ರಾಣೆಬೆನ್ನೂರ: ಪೈಪ್ ಕಳ್ಳತನ ಮಾಡಿದ ಅಪರಾಧಿಗೆ 16 ದಿನ ಜೈಲು ಶಿಕ್ಷೆ ವಿಧಿಸಿ ಇಲ್ಲಿಯ 2ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಅನಿತಾ ಒ.ಎ. ತೀರ್ಪು ನೀಡಿ ಬುಧವಾರ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ನಲವಾಗಿಲ ಗ್ರಾಮದ ತಿಪ್ಪೇಶ ಸಿದ್ದಪ್ಪ ಸಿರಗೇರಿ (47) ಶಿಕ್ಷೆಗೊಳಗಾದ ಅಪರಾಧಿ.
ಈತ 2018 ಜುಲೈ 9ರಂದು ಕುಮಾರಪಟ್ಟಣದ ಹರಿಹರ ಪಾಲಿಫೈಬರ್ ಫ್ಯಾಕ್ಟರಿಯಲ್ಲಿನ ನೀಲಗಿರಿ ಪ್ಲಾಂಟೇಷನಲ್ಲಿ ನೀರನ್ನು ಬಿಡಲು ಅಳವಡಿಸಿದ್ದ 6 ಹಾಗೂ 4 ಇಂಚಿನ ಪೈಪ್ಅನ್ನು ಕಲ್ಲಿನಿಂದ ಒಡೆದು ಒಟ್ಟು 34 ಇಂಚು ಉದ್ದದ ಪೈಪ್ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ.
ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷಾೃಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಕವಿತಾ ಎಸ್.ಜಿ. ವಾದ ಮಂಡಿಸಿದ್ದರು.