ಬೆಂಗಳೂರು: ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ಮನ್ ಹಾಗೂ ಜನಪ್ರಿಯ ಕ್ರಿಕೆಟ್ ವೀಕ್ಷಕವಿವರಣೆಕಾರ ಡೀನ್ ಜೋನ್ಸ್ (59 ವರ್ಷ) ಮುಂಬೈನಲ್ಲಿ ಗುರುವಾರ ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಮೈಸೂರು ಪಾಕ್ ಪ್ರಿಯರಾಗಿದ್ದರು ಎಂಬುದು ವಿಶೇಷ.
ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲೂ (ಕೆಪಿಎಲ್) ವೀಕ್ಷಕವಿವರಣೆಕಾರರಾಗಿ ಕಾರ್ಯನಿರ್ವಹಿಸಿರುವ ಅವರು, 2017ರಲ್ಲಿ ಮೈಸೂರಿನ ಒಡೆಯರ್ ಮೈದಾನದಲ್ಲಿ ಪಂದ್ಯಗಳು ನಡೆದಾಗ ಒಂದು ಡಜನ್ ಬಾಕ್ಸ್ ಮೈಸೂರು ಪಾಕ್ಗಳನ್ನು ಖರೀದಿಸಿ ತವರಿಗೆ ಕೊಂಡೊಯ್ದಿದ್ದರು. ಅಲ್ಲದೆ ಮೈಸೂರು ಪಾಕ್ ಮಾಡುವ ವಿಧಾನದ ಬಗ್ಗೆ ವಿಡಿಯೋಗಳನ್ನು ಮಾಡಿಕೊಂಡಿದ್ದರು.
ಮೈಸೂರಿನ ದೇವರಾಜ್ ಅರಸ್ ರಸ್ತೆಯ ಬಾಂಬೆ ಟಿಾನಿಸ್ ಅನೆಕ್ಸ್ನ ಮಾಲೀಕ ಅನೀಶ್ ಗುಪ್ತಾ ಅವರು ಡೀನ್ ಜೋನ್ಸ್ರ ಮೈಸೂರು ಪಾಕ್ ಪ್ರೀತಿಯನ್ನು ಗುರುವಾರ ಮೆಲುಕು ಹಾಕಿದ್ದಾರೆ. ತಮ್ಮ ಅಂಗಡಿ ಮತ್ತು ್ಯಾಕ್ಟರಿಗೆ ಡೀನ್ ಜೋನ್ಸ್ ಭೇಟಿ ನೀಡಿ ಸುಮಾರು 1 ಗಂಟೆ ಸಮಯವನ್ನು ಕಳೆದಿದ್ದರು ಎಂದು ಅವರು ಹೇಳಿದ್ದಾರೆ. ಮೈಸೂರು ಪಾಕ್ನ ರುಚಿಗೆ ಮಾರು ಹೋಗಿದ್ದ ಡೀನ್ ಜೋನ್ಸ್, ಒಂದು ಡಜನ್ ಬಾಕ್ಸ್ಗಳಷ್ಟು ಮೈಸೂರು ಪಾಕ್ಗಳನ್ನು ಆಸ್ಟ್ರೇಲಿಯಾಕ್ಕೆ ತೆಗೆದುಕೊಂಡು ಹೋಗಿ ಕುಟುಂಬದ ಸದಸ್ಯರು ಮತ್ತು ತಮ್ಮ ಆಪ್ತರಿಗೆ ಹಂಚಿದ್ದರು.
ಇದನ್ನೂ ಓದಿ: ಬ್ಯಾಟಿಂಗ್ ಕ್ರಮಾಂಕದಲ್ಲಿ ಹಿಂಬಡ್ತಿ ಪಡೆದಿದ್ದಕ್ಕೆ ಕಾರಣ ವಿವರಿಸಿದ ಧೋನಿ
ಸ್ಟಾರ್ ಸ್ಪೋರ್ಟ್ಸ್ ಕಾಮೆಂಟರಿ ತಂಡದೊಂದಿಗೆ ಮುಂಬೈ ಹೋಟೆಲ್ನ ಬಯೋ-ಬಬಲ್ನಲ್ಲಿದ್ದ ಡೀನ್ ಜೋನ್ಸ್, ಬುಧವಾರ ಮುಂಬೈ-ಕೆಕೆಆರ್ ಪಂದ್ಯದ ವೇಳೆ ಕಾರ್ಯನಿರ್ವಹಿಸಿದ್ದರು. ಗುರುವಾರ ಬೆಳಗಿನ ಉಪಹಾರ ಸೇವಿಸಿದ ಬಳಿಕ ಪಂದ್ಯ ಪೂರ್ವಭಾವಿ ಸಿದ್ಧತೆಗಳಲ್ಲೂ ಪಾಲ್ಗೊಂಡಿದ್ದರು. ಅಲ್ಲಿಂದ ಹೋಟೆಲ್ ಕೋಣೆಗೆ ಮರಳಿದ ಬಳಿಕ ಮಧ್ಯಾಹ್ನದ ವೇಳೆಗೆ ಹೃದಯಾಘಾತಕ್ಕೊಳಗಾದರು ಎನ್ನಲಾಗಿದೆ. ಮೃತರು ಪತ್ನಿ ಜೇನ್ ಮತ್ತು ಇಬ್ಬರು ಪುತ್ರಿಯರಾದ ಇಸಾಬೆಲ್ಲ ಮತ್ತು ಪೋಯೆಬ್ರನ್ನು ಅಗಲಿದ್ದಾರೆ. ಆಸ್ಟ್ರೇಲಿಯಾ ಹೈ ಕಮಿಷನ್ ಜತೆ ಚರ್ಚಿಸಿ ಮೃತದೇಹವನ್ನು ತವರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ತಿಳಿಸಿದೆ.
1984ರಿಂದ 1994ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ ನಿವೃತ್ತಿಯಾದ ಬಳಿಕ ಅವರು ವೀಕ್ಷಕವಿವರಣೆಕಾರರಾಗಿ ತವರೂರಿಗಿಂತ ದಕ್ಷಿಣ ಏಷ್ಯಾದಲ್ಲೇ (ಭಾರತ-ಪಾಕಿಸ್ತಾನ) ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದರು. ಭಾರತದ ಸುದ್ದಿ ವಾಹಿನಿಯೊಂದು, ‘ಪ್ರೊಫೆಸರ್ ಡಿನೋ’ ಹೆಸರಿನ ಕಾರ್ಯಕ್ರಮಕ್ಕಾಗಿ ಅವರೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿತ್ತು.
ವೀಕ್ಷಕವಿವರಣೆಯ ವೇಳೆ ಕೆಲ ವಿವಾದಗಳಿಗೂ ಸಿಲುಕಿಕೊಂಡಿದ್ದರು. ದಕ್ಷಿಣ ಆಫ್ರಿಕಾದ ಹಾಶಿಂ ಆಮ್ಲರನ್ನು ‘ಟೆರರಿಸ್ಟ್’ ಎಂದು ಕರೆದಿದ್ದು ದೊಡ್ಡ ವಿವಾದ ಸೃಷ್ಟಿಸಿ ಬಳಿಕ ಕ್ಷಮೆಯಾಚಿಸಿದ್ದರು. 2017ರಲ್ಲಿ ಅಲ್ಪಾವಧಿಗೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಅವರು, ಪಾಕಿಸ್ತಾನ ಸೂಪರ್ ಲೀಗ್ ಟಿ20 ಟೂರ್ನಿಯಲ್ಲೂ ಕೆಲ ತಂಡಗಳಿಗೆ ಕೋಚ್ ಆಗಿದ್ದರು.
1987ರ ವಿಶ್ವಕಪ್ ವಿಜೇತ
ಡೀನ್ ಜೋನ್ಸ್ ಮತ್ತು ಭಾರತದ ನಡುವೆ ವಿಶೇಷವಾದ ಸಂಬಂಧವಿದೆ. 1987ರಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್ನಲ್ಲಿ ಪ್ರಶಸ್ತಿ ಜಯಿಸಿದ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದ ಡೀನ್ ಜೋನ್ಸ್, 1986ರಲ್ಲಿ ಐತಿಹಾಸಿಕ ಟೈ ಕಂಡ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ದ್ವಿಶತಕ ಸಿಡಿಸಿದ್ದರು. ಚೆನ್ನೈ ಬಿಸಿಲಿನ ಸವಾಲು ಎದುರಿಸಿ ಸುದೀರ್ಘ ಇನಿಂಗ್ಸ್ ಆಡಿದ್ದ ಜೋನ್ಸ್, ಬಳಿಕ ಡಿಹೈಡ್ರೇಷನ್ನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು. 1992ರಲ್ಲಿ ಬ್ರಿಸ್ಬೇನ್ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧದ 1 ರನ್ ಗೆಲುವಿನಲ್ಲೂ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಭಾರತದ ನೆಲದಲ್ಲೇ ಅವರು ಪ್ರಾಣ ಬಿಟ್ಟಿರುವುದು ವಿಧಿಯ ವಿಪರ್ಯಾಸವೆನಿಸಿದೆ.
ಕ್ರಿಕೆಟ್ ಜಗತ್ತಿನ ಕಂಬನಿ
ಡೀನ್ ಜೋನ್ಸ್ ನಿಧನಕ್ಕೆ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ. ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ ಸಹಿತ ಭಾರತ, ಆಸ್ಟ್ರೇಲಿಯಾ ಮಾತ್ರವಲ್ಲದೆ ಪಾಕಿಸ್ತಾನ, ಶ್ರೀಲಂಕಾ ಸಹಿತ ವಿಶ್ವ ಕ್ರಿಕೆಟ್ನ ಹಾಲಿ-ಮಾಜಿ ಕ್ರಿಕೆಟಿಗರು ಜೋನ್ಸ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಇದು ನಿಜಕ್ಕೂ ಆಘಾತಕಾರಿ ಸುದ್ದಿ. ಅಪೂರ್ವ ವ್ಯಕ್ತಿ ಇಷ್ಟು ಬೇಗ ನಮ್ಮಿಂದ ದೂರವಾದರು. ನನ್ನ ಮೊದಲ ಆಸೀಸ್ ಪ್ರವಾಸದಲ್ಲಿ ಅವರ ವಿರುದ್ಧ ಆಡುವ ಅವಕಾಶ ಲಭಿಸಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ದಿಗ್ಗಜ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.