ತುಮಕೂರು/ ಚಾಮರಾಜನಗರ: ನಟ ಪುನೀತ್ ರಾಜ್ಕುಮಾರ್ ಅವರ ನಿಧನವನ್ನು ಅರಗಿಸಿಕೊಳ್ಳಲಾಗದೇ ಸಾಯುತ್ತಿರುವ ಅವರ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಇದೆ. ಇದಾಗಲೇ 15ಕ್ಕೂ ಹೆಚ್ಚು ಮಂದಿ ಹೃದಯಾಘಾತ ಮತ್ತು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ.
ಇದೀಗ ತುಮಕೂರು ತಾಲೂಕಿನ ಅರೆಗುಜ್ಜನಹಳ್ಳಿಯ ರವಿಕುಮಾರ್(27) ಎಂಬ ಯುವಕ ಊಟ ತಿಂಡಿ ಬಿಟ್ಟು ಮೃತಪಟ್ಟಿದ್ದಾನೆ. ಕಳೆದ ನಾಲ್ಕುದಿನದಿಂದ ಆರೋಗ್ಯ ಕ್ಷೀಣಿಸಿತ್ತು. ಅಪ್ಪುವಿನ ನೆನಪಲ್ಲೇ ಕೊರಗಿ ನರಳುತ್ತಿದ್ದ ಈತ.
ನಿನ್ನೆ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿಗೆ ಹೋಗಿ ಬಂದು ಊಟ ತಿಂಡಿ ಬಿಟ್ಟಿದ್ದ ರವಿಕುಮಾರ್. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದೇ ಇನ್ನೊಂದೆಡೆ, ಚಾಮರಾಜನಗರದಲ್ಲಿ ಇನ್ನೋರ್ವ ಅಭಿಮಾನಿಗಳ ಸಾವಾಗಿದೆ. ಪುನೀತ್ ರಾಜಕುಮಾರ್ ಅಗಲಿಕೆಯಿಂದ ಆಘಾತಕ್ಕೊಳಗಾಗಿದ್ದ ಅಭಿಮಾನಿ, ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಶಿವಮೂರ್ತಿ ಮೃತಪಟ್ಟಿದ್ದಾರೆ. ವಿಡಿಯೋಗ್ರಾಫರ್ ಆಗಿದ್ದ ಶಿವಮೂರ್ತಿ ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದರು.
ಪುನೀತ್ ಮೃತಪಟ್ಟಾಗ ಬೆಂಗಳೂರಿಗೆ ಹೋಗಿ ದರ್ಶನ ಪಡೆದು ಬಂದಿದ್ದರು ಇವರು ಕೂಡ. ದರ್ಶನ ಪಡೆದು ಬಂದಾಗಿನಿಂದ ಖಿನ್ನತೆಗೊಳಗಾಗಿದ್ದರು. ಪುನೀತ್ ಅವರ ಚಿತ್ರ ನೋಡುತ್ತಾ ದುಖಃ ತಡೆಯಲಾಗದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ನಡುವೆ ಪುನೀತ್ ಅವರ ಕುಟುಂಬಸ್ಥರು ಈ ರೀತಿಯ ಮಾರ್ಗ ಹಿಡಿಯಬೇಡಿ. ಪುನೀತ್ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂದು ಮನವಿ ಮಾಡಿಕೊಳ್ಳುತ್ತಿದ್ದರೂ ಸಾಯುವವರ ಸಂಖ್ಯೆ ಏರುತ್ತಲೇ ಇದೆ.
ಬರ್ತ್ಡೇ ಪಾರ್ಟಿಯಲ್ಲಿ ನಡೆದಿದೆ ನಿಗೂಢ? ಪುನೀತ್ ಸಾವಿನ ರಹಸ್ಯ ಸಿಬಿಐ ತನಿಖೆಗೆ ವಹಿಸಲು ಆಗ್ರಹ