ನವದೆಹಲಿ: ಮಧ್ಯಪ್ರದೇಶದ ರಾಜಕೀಯದಲ್ಲಿ ದಿನಕ್ಕೊಂದು ಡ್ರಾಮಾ ನಡೆಯುತ್ತಿದೆ. ಸಂಖ್ಯಾಬಲ ಕಳೆದುಕೊಂಡಿರುವ ಕಮಲನಾಥ್ ಸರ್ಕಾರ ಇನ್ನೂ ಬಹುಮತ ಸಾಬೀತು ಪಡಿಸಿಲ್ಲ. ಮಾ.16ರಂದು ವಿಶ್ವಾಸಮತ ಯಾಚನೆ ಮಾಡುವಂತೆ ರಾಜ್ಯಪಾಲ ಲಾಲ್ ಜೀ ಟಂಡನ್ ಕಮಲನಾಥ್ಗೆ ಮಾ.14ರಂದು ಸೂಚಿಸಿದ್ದರು.
ಆದರೆ ಮಾ.16ರಂದು ವಿಧಾನಸಭೆ ಕಲಾಪವನ್ನು ಮುಂದೂಡಲಾಗಿತ್ತು. ಕರೊನಾ ಕಾರಣಕ್ಕೆ ಮಾ.26ರವರೆಗೆ ಕಲಾಪ ಮುಂದೂಡಿದ್ದರಿಂದ ಕಮಲನಾಥ್ಗೆ ತುಸು ನಿರಾಳವಾಗಿತ್ತು. ಆದರೆ ಸಂಜೆ ರಾಜ್ಯಪಾಲ ಕಮಲನಾಥ್ ಅವರು ಮತ್ತೆ ಶಾಕ್ ನೀಡಿದ್ದರು. ಮಾ.17ರಂದು (ಇಂದು)ವಿಶ್ವಾಸಮತ ಯಾಚನೆ ಮಾಡಬೇಕು. ಅದಕ್ಕೆ ಒಪ್ಪಿಗೆ ಇಲ್ಲವೆಂದರೆ ರಾಜ್ಯ ಸರ್ಕಾರಕ್ಕೆ ಬಹುಮತ ಇಲ್ಲವೆಂದೇ ಪರಿಗಣಿಸುತ್ತೇವೆ ಎಂದು ಪತ್ರದ ಮೂಲಕ ತಿಳಿಸಿದ್ದರು.
ಈ ಮಧ್ಯೆ ಬಿಜೆಪಿ ನಾಯಕರು ಕಮಲನಾಥ್ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಕೂಡಲೇ ವಿಶ್ವಾಸಮತ ಯಾಚನೆ ಮಾಡಲು ಸಿಎಂಗೆ ಸೂಚಿಸಿ ಎಂದು ಅರ್ಜಿ ಸಲ್ಲಿಸಿದ್ದಾರೆ. ವಿಶ್ವಾಸಮತ ಯಾಚನೆಗೆ ಒತ್ತಾಯಿಸಿ ಬಿಜೆಪಿ ಸಲ್ಲಿಸಿರುವ ಅರ್ಜಿಯ ಬಗ್ಗೆ ನಿಮ್ಮ ನಿಲುವು ಏನು ಎಂಬುದನ್ನು ಇನ್ನು 12 ತಾಸಿನ ಒಳಗೆ ತಿಳಿಸುವಂತೆ ಸುಪ್ರೀಂಕೋರ್ಟ್ ಕೂಡ ಸಿಎಂ ಕಮಲನಾಥ್ ಹಾಗೂ ಮಧ್ಯಪ್ರದೇಶ ವಿಧಾನಸಭೆ ಕಾರ್ಯದರ್ಶಿಗೆ ಸೂಚಿಸಿದೆ.
ಈಗ ಬಿಜೆಪಿ ಸಲ್ಲಿಸಿದ ಅರ್ಜಿಗೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಮಧ್ಯಪ್ರದೇಶದಲ್ಲಿ ವಿಶ್ವಾಸಮತ ಯಾಚನೆ ಸಾಧ್ಯವಿಲ್ಲ. ಯಾಕೆಂದರೆ ಕಾಂಗ್ರೆಸ್ನ 16 ಶಾಸಕರನ್ನು ಬೆಂಗಳೂರಿನಲ್ಲಿ ಹಿಡಿದಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದೆ.
ಚುನಾಯಿತ ಶಾಸಕರು ವಿಧಾನಸಭೆಯಲ್ಲಿ ಹಾಜರಿದ್ದರೆ ಮಾತ್ರ ವಿಶ್ವಾಸಮತಯಾಚನೆ ಸಾಧ್ಯ. ಆದರೆ ನಮ್ಮ 16ಶಾಸಕರು ಬೆಂಗಳೂರಿನಲ್ಲಿ ಇದ್ದಾರೆ. ಒಟ್ಟು 22 ಶಾಸಕರು ರಾಜೀನಾಮೆ ನೀಡಿದ್ದಾರೆ. ಹೀಗಿರುವಾಗ ಬಹುಮತ ಸಾಬೀತು ಹೇಗೆ ಸಾಧ್ಯ. ತೆರವಾದ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದ ಬಳಿಕವಷ್ಟೇ ವಿಶ್ವಾಸಮತ ಯಾಚನೆ ಮಾಡಬಹುದು ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಮಧ್ಯಪ್ರದೇಶ ಕಾಂಗ್ರೆಸ್ನ ಮುಖ್ಯ ಸಚೇತಕ ಗೋವಿಂದ್ ಸಿಂಗ್ ಅವರು ಸಲ್ಲಿಸಿರುವ ಈ ಅರ್ಜಿಯಲ್ಲಿ, ಬಿಜೆಪಿ ಆಡಳಿತ ಕರ್ನಾಟಕ ಮತ್ತು ಕೇಂದ್ರ ಸರ್ಕಾರವನ್ನು ದೂರಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಮತ್ತು ಪ್ರಜಾಪ್ರಭುತ್ವಕ್ಕೇ ಕುತ್ತು ತಂದಿರುವ ಬಿಜೆಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ವೋಚ್ಛ ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)
ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಇಂದೇನಾಗಲಿದೆ?: ಗಮನಾರ್ಹ ಹತ್ತು ಅಂಶಗಳು ಇಲ್ಲಿವೆ…