ನವದೆಹಲಿ: ತೀವ್ರ ಆತಂಕಕಾರಿ ಮಟ್ಟದಲ್ಲಿದ್ದ ರಾಷ್ಟ್ರ ರಾಜದಾನಿ ದೆಹಲಿಯ ಗಾಳಿಯ ಗುಣಮಟ್ಟ ಗುರುವಾರದ ದೀಪಾವಳಿ ಸಂಭ್ರಮದ ನಂತರ ಅಪಾಯಕಾರಿ ಮಟ್ಟ ತಲುಪಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ವಾಹನ ದಟ್ಟಣೆ ಮತ್ತು ಕೈಗಾರಿಕಾ ವಾಯು ಮಾಲಿನ್ಯ, ಅಕ್ಕಪಕ್ಕದ ಪ್ರದೇಶಗಳ ರೈತರಿಂದ ಕೋಲು ಸುಡುವಿಕೆಗಳು ಈವರೆಗೆ ದೆಹಲಿಯ ವಾಯುಪರಿಸರಕ್ಕೆ ಸವಾಲೊಡ್ಡಿದ್ದರೆ, ದೀಪಾವಳಿ ಆಚರಣೆ ಸಂದರ್ಭದಲ್ಲಿ ಹೊಡೆಯಲಾದ ಪಟಾಕಿಗಳು ಗಾಳಿಗೆ ಮತ್ತಷ್ಟು ವಿಷಕಾರಿ ಗುಣ ನೀಡಿದೆ ಎನ್ನಲಾಗಿದೆ.
ಇಂದು ಬೆಳಗ್ಗೆ ನಗರದ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಅಳೆಯಲಾದ ಪಾರ್ಟಿಕ್ಯುಲೇಟ್ ಮ್ಯಾಟರ್ (PM) 2.5 ರ ಸಾಂದ್ರತೆಯು ಪ್ರತಿ ಕ್ಯೂಬಿಕ್ ಮೀಟರ್ಗೆ 999 ರಷ್ಟಿತ್ತು. ವಿಶ್ವ ಆರೋಗ್ಯ ಸಂಸ್ಥೆ(WHO)ಯ ನಿಗದಿತ ಸುರಕ್ಷಿತ ಪಿಎಂ ಮಿತಿಯು 25 ಆಗಿದೆ. ಜೊತೆಗೆ, ಅಲ್ಲಿನ ಏರ್ ಕ್ವಾಲಿಟಿ ಇಂಡೆಕ್ಸ್(AQI) ಗುರುವಾರ ಸಂಜೆ 4 ಗಂಟೆಗೆ 382 ರ ಅಧಿಕ ಮಟ್ಟದಲ್ಲಿದ್ದರೆ, ಕಡಿಮೆ ಉಷ್ಣಾಂಶ ಮತ್ತು ಗಾಳಿಯ ವೇಗದಿಂದಾಗಿ 8 ಗಂಟೆಯ ವೇಳೆಗೇ ತೀವ್ರ ವರ್ಗ ತಲುಪಿತು. ಹಾಲಿ ನವದೆಹಲಿಯ ಎಕ್ಯೂಐ 465 ರಷ್ಟು ತೀವ್ರತೆ ಹೊಂದಿದೆ.
ರಾತ್ರಿ ಒಂಭತ್ತು ಗಂಟೆಯ ನಂತರ ಹೆಚ್ಚಿದ ಪಟಾಕಿಗಳ ಭರಾಟೆಯಿಂದಾಗಿ ದೆಹಲಿಯ ಅಕ್ಕಪಕ್ಕದ ನಗರಗಳಾದ ಫರೀದಾಬಾದ್ನಲ್ಲಿ(424), ಘಾಜಿಯಾಬಾದ್(442), ಗುರ್ಗಾವ್(423) ಮತ್ತು ನಾಯ್ಡಾಗಳಲ್ಲಿ(431) ಸಹ ತೀವ್ರ ರೀತಿಯ ವಾಯು ಗುಣಮಟ್ಟ ಕಾಣಿಸಿಕೊಂಡಿದೆ. ದೆಹಲಿಯ ಆಕಾಶದಲ್ಲಿ ಕಲುಷಿತ ಹವೆಯ ಪದರವೊಂದು ರೂಪುಗೊಂಡಂತೆ, ಹಲವು ಭಾಗಗಳ ಜನರಿಗೆ ಗಂಟಲು ಕೆರೆತದೊಂದಿಗೆ ಕಣ್ಣಲ್ಲಿ ನೀರು ಹರಿಯುವ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)
‘ಮೇಡ್ ಇನ್ ಇಂಡಿಯಾ’ ಕರೊನಾ ಲಸಿಕೆ ಕೋವಾಕ್ಸಿನ್ಗೆ ವಿಶ್ವ ಮಾನ್ಯತೆ
ವಾಹನ ಸವಾರರೇ ಗಮನಿಸಿ: ಈ ರಸ್ತೆಗಳಲ್ಲಿ ಇನ್ನು ಒನ್ವೇ ಇಲ್ಲ! ಮಾರ್ಪಾಡುಗಳ ವಿವರ ಇಲ್ಲಿದೆ