ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ಗಲ್ಲಿಗೇರಿಸಲು ಇನ್ನು ಮೂರು ದಿನ ಬಾಕಿ ಇದೆ. ಈ ಬಾರಿಯಾದರೂ ಆದೇಶ ನೀಡಲಾದ ದಿನಾಂಕ (ಮಾ.20)ದಂದೇ ಅವರು ನೇಣುಗಂಬಕ್ಕೆ ಏರುತ್ತಾರಾ ಎಂಬುದು ಕುತೂಹಲ. ಈ ಮಧ್ಯೆ ಅಪರಾಧಿಗಳು ಮತ್ತೊಂದಷ್ಟು ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ.
ವಿನಯ್ ಶರ್ಮಾ, ಅಕ್ಷಯ್ ಕುಮಾರ್ ಹಾಗೂ ಪವನ್ ಗುಪ್ತಾ ತಮ್ಮ ಮರಣದಂಡನೆ ಶಿಕ್ಷೆಯನ್ನು ಹಿಂಪಡೆಯಬೇಕು ಎಂದು ಮಾ.16ರಂದು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಇತ್ತ ಅಪರಾಧಿ ಮುಕೇಶ್ ಸಿಂಗ್ ಪರ ವಕೀಲ ಸುಪ್ರೀಂಕೋರ್ಟ್ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದು, ನಿರ್ಭಯಾ ಅತ್ಯಾಚಾರ, ಹತ್ಯೆ ನಡೆದ ಸ್ಥಳದಲ್ಲಿ ಮುಕೇಶ್ ಇರಲೇ ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ಒಟ್ಟಿನಲ್ಲಿ ಈ ಬಾರಿಯೂ ನೇಣಿಗೇರುವುದು ಡೌಟ್ ಎನ್ನುತ್ತಿವೆ ಸದ್ಯದ ಕೆಲವು ಬೆಳವಣಿಗೆಗಳು.
ಈ ಮಧ್ಯೆ ಅಪರಾಧಿ ಅಕ್ಷಯ್ ಕುಮಾರ್ಗೆ ಆತನ ಪತ್ನಿ ಬಹುದೊಡ್ಡ ಶಾಕ್ ನೀಡಿದ್ದಾರೆ. ಅಕ್ಷಯ್ ಕುಮಾರ್ನಿಂದ ವಿಚ್ಛೇದನ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಯಾಗಿರುವ ಅಕ್ಷಯ್ಕುಮಾರ್ನನ್ನು ನೇಣುಗಂಬಕ್ಕೇರಿಸಿದ ಬಳಿಕ ಆತ ಸಾಯುತ್ತಾನೆ. ಅದಾದ ಮೇಲೆ ನಾನೊಬ್ಬ ಅತ್ಯಾಚಾರಿಯ ವಿಧವಾ ಪತ್ನಿ ಎಂಬ ಕಳಂಕಹೊತ್ತುಕೊಂಡು ಬದುಕಲು ಸಾಧ್ಯವೇ ಇಲ್ಲ. ನನಗೆ ಅತ್ಯಾಚಾರಿ ಎನಿಸಿಕೊಂಡವನಿಂದ ವಿಧವೆಯಾಗಲು ಇಷ್ಟವಿಲ್ಲ ಎಂದು ಹೇಳಿರುವ ಅಕ್ಷಯ್ ಕುಮಾರ್ ಪತ್ನಿ, ನನಗೆ ಡಿವೋರ್ಸ್ ಕೊಡಿಸಿ ಎಂದು ಔರಂಗಾಬಾದ್ನ ಕೌಟುಂಬಿಕ ನ್ಯಾಯಾಲಯಕ್ಕೆ ಮಾರ್ಚ್. 13ರಂದು ಅರ್ಜಿ ಸಲ್ಲಿಸಿದ್ದಾರೆ.
ನನ್ನ ಪತಿ ಮುಗ್ಧ. ಆದರೆ ಆತನನ್ನು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಆತನನ್ನು ನೇಣಿಗೇರಿಸಲಾಗುತ್ತದೆ. ಅದಾದ ಮೇಲೆ ನಾನು ವಿಧವೆಯಾಗುತ್ತೇನೆ. ಅತ್ಯಾಚಾರ ಪ್ರಕರಣ ಅಪರಾಧಿಯೆನಿಸಿಕೊಂಡು ಸಾಯುವ ಅವನ ವಿಧವಾ ಪತ್ನಿಯಾಗಿ ನಾನು ಬಾಳಲಾರೆ ಎಂದು ಹೇಳಿದ್ದಾರೆ.
ಯಾವುದೇ ಪುರುಷ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡರೆ ಆತನ ಪತ್ನಿ ವಿಚ್ಛೇದನ ಪಡೆಯಬಹುದು. ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ ಎಂದು ಆಕೆಯ ಪರ ವಕೀಲರು ತಿಳಿಸಿದ್ದಾರೆ. ಅಕ್ಷಯ್ ಕುಮಾರ್ನನ್ನು ನೇಣಿಗೇರಿಸುವ ಒಂದು ದಿನದ ಮೊದಲು ಅಂದರೆ ಮಾ.19ರಂದು ಔರಂಗಾಬಾದ್ ನ್ಯಾಯಾಲಯ ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ ಎನ್ನಲಾಗಿದೆ. (ಏಜೆನ್ಸೀಸ್)
ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮೊದಲ ಕರೊನಾ ಪ್ರಕರಣ; 68ವರ್ಷದ ಮಹಿಳೆಗೆ ಸೋಂಕು
ವಿಶ್ವಾಸಮತ ಯಾಚನೆ ಸಾಧ್ಯವಿಲ್ಲ ಎಂದ ಮಧ್ಯಪ್ರದೇಶ ಕಾಂಗ್ರೆಸ್; ಬಿಜೆಪಿ ವಿರುದ್ಧ ಸುಪ್ರೀಂಕೋರ್ಟ್ಗೆ ಅರ್ಜಿ