ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ. ಮಂಡ್ಯದಲ್ಲಿ ಬಹಿರಂಗ ಸಭೆ ನಡೆಸಿದ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಭೆಯಲ್ಲಿ ನಟ ದರ್ಶನ್ ಕೂಡ ಭಾಗವಹಿಸಿದ್ದರು.
ಸದ್ಯ ಸಭೆಯಲ್ಲಿ ದರ್ಶನ್ ಮಾತನಾಡಿರುವುದು ಎಲ್ಲೆಡೆ ಚರ್ಚೆಯಾಗುತ್ತಿದೆ. “ಕೈಗೆ ಬಲವಾದ ಪೆಟ್ಟು ಬಿದ್ದ ಕಾರಣದಿಂದಾಗಿ ಏಪ್ರಿಲ್ 2ರಂದು ಆಪರೇಷನ್ ಇತ್ತು. ಆದರೆ ಡಾಕ್ಟರ್ಗೆ ಅಮ್ಮನಿಗೆ ಡೇಟ್ ಕೊಟ್ಟುಬಿಟ್ಟಿದ್ದೀನಿ. ಅದು ಮುಗಿಸಿ ಬರ್ತಿನಿ ಅಂತ ಹೇಳಿ, ಮಂಡ್ಯಕ್ಕೆ ಬಂದಿದ್ದೇನೆ. ಇವತ್ತು ರಾತ್ರಿ ಆಸ್ಪತ್ರೆಗೆ ದಾಖಲಾಗಿ, ನಾಳೆ ಬೆಳಗ್ಗೆ ಆಪರೇಷನ್ ಮಾಡಿಸಿಕೊಳ್ಳುತ್ತೇನೆ. ಅದಕ್ಕೆ ದಯವಿಟ್ಟು ನಾನು ಹೋಗಬೇಕಾದರೆ, ಸ್ವಲ್ಪ ಜಾಗ ಮಾಡಿಕೊಡಿ, ಕೈ ಎಳೆಯಬೇಡಿ ಎಂದು ಬೇಡಿಕೊಳ್ಳುತ್ತೇನೆ” ಎಂದು ದರ್ಶನ್ ಕೋರಿದ್ದಾರೆ.
“ನಾನು ರಾಜಕೀಯ ಮಾತನಾಡುವುದಿಲ್ಲ. ಆದರೂ ಒಂದೇ ಮಾತಿನಲ್ಲಿ ಮುಗಿಸುತ್ತೇನೆ. ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ ಕೂಡ ನಾನು ಅವರ ಹಿಂದೆ ನಿಂತೇ ಇರ್ತಿನಿ. ಯಾಕೆಂದರೆ, ಮನೆ ಮಕ್ಕಳು ಎಂದಾಗ, ಮನೆ ಮಕ್ಕಳ ಥರವೇ ಇರಬೇಕು. ತಾಯಿ ಯಾವತ್ತಿದ್ರೂ ತಾಯಿನೇ. ಸಾಯೋವರೆಗೂ ತಾಯಿನೇ” ಎಂದು ದರ್ಶನ್ ಹೇಳಿದ್ದಾರೆ.
“ಅಮ್ಮ ಕಣ್ಣ ಮುಚ್ಚಿಕೊಂಡು ಹಾಳು ಬಾವಿಗೆ ಬೀಳು ಅಂದ್ರು ಬೀಳುವುದಕ್ಕೂ ರೆಡಿ ನಾನು. ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ, ನಾನು ಮತ್ತು ನನ್ನ ತಮ್ಮ ಅಭಿಷೇಕ್ ಬದ್ಧರಾಗಿರುತ್ತೇವೆ. ಎಲ್ಲಾ ನನ್ನ ಆತ್ಮೀಯ ಸ್ನೇಹಿತರು, ಸೆಲೆಬ್ರಿಟಿಗಳು ನನಗೆ ಪ್ರೀತಿ ತೋರಿಸಿದ್ದೀರಿ, ಎಲ್ಲರಿಗೂ ಧನ್ಯವಾದಗಳು. ನಾವು ಎಂದಿಗೂ ಮಂಡ್ಯ ಜನರ ಜೊತೆಗೆ ಇರುತ್ತೇವೆ” ಎಂದು ತಿಳಿಸಿದ್ದಾರೆ ದರ್ಶನ್ .