| ಹರ್ಷವರ್ಧನ್ ಬ್ಯಾಡನೂರು
ಚಿತ್ರ: ಕಾಟೇರ
ನಿರ್ದೇಶನ: ತರುಣ್ ಕಿಶೋರ್ ಸುಧೀರ್
ನಿರ್ಮಾಣ: ರಾಕ್ಲೈನ್ ವೆಂಕಟೇಶ್
ತಾರಾಗಣ: ದರ್ಶನ್, ಆರಾಧನಾ, ಶ್ರುತಿ, ಕುಮಾರ್ ಗೋವಿಂದ್, ಜಗಪತಿ ಬಾಬು, ವಿನೋದ್ ಆಳ್ವ, ಅವಿನಾಶ್, ಬಿರಾದಾರ್, ಮಾ. ರೋಹಿತ್ ಮತ್ತು ಮುಂತಾದವರು.
ಇದನ್ನೂ ಓದಿ : VIDEO | ಸ್ಟಾರ್ ನಟನ ಮೇಲೆ ಚಪ್ಪಲಿ ಎಸೆದ ದುಷ್ಕರ್ಮಿಗಳು! ತೀವ್ರ ಆಕ್ರೋಶ ವ್ಯಕ್ತಪಡಿಸಿದ ಫ್ಯಾನ್ಸ್..
ತರುಣ್ ಸುಧೀರ್ ನಿರ್ದೇಶನದ ಮೂರನೇ ಚಿತ್ರ ‘ಕಾಟೇರ’. ಮೊದಲಿನ ಎರಡು ಚಿತ್ರಗಳಲ್ಲೂ ದರ್ಶನ್ ಪ್ರಮುಖ ಪಾತ್ರವಹಿಸಿದ್ದರು. ‘ಚೌಕ’ದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ‘ರಾಬರ್ಟ್’ನಲ್ಲಿ ನಾಯಕನಾಗಿದ್ದರು. ಇದೀಗ ಇವರ ಕಾಂಬಿನೇಷನ್ನ ಮೂರನೇ ಚಿತ್ರ ‘ಕಾಟೇರ’ ಬಿಡುಗಡೆಯಾಗಿದೆ. ನೈಜ ಘಟನೆಯಾಧಾರಿತ ಚಿತ್ರ ಎನ್ನುವ ಮೂಲಕ ಸಿನಿಮಾ ಮೊದಲಿನಿಂದಲೂ ಕುತೂಹಲ ಮೂಡಿಸಿತ್ತು. ಹಾಗಾದರೆ, ‘ಕಾಟೇರ’ ಆ ನಿರೀಕ್ಷೆ ತಲುಪಿದೆಯಾ?
ಇದನ್ನೂ ಓದಿ : ಅಫೇರ್..ಎರಡನೇ ಮದುವೆ ಬಗ್ಗೆ ‘ಮೈ ಆಟೋಗ್ರಾಫ್’ ನಟಿ ಮೀನಾ ಕಣ್ಣೀರಿಟ್ಟು ಸ್ಪಷ್ಟನೆ!
ಅದು 1989ರ ಸಮಯ. ಚಾಮರಾಜನಗರದಲ್ಲಿ ಕಾಲುವೆ ಅಗೆಯುವಾಗ ಅಸ್ಥಿಪಂಜರಗಳು ದೊರೆಯುತ್ತವೆ. ಅಲ್ಲಿಗೆ ಬರುವ ವಿಧಿವಿಜ್ಞಾನ ಪ್ರಯೋಗಾಲಯದ ರೀನಾ ಡಿಸೋಜಾಗೆ (ಶ್ವೇತಾ ಪ್ರಸಾದ್) ಬರೋಬ್ಬರಿ 107 ಅಸ್ಥಿಪಂಜರಗಳು ದೊರೆಯುತ್ತವೆ. ಪರಶೀಲನೆ ನಡೆಸಿದಾಗ, ಅದು ಯಾವುದೋ ಖಾಯಿಲೆಗೆ ಸಾಮೂಹಿಕವಾಗಿ ಬಲಿಯಾದ ಗ್ರಾಮಸ್ಥರ ಅಸ್ಥಿಪಂಜರಗಳಲ್ಲ ಬದಲಾಗಿ, ಕೊಲೆಯಾದ ವ್ಯಕ್ತಿಗಳ ಅಸ್ಥಿಪಂಜರ ಎಂಬುದು ಗೊತ್ತಾಗುತ್ತದೆ. ಅಲ್ಲಿಂದ ‘ಕಾಟೇರ’ನ ಕಥೆ ತೆರೆದುಕೊಳ್ಳುತ್ತದೆ. ಭೀಮನಹಳ್ಳಿಯ ಕುಲುಮೆ ಕೆಲಸಗಾರ ಕಾಟೇರ (ದರ್ಶನ್). ಅಕ್ಕ (ಶೃತಿ), ಭಾವ (ಕುಮಾರ್ ಗೋವಿಂದ್), ಅಮ್ಮ (ಪದ್ಮಾ ವಾಸಂತಿ) ಮತ್ತು ಊರಿನವರೇ ಆತನ ಪ್ರಪಂಚ. ಕುಟುಂಬದ ವಿಷಯಕ್ಕಾಗಲೀ, ಊರಿನ ವಿಷಯಕ್ಕಾಗಲೀ ಯಾರೇ ಬಂದರೂ ಗೂಳಿಯಂತೆ ಗುಟುರು ಹಾಕಿ ದಾಳಿ ಮಾಡಿಬಿಡುತ್ತಾನೆ. ಊರ ಶಾನುಭೋಗರ (ಅವಿನಾಶ್) ಮಗಳು ಪ್ರಭಾವತಿಗೆ (ಆರಾಧನಾ) ಕಾಟೇರನ ಮೇಲೆ ಪ್ರೀತಿ. ನೂರಾರು ವರ್ಷಗಳಿಂದ ತಾವು ಬೆವರು ಹರಿಸಿ ಜಮೀನದಾರನ (ಜಗಪತಿ ಬಾಬು) ಜಾಗದಲ್ಲಿ ಕೃಷಿ ಮಾಡಿಕೊಂಡು, ಆತ ಕೇಳಿದಷ್ಟು ದೇಣಿ ನೀಡುತ್ತಾ, ತಲೆತಗ್ಗಿಸಿ ಬದುಕುತ್ತಿರುವವರಿಗೆ 1970ರ ದಶಕದಲ್ಲಿ ಉಳುವವನೇ ಭೂಮಿಗೆ ಒಡೆಯ ಕಾನೂನಿನ ಬಗ್ಗೆ ಅರಿವು ಮೂಡುತ್ತದೆ. ಅಲ್ಲಿಂದ ಜಾತಿಯ ಸಂಕೋಲೆ ಬಿಡಿಸಿಕೊಂಡು ಪ್ರೀತಿಗಾಗಿ ಹಾಗೂ ಜೀತದ ಬಲೆಯಿಂದ ಬಿಡಿಸಿಕೊಂಡು ತನ್ನ ಊರಿಗಾಗಿ ಹೋರಾಟಕ್ಕಿಳಿಯುತ್ತಾನೆ. ಆ ಹೋರಾಟ ಎಲ್ಲಿಯವರೆಗೆ ತಲುಪುತ್ತದೆ? ಆತ ಪ್ರಭಾವತಿಯನ್ನು ಮದುವೆಯಾಗುತ್ತಾನಾ? ತನ್ನೂರಿನ ಸಮಸ್ಯೆ ಬಗೆಹರಿಸುತ್ತಾನಾ? ಎಂಬುದೇ ‘ಕಾಟೇರ’ನ ಕಥೆ.
ಹಲವು ವರ್ಷಗಳ ಬಳಿಕ ದರ್ಶನ್ ಮತ್ತೆ ‘ಚಾಲೆಂಜಿಂಗ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ನಟಿ ಶ್ರುತಿ ಇವತ್ತೂ ಎತ್ತಿದ ಕೈ. ಜಗಪತಿ ಬಾಬು ರಕ್ಕಸ ನಗು, ಕುಮಾರ್ ಗೋವಿಂದ್ ಸೌಮ್ಯತೆ, ವಿನೋದ್ ಆಳ್ವ ಅಬ್ಬರ, ಡೈಲಾಗ್ಸ್ ಇಲ್ಲದಿದ್ದರೂ ಎಲ್ಲ ವಿಷಯಗಳನ್ನೂ ಹೇಳುವ ಬಿರಾದಾರ್ ನಟನೆ, ಆರಾಧನಾ, ಮಾ. ರೋಹಿತ್, ರವಿಚೇತನ್, ಅವಿನಾಶ್ ಸೇರಿ ಎಲ್ಲರ ಅಭಿನಯ ಚಿತ್ರವನ್ನು ಮತ್ತೊಂದು ಹಂತಕ್ಕೆ ತಲುಪಿಸಿವೆ. ಉಳುವವನೇ ಭೂಮಿಗೆ ಒಡೆಯ ಕಾನೂನು ಜಾರಿ, ಜಾತಿ ಸಂಘರ್ಷಗಳ ನಡುವೆ ಒಂದು ಪ್ರೇಮಕಥೆ ಹೇಳಿರುವ ನಿರ್ದೇಶಕ ತರುಣ್ ಸುಧೀರ್, ಜತೆಗೆ ಹೊಲೆಮಾರಿ ಆಚರಣೆಯ ಕುರಿತೂ ಬೆಳಕು ಚೆಲ್ಲಿದ್ದಾರೆ. 70, 80ರ ದಶಕದ ನೈಜ ಘಟನೆಗಳನ್ನು ಆಧರಿಸಿದ ಕಥೆ-ಚಿತ್ರಕಥೆ ಮಾಡಿಕೊಂಡಿರುವ ತರುಣ್ ಮತ್ತು ಜಡೇಶ್ ಹಂಪಿ ಕಾರ್ಯ ಶ್ಲಾಘನೀಯ. 183 ನಿಮಿಷಗಳ ಸುದೀರ್ಘ ಚಿತ್ರವಿದು. ಕೆಲವೆಡೆ ಅನವಶ್ಯಕ ಸೀನ್ಗಳಿದ್ದರೂ, ಬೋರ್ ಹೊಡೆಸುವುದಿಲ್ಲ. ವಿ. ಹರಿಕೃಷ್ಣ ಸಂಗೀತದಲ್ಲಿ ‘ಪಸಂದಾಗವ್ನೆ’ ಹಾಡು ಇಷ್ಟವಾಗುತ್ತದೆ. ಒಟ್ಟಾರೆ ಉತ್ತಮ ಕಂಟೆಂಟ್ ಇರುವ ಕಮರ್ಷಿಯಲ್ ಸಿನಿಮಾ ‘ಕಾಟೇರ’ ಎಲ್ಲರಿಗೂ ಇಷ್ಟವಾಗುವ ಸಿನಿಮಾ.