More

    ಕುರುಬ ಸಮುದಾಯ ಈ ಬಾರಿ ಬಿಜೆಪಿ ಬೆಂಬಲಿಸಬೇಕು; ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಮನವಿ

    ಹಾವೇರಿ: ಕನಕದಾಸರಿಗೆ ಸಂಬಂಧಿಸಿದ ಕಾಗಿನೆಲೆ ಮತ್ತು ಬಾಡ ಸ್ಥಳಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಹೊಂದಿವೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಬಿ.ಎಸ್.ಯಡಿಯೂರಪ್ಪನವರ ಕಾಲದಲ್ಲಿ ಜಾರಿಗೆ ಬಂತು. ಕುರುಬ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ಬಿಜೆಪಿಯನ್ನು ಸಮುದಾಯದ ಬಾಂಧವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮನವಿ ಮಾಡಿದರು.
    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ನಂತರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ರೈಲ್ವೆ ಮಂತ್ರಿಯಾದರು, ವೀರಪ್ಪ ಮೊಯ್ಲಿ ಗೆದ್ದು ಪೆಟ್ರೋಲಿಯಂ ಸಚಿವರಾದರು, ಸದಾನಂದ ಗೌಡರು ರಸಗೊಬ್ಬರ ಸಚಿವರಾದರು. ಹೀಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾದವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಪರಂಪರೆ ಇದೆ. ಅದೇ ರೀತಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಕೂಡ ಈ ಬಾರಿ ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾಗುವ ಯೋಗವಿದೆ ಎಂದರು.
    ಬೊಮ್ಮಾಯಿ ಅವರಿಗೆ ಸಹನೆ, ಸೌಮ್ಯತೆ, ಜನರನ್ನು ಪ್ರೀತಿಸುವ ಗುಣವಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಅವರ ಧ್ವನಿ ಸಂಸತ್‌ನಲ್ಲಿ ಪ್ರತಿಧ್ವನಿಸಬೇಕಾಗಿದೆ. ಹಾವೇರಿ ಲೋಕಸಭಾ ಕ್ಷೇತ್ರ ಸಮಗ್ರ ಅಭಿವೃದ್ಧಿಯಾಗಬೇಕಿದೆ. ಹೀಗಾಗಿ ಬೊಮ್ಮಾಯಿ ಅವರನ್ನು ಮತದಾರರು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
    ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕುರಿಗಾರರಿಗೆ 300 ಕೋಟಿಯ ಯೋಜನೆ ರೂಪಿಸಿ, 20 ಸಾವಿರ ಕುಟುಂಬಗಳಿಗೆ ನೆರವು ನೀಡಲು ಕ್ರಮ ಕೈಗೊಂಡಿದ್ದರು. ಕಾಂಗ್ರೆಸ್ ಸರ್ಕಾರ ಬಂದ ನಂತರ ಆ ಯೋಜನೆ ಸ್ಥಗಿತಗೊಂಡಿದೆ ಎಂದು ಟೀಕಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಭೋಜರಾಜ ಕರೂದಿ, ಬಸವರಾಜ ಮತ್ತೂರು, ನೀಲಪ್ಪ ಚಾವಡಿ, ಮಲ್ಲೇಶ ಬಣಕಾರ ಇದ್ದರು.
    ಬೊಮ್ಮಾಯಿ ಗೆದ್ದರೆ ಎಸ್ಟಿ ಮೀಸಲಾತಿ
    ಕುರುಬ ಸಮುದಾಯದವರಿಗೆ ಬಿಜೆಪಿಯವರು ಈ ಬಾರಿ ಟಿಕೆಟ್ ನೀಡಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ, ಎಲ್ಲ ಸಮುದಾಯಗಳಿಗೂ ಕೆಲವೊಮ್ಮೆ ಟಿಕೆಟ್ ನೀಡಲು ಸಾಧ್ಯವಾಗುವುದಿಲ್ಲ. ಆದರೆ, ಕುರುಬ ಸಮುದಾಯದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ ಶ್ರೇಯ ಬಿಜೆಪಿಗೆ ಸಲ್ಲುತ್ತದೆ. ಕಾಗಿನೆಲೆ ಶ್ರೀಗಳು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದರು. ಆಗ ಬೊಮ್ಮಾಯಿಯವರು ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಿಕೊಟ್ಟಿದ್ದಾರೆ. ಬೊಮ್ಮಾಯಿ ಸಂಸದರಾದರೆ, ಎಸ್.ಟಿ. ಮೀಸಲಾತಿ ಸಿಗುವ ವಿಶ್ವಾಸವಿದೆ ಎಂದರು.
    ಈಶ್ವರಪ್ಪಗೆ ಧೈರ್ಯ ಕಡಿಮೆ
    ಈಶ್ವರಪ್ಪನವರ ಪುತ್ರನಿಗೆ ಬಿಜೆಪಿ ಟಿಕೆಟ್ ಸಿಗದಿರುವ ಬಗ್ಗೆ ಪ್ರಶ್ನಿಸಿದಾಗ, ಈಶ್ವರಪ್ಪನವರು ರಾಯಣ್ಣ ಬ್ರಿಗೇಡ್ ಕಟ್ಟಿದರು. ದೆಹಲಿ ವರಿಷ್ಠರ ಸೂಚನೆ ಬಂದ ತಕ್ಷಣ, ಕೂಡಲಸಂಗಮದಲ್ಲಿ ಪಾದಯಾತ್ರೆ ಮೊಟಕುಗೊಳಿಸಿ ಪರಾರಿಯಾದರು. ಅವರಿಗೆ ಧೈರ್ಯದ ಕೊರತೆಯಿದೆ ಅನಿಸುತ್ತದೆ. ಯಡಿಯೂರಪ್ಪ ಅವರಿಗೆ ಬದ್ಧತೆ, ಧೈರ್ಯ ಎರಡೂ ಇರುವ ಕಾರಣ ಜನನಾಯಕರಾಗಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts