಸ್ಮಾರಕಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಆತನನ್ನು ಮತ್ತೆ ಬಂಧಿಸಿದ್ದರು. ಇದೀಗ ನ್ಯಾಯಾಂಗ ಬಂಧನದಲ್ಲಿರುವ ಸಿಧುವನ್ನು ಮತ್ತೆ ವಿಚಾರಣೆ ಮಾಡಲು ದೆಹಲಿ ಪೊಲೀಸರು, ನಾಲ್ಕು ದಿನಗಳ ಪೊಲೀಸ್ ರಿಮ್ಯಾಂಡ್ಗೆ ಕಳುಹಿಸಬೇಕೆಂದು ನ್ಯಾಯಾಲಯವನ್ನು ಕೋರಿದ್ದಾರೆ.
ಇದನ್ನೂ ಓದಿ: ಸಾವಿನ ದವಡೆಗೆ ನೂಕುವ ಕ್ರಿಮಿ…. ಮತ್ತೆ ಸುದ್ದಿಯಲ್ಲಿ ಬಿಗ್ಬಾಸ್ ಸ್ಪರ್ಧಿ ಚೈತ್ರಾ ಕೋಟೂರು
ಈ ಪ್ರಕರಣದಲ್ಲಿ ಎರಡನೇ ಎಫ್.ಐ.ಆರ್. ದಾಖಲಿಸಿ ರಿಮ್ಯಾಂಡ್ ಕೇಳುತ್ತಿರುವುದನ್ನು ವಿರೋಧಿಸಿದ ಸಿಧು ವಕೀಲ ಅಭಿಷೇಕ್ ಗುಪ್ತ, “ಅದಾಗಲೇ ಜಾಮೀನು ನೀಡಲಾಗಿರುವ ಕೇಸಿನಲ್ಲಿರುವ ಆರೋಪಗಳ ಮೇಲೇ ಎರಡನೇ ಕೇಸನ್ನು ದಾಖಲಿಸಿ ಕ್ರಿಮಿನಲ್ ಪ್ರಕ್ರಿಯೆಯೊಂದಿಗೆ ಮೋಸದ ಆಟ ಆಡುತ್ತಿದ್ದಾರೆ. ಇದು ದುರುದ್ದೇಶದಿಂದ ಮಾಡಿರುವ ಕಾನೂನುಬಾಹಿರ ಬಂಧನ” ಎಂದರು. “ಶನಿವಾರ ಜಾಮೀನು ಆದೇಶ ಹೊರಬಿದ್ದ ಮೇಲೇ ಏಕೆ ಬಂಧಿಸಿದರು. ಪೊಲೀಸರು ಚಕ್ರವರ್ತಿಗಳಂತೆ ವರ್ತಿಸುತ್ತಿದ್ದಾರೆ. ನಾವು ಕಾನೂನು ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದೇವೆ. ಇಂಥ ಅಧಿಕಾರಿಗಳ ಮೇಲೆ ಇಲಾಖೆ ಕ್ರಮ ತೆಗೆದುಕೊಳ್ಳಬೇಕು” ಎಂದರು.
ಕೋರ್ಟ್ನಲ್ಲಿ ಹಾಜರಿದ್ದ ಸಿಧು, “ಇದೇ ಅಧಿಕಾರಿಗಳ ತಂಡ ನನ್ನನ್ನು ಈ ಮುನ್ನ ರಿಮ್ಯಾಂಡ್ನಲ್ಲಿದ್ದಾಗ ವಿಚಾರಣೆ ಮಾಡಿದೆ. ನಾನು ಪೂರ್ಣ ರೀತಿಯಲ್ಲಿ ಸಹಕರಿಸುತ್ತೇನೆ. ನ್ಯಾಯಾಂಗ ಬಂಧನದಲ್ಲಿ ನನ್ನೊಂದಿಗೆ ಅವರು ಎಷ್ಟು ಗಂಟೆ ಬೇಕಾದ್ರೂ ಮಾತನಾಡಬಹುದು” ಎಂದರು. ವಿಚಾರಣೆ ನಡೆಸಿದ ಮುಖ್ಯ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಗಜೇಂದ್ರ ಸಿಂಗ್ ನಗರ್ ಅವರು ಈ ಬಗ್ಗೆ ಆದೇಶವನ್ನು ಕಾಯ್ದಿರಿಸಿದ್ದಾರೆ. (ಏಜೆನ್ಸೀಸ್)
ರಾಜಧಾನಿಯಲ್ಲಿ ಒಂದು ವಾರ ಲಾಕ್ಡೌನ್ ; ‘ಇಷ್ಟು ಕೇಸ್ ಬಂದರೆ ಆರೋಗ್ಯ ವ್ಯವಸ್ಥೆ ಕುಸಿದೀತು’ ಎಂದ ಸಿಎಂ
ಮಗ ಚೇತರಿಸಿಕೊಳ್ಳಲಿಲ್ಲ ಅಂತ ಮಗಳಿಗೂ ವಿಷವುಣಿಸಿದಳು… ಮನ ಕಲಕುತ್ತೆ ಈ ಘಟನೆ