More

    ಆಳವಾದ ಚಿಂತನೆಯಿಂದಷ್ಟೇ ಕಾದಂಬರಿಗೆ ತೂಕ: ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ.ಎಸ್.ಎಲ್. ಭೈರಪ್ಪ

    ಮುಂಬೈ: ಕಾದಂಬರಿಗಳಲ್ಲಿ ವಾಸ್ತವಾಂಶಗಳ ಜೊತೆಗೆ ಕಲ್ಪನಾಶಕ್ತಿಯೂ ಮುಖ್ಯ. ಆಳವಾದ ಚಿಂತನೆ, ಕಲ್ಪನೆ ಇವೆರಡೂ ಅಧ್ಯಯನದಿಂದ ಮಾತ್ರ ಸಾಧ್ಯ. ಕಾದಂಬರಿಗೆ ತೂಕ ಬರಬೇಕಾದರೆ ಅದಕ್ಕೆ ಆಳವಾದ ಚಿಂತನೆ ಬೇಕು ಎಂದು ಖ್ಯಾತ ಕಾದಂಬರಿಕಾರ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಅವರು ಅಭಿಪ್ರಾಯ ಪಟ್ಟರು.

    ಮುಂಬೈ ವಿಶ್ವವಿದ್ಯಾನಿಲಯದ ಕಲೀನಾ ಕ್ಯಾಂಪಸ್​​ನ ಜೆ.ಪಿ.ನಾಯಕ್ ಸಭಾ ಭವನದಲ್ಲಿ ಕನ್ನಡ ವಿಭಾಗದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಜು. 21ರಂದು ನಡೆದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

    ಯಾವುದೇ ಪದಬಳಕೆಯನ್ನು ವಿವಿಧ ಸನ್ನಿವೇಶಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ಮಾಡುವಾಗ ಯೋಚಿಸಿ ಮಾಡಬೇಕು. ಕತೆ, ಕಾದಂಬರಿ, ಪ್ರಬಂಧ ಅಥವಾ ಇತರ ಯಾವುದೇ ಲೇಖನಗಳನ್ನು ಬರೆದಾಗ ಅದನ್ನು ಪುನಃ ಪುನಃ ಪರಿಷ್ಕರಿಸಬೇಕಾದ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ನಾವು ಭಾಷೆಯ ಸರಿಯಾದ ಅಧ್ಯಯನ ಮಾಡಿರಬೇಕು. ಬರಹಗಾರರು ಕಲ್ಪನಾಶೀಲರಾಗಿರಬೇಕು. ತತ್ವಶಾಸ್ತ್ರವನ್ನು ತಿಳಿದಿರಬೇಕು ಎಂದರು.

    ಕಥೆಯ ಮೂಲಕ ತತ್ತ್ವಶಾಸ್ತ್ರದ ಬಗ್ಗೆ ಹೇಳಲು, ತಿಳಿಯಲು ಸಾಧ್ಯ. ವೇದೋಪನಿಷತ್ತುಗಳ ಕಾಲದಿಂದಲೂ ತತ್ತ್ವಜ್ಞಾನವನ್ನು ಋಷಿಮುನಿಗಳು ಕಥೆಗಳ ಮೂಲಕವೇ ಹೇಳುತ್ತ ಬಂದರು. ಕಥೆ ಇಲ್ಲದೆ ಹೋದರೆ ಗಂಭೀರ ತತ್ವಗಳನ್ನು ಹೇಳುವುದಕ್ಕೆ ಆಗಲಾರದು ಎಂದು ಅವರು ಹೇಳಿದರು.

    ಇದನ್ನೂ ಓದಿ: ಸೀಟಿಗಾಗಿ ಜುಟ್ಟು ಹಿಡಿದು ಬಡಿದಾಡಿಕೊಂಡ ನಾರಿಯರು; ಪೊಲೀಸ್ ಠಾಣೆಗೆ ಬಸ್ ಕೊಂಡೊಯ್ದ ಚಾಲಕ

    ಹಿಮಾಲಯ ಸದೃಶ ವ್ಯಕ್ತಿತ್ವ ಹೊಂದಿರುವ ಭೈರಪ್ಪನವರು ಓದುಗರನ್ನು ಚುಂಬಕ ಶಕ್ತಿಯಂತೆ ಸೆಳೆಯುವ ಕಾದಂಬರಿಕಾರರು. ತಮ್ಮ ಮಾತು- ಕೃತಿಗಳ ಮೂಲಕ ದೇಶ ವಿದೇಶಗಳಲ್ಲಿ ಹೆಸರು ಮಾಡಿದವರು. ನಮ್ಮ ಸಾಂಸ್ಕೃತಿಕ ಹಿರಿಮೆ ಗರಿಮೆಯನ್ನು ಜಗದಗಲ ಪಸರಿಸಿದ ಸಾಹಿತಿ ಭೈರಪ್ಪನವರು. ವಿದ್ವಾಂಸರೆಂದರೆ, ಸಾಹಿತಿಗಳೆಂದರೆ ಹೀಗಿರುತ್ತಾರೆ ಎಂಬುದಕ್ಕೆ ಅವರು ಮಾದರಿ ಎಂದು ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್.ಉಪಾಧ್ಯ ಹೇಳಿದರು.

    ಅವರು ದೊಡ್ಡ ಓದುಗ ವರ್ಗವನ್ನು ಬೆಳೆಸಿದ, ತಾರಾ ಮೆರುಗನ್ನು ಹೊಂದಿರುವ ಶ್ರೇಷ್ಠ ಲೇಖಕರು. ಡಾ.ಭೈರಪ್ಪನವರ ಕೃತಿಗಳ ಆಳ, ಅಗಲ, ವೈಭವಗಳ ಕುರಿತು ಉಪನ್ಯಾಸ ನೀಡುವ ಮರಾಠಿಗರಾದ ಡಾ. ಸುಪ್ರಿಯಾ ಸಹಸ್ರಬುದ್ಧೆ ಅವರೇ ಇದಕ್ಕೆ ಸಾಕ್ಷಿ ಎಂಬುದಾಗಿ ಅಭಿಪ್ರಾಯಪಟ್ಟರು. ಡಾ.ಭೈರಪ್ಪನವರನ್ನು ಮುಂಬೈಗೆ ಬರಮಾಡಿಕೊಂಡು ಅವರ ಉಪಸ್ಥಿತಿಗೆ ಕಾರಣಕರ್ತರಾದ ಉಮಾ ರಾಮರಾವ್ ಅವರಿಗೆ ಅಭಿವಂದಿಸಿದರು. ಅಶೋಕ ಸುವರ್ಣ ಅವರಿಗೆ ಸ್ವಾಗತ ಕೋರಿದರು.

    ಆಳವಾದ ಚಿಂತನೆಯಿಂದಷ್ಟೇ ಕಾದಂಬರಿಗೆ ತೂಕ: ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ.ಎಸ್.ಎಲ್. ಭೈರಪ್ಪ

    ಸಾಹಿತಿ, ವಿಮರ್ಶಕರಾದ ಡಾ.ಸುಪ್ರಿಯಾ ಸಹಸ್ರಬುದ್ಧೆ ಅವರು ‘ವಿಶ್ವಮಾನ್ಯ ಲೇಖಕರಾಗಿ ಭೈರಪ್ಪ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಡಾ.ಭೈರಪ್ಪ ಅವರ ಕಾದಂಬರಿಗಳ ಕುರಿತು ಮಾತನಾಡಿದ ಅವರು ‘ದೈತ್ಯ ಪ್ರತಿಭೆ’ ಎಂಬ ಪದ ಭೈರಪ್ಪನನರಿಗೆ ಸರಿಯಾಗಿ ಒಪ್ಪುತ್ತದೆ. ಅವರು ಬರಿಯ ಕನ್ನಡದ ಸಾಹಿತಿಯಲ್ಲ. ಅವರು ವಿಶ್ವಸಾಹಿತಿ ಎಂಬ ಉಪಾಧಿಗೆ ಪಾತ್ರರಾದವರು. ಪ್ರತಿ ಸಾಹಿತಿಯೂ ತಾನು ಬರೆಯುವಾಗ ಒಂದು ವೃತ್ತ ನಿರ್ಮಿಸಿಕೊಂಡು ಅದರೊಳಗೆ ಬರೆಯುತ್ತಿರುತ್ತಾನೆ. ಆದರೆ ಭೈರಪ್ಪನವರು ಆ ವೃತ್ತವನ್ನು ದಾಟಿ ವಿಶ್ವಮಾನ್ಯರಾಗಿ ಜನರನ್ನು ತಲುಪಿದವರು. ಅವರ ಕೃತಿಗಳಲ್ಲಿ ಸಾರ್ವತ್ರಿಕ ವಿಷಯಗಳು ಅಡಕವಾಗಿ ಇರುವುದರಿಂದ ಲೋಕದೆಲ್ಲೆಡೆಯ ಜನರನ್ನು ತಲುಪಲು ಸಾಧ್ಯವಾಯಿತು. ಅವರ ಕಾದಂಬರಿಗಳಲ್ಲಿ ವೈವಾಹಿಕ, ಕೌಟುಂಬಿಕ, ಸಾಮಾಜಿಕ, ಕರುಣೆ, ಮಾನವತೆ ಇತ್ಯಾದಿ ಹಲವಾರು ಅಂಶಗಳಿವೆ. ಅವರು ಕೇವಲ ಕನ್ನಡದ ಸಾಹಿತಿಯಲ್ಲ, ಅವರು ನಮ್ಮೆಲ್ಲರ ಸಾಹಿತಿ. ನೋಬೆಲ್ ಪ್ರಶಸ್ತಿ ಪಡೆಯಲು ಯೋಗ್ಯರಾದವರು ಎಂಬುದಾಗಿ ಭೈರಪ್ಪನವರ ಬರವಣಿಗೆ, ಚಿಂತನೆಗಳ ವಿಶೇಷತೆಯನ್ನು ಎತ್ತಿ ಹೇಳಿದರು.

    ಇದನ್ನೂ ಓದಿ: 30 ಕೋಟಿ ರೂಪಾಯಿಯ ವಾಚ್​ಗಳಿದ್ದರೂ ಈತನ ಟೈಮ್​ ಸರಿ ಇರಲಿಲ್ಲ!

    ಡಾ.ಜಿ.ಎನ್.ಉಪಾಧ್ಯ ಹಾಗೂ ಡಾ. ಉಮಾ ರಾಮರಾವ್ ಅವರು ಸಂಪಾದಿಸಿ ಮುಂಬೈ ವಿವಿ ಕನ್ನಡ ವಿಭಾಗದ ಮೂಲಕ ಪ್ರಕಟಿಸಿದ ‘ಭಾಷೆಗಳ ಗಡಿ ಗೆದ್ದ ಭಾರತೀಯ’ ಗೌರವ ಗ್ರಂಥವನ್ನು ಡಾ. ಭೈರಪ್ಪ ಅವರಿಗೆ ಇದೇ ಸಂದರ್ಭದಲ್ಲಿ ಸಮರ್ಪಿಸಲಾಯಿತು. ಡಾ.ಜಿ.ಎನ್. ಉಪಾಧ್ಯ ವಿರಚಿತ ‘ಮುಂಬಯಿ ಕನ್ನಡ ಪರಿಸರ’ ಗ್ರಂಥವನ್ನು ಶ್ರೀಯುತ ಅಶೋಕ ಸುವರ್ಣ ಅವರು ಬಿಡುಗಡೆಗೊಳಿಸಿದರು.

    ಡಾ.ಉಮಾ ರಾಮರಾವ್ ಬರೆದ ಕೃತಿ ‘ಸಂಶೋಧನೆಯಲ್ಲಿ ಶಿಸ್ತು ಮತ್ತು ನೈತಿಕ ಪ್ರಜ್ಞೆ’ ಹಾಗೂ ಕಲಾ ಭಾಗ್ವತ್ ಅವರ ‘ಕನ್ನಡ ಸಂಶೋಧನೆಗೆ ಮುಂಬಯಿ ಕೊಡುಗೆ’ ಕೃತಿಗಳನ್ನು ಎಸ್. ಎಲ್. ಭೈರಪ್ಪ ಅವರು ಲೋಕಾರ್ಪಣೆಗೊಳಿಸಿದರು.

    ಸಂದರ್ಶಕ ಪ್ರಾಧ್ಯಾಪಕರಾದ ಡಾ. ಉಮಾ ರಾಮರಾವ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ವಿಶೇಷ ಉಪನ್ಯಾಸಕಾರರಾದ ಡಾ.ಸುಪ್ರಿಯಾ ಸಹಸ್ರಬುದ್ಧೆ ಅವರನ್ನು ಪರಿಚಯಿಸುತ್ತಾ, ಡಾ.ಸಹಸ್ರಬುದ್ಧೆ ಅವರ ವಿದ್ವತ್ತು ಮತ್ತು ಡಾ.ಭೈರಪ್ಪನವರ ಕೃತಿಗಳನ್ನು ಓದಿ ಅವರು ಮಾಡಿದ ಪ್ರೌಢ ವಿಮರ್ಶೆಗಳು ಬೆರಗು ಮೂಡಿಸುವಂತಹುದು. ಸರಳ, ನಿಸ್ಪೃಹ ವ್ಯಕ್ತಿತ್ವದ ಅವರು ಭೈರಪ್ಪನವರ ಕಾದಂಬರಿಗೆ ಸರಿಸಾಟಿ ಆಗುವಂತಹ ಕಾದಂಬರಿಗಳು ಮರಾಠಿಯಲ್ಲಿಲ್ಲ ಎಂದು ಒಪ್ಪಿಕೊಳ್ಳುವ ಮುಕ್ತ ಮನಸ್ಸು, ಹೃದಯ ವೈಶಾಲ್ಯತೆ ಉಳ್ಳವರು ಎಂದರು.

    ಡಾ.ಎಸ್ ಎಲ್. ಭೈರಪ್ಪ, ಡಾ. ಸುಪ್ರಿಯಾ ಸಹಸ್ರಬುದ್ಧೆ, ಡಾ.ಜಿ.ಎನ್. ಉಪಾಧ್ಯ, ಡಾ. ಉಮಾ ರಾಮರಾವ್ ಅವರನ್ನು ಶಾಲು ಹೊದಿಸಿ, ಫಲಗಳನ್ನಿತ್ತು ಗೌರವಿಸಲಾಯಿತು. ಡಾ.ಭೈರಪ್ಪ ಅವರ ಕೃತಿಗಳ ಆಯ್ದ ಭಾಗಗಳನ್ನು ಕಂಠದಾನ ಕಲಾವಿದರಾದ ಸುರೇಂದ್ರ ಕುಮಾರ್ ಮಾರ್ನಾಡ್ ಮತ್ತು ಸಂಶೋಧನ ವಿದ್ಯಾರ್ಥಿ ನಳಿನಾ ಪ್ರಸಾದ್ ಅವರು ವಾಚಿಸಿದರು. ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸಿದರು. ಮುಂಬೈಯ ಅನೇಕ ಗಣ್ಯರು ಮತ್ತು ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾ ರಾಮಕೃಷ್ಣ ಅವರು ತಾಂತ್ರಿಕ ಸಹಕಾರ ನೀಡಿದರು.

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts