ಕೋಲಾರ: ಬಾಕಿ ಉಳಿಸಿಕೊಂಡಿದ್ದ ಕೂಲಿ ಹಣ ಕೇಳಿದ್ದಕ್ಕೆ ದಲಿತ ಸಮುದಾಯದ ಯುವಕನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ದೊಡ್ಡವಲಗಮಾದಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ದೊಡ್ಡವಲಗಮಾದಿ ಗ್ರಾಮದ ಅಮರೇಶ್ (29) ಎಂದು ಗುರುತಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನೋರ್ವ ತಲೆಮಾರಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನಲೆ
ಗಾಯಾಳು ಅಮರೇಶ್ ಜಗದೀಶ್ ಸಿಂಗ್ ಎಂಬುವವರ ಮನೆ ನಿರ್ಮಾಣದ ಕೆಲಸಕ್ಕೆ ಹೋಗುತ್ತಿದ್ದರು. ವಾರದ ಕೂಲಿ 3,500 ರೂಪಾಯಿ ನಿಗದಿಯಾಗಿತ್ತು. ಅದರಂತೆ 2 ಸಾವಿರ ರೂಪಾಯಿ ಕೂಲಿಯನ್ನು ಜಗದೀಶ್ ಸಿಂಗ್ ಕೊಟ್ಟಿದ್ದರು. 1,500 ರೂಪಾಯಿ ಬಾಕಿ ಉಳಿಸಿಕೊಂಡಿದ್ದರು. ಅಕ್ಟೋಬರ್ 17ರಂದು ಜಗದೀಶ್ ಸಿಂಗ್ ತಮ್ಮ ಸಹೋದರರಾದ ರವಿ ಸಿಂಗ್ ಹಾಗೂ ಸತೀಶ್ ಸಿಂಗ್ ಜತೆ ತೆರಳುತ್ತಿದ್ದರು.
ಇದನ್ನೂ ಓದಿ: ಮೋದಿ ಸರ್ಕಾರದ ಏಕೈಕ ಗುರಿ ಅಧಿಕಾರದಲ್ಲಿರುವುದೇ ಹೊರತು, ಸಾರ್ವಜನಿಕರ ಕಲ್ಯಾಣವಲ್ಲ: ಪ್ರಿಯಾಂಕ ಗಾಂಧಿ
ಈ ವೇಳೆ ಇವರನ್ನು ಗಮನಿಸಿದ ಅಮರೇಶ್ ಬಾಕಿ ಹಣ ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಮೂವರು ಸಹೋದರರು ದಾರಿಯಲ್ಲಿ ಹಣ ಕೇಳುತ್ತೀಯಾ ಎಂದು ಹೇಳಿ ಅಮರೇಶ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಶುರು ಮಾಡಿದ್ದಾರೆ. ಬಳಿಕ ತಮ್ಮ ಮನೆಯ ಬಳಿ ಕರೆದುಕೊಂಡು ಹೋಗಿ ಕಟ್ಟಿಹಾಕಿ ಬೆಲ್ಟ್ ಹಾಗೂ ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಗಾಯಾಳುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಮೂವರು ಆರೋಪಿಗಳ ಪೈಕಿ ಸತೀಶ್ ಸಿಂಗ್ ಹಾಗೂ ರವಿ ಸಿಂಗ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಜಗದೀಶ್ ಸಿಂಗ್ ತಲೆಮಾರಿಸಿಕೊಂಡಿದ್ದಾರೆ. ಈತನನ್ನು ಪತ್ತೆಹಚ್ಚಲು ಡಿವೈಎಸ್ಪಿ ನೇತೃತ್ವತದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ. ಬಂಧಿತ ಆರೋಪಿಗಳು ದೂರುದಾರರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.