ಚೆನ್ನೈ: ಮಿಚೌಂಗ್ ಚಂಡಮಾರುತ ಅಬ್ಬರಕ್ಕೆ ತಮಿಳುನಾಡು ರಾಜಧಾನಿ ಚೆನ್ನೈ ಅಕ್ಷರಶಃ ತತ್ತರಿಸಿ ಹೋಗಿದೆ. ಇಂದು ವರುಣನ ಅಬ್ಬರ ಕೊಂಚ ತಗ್ಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಮಳೆ ಸೃಷ್ಟಿಸಿರುವ ಅವಾಂತರ ಮಾತ್ರ ಇನ್ನೂ ಮುಂದುವರಿದಿದ್ದು, ಟೀಮ್ ಇಂಡಿಯಾದ ಹಿರಿಯ ಬೌಲರ್ ರವಿಚಂದ್ರನ್ ಅಶ್ವಿನ್ ಕೂಡ ಇದಕ್ಕೆ ಹೊರತಾಗಿಲ್ಲ.
ಬಂಗಾಳ ಕೊಲ್ಲಿಯಲ್ಲಿ ರಚನೆಯಾಗಿರುವ ಸೈಕ್ಲೋನ್ ಪರಿಣಾಮ ಚೆನ್ನೈ, ತಿರುವಳ್ಳೂರು, ಕಾಂಚಿಪುರಂ ಹಾಗೂ ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮರಗಳು ಧರೆಗುಳಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ ಮತ್ತು ರಸ್ತೆಗಳೆಲ್ಲ ನದಿಯಂತಾಗಿದ್ದು, ವಿದ್ಯುತ್ ಸಂಪರ್ಕ, ಮೊಬೈಲ್ ಸಿಗ್ನಲ್ ಮತ್ತು ನೀರಿನ ಪೂರೈಕೆ ಇಲ್ಲದೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈಗಾಗಲೇ 17ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಭಾರೀ ಮಳೆಗೆ ಕಾರುಗಳು ಮತ್ತು ವಾಹನಗಳು ಕೊಚ್ಚಿಹೋಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಶ್ವಿನ್ ಅಸಹಾಯಕತೆ
ಇದರ ನಡುವೆ ಅಶ್ವಿನ್ ಅವರು ಚೆನ್ನೈನಲ್ಲಿ ವಾಸವಿರುವ ವೆಸ್ಟ್ ಮಾಂಬಲಂನ ಪೋಸ್ಟಲ್ ಕಾಲನಿಯಲ್ಲಿ ಜಲಾವೃತಗೊಂಡು ಭಾರಿ ಸಮಸ್ಯೆ ಉಂಟಾಗಿರುವ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಮ್ಮ ಏರಿಯಾದಲ್ಲಿ ಕಳೆದ 30 ಗಂಟೆಗಳಿಂದ ವಿದ್ಯುತ್ ಪೂರೈಕೆ ಇಲ್ಲವಾಗಿದೆ. ಇನ್ನು ಉಳಿದ ಪ್ರದೇಶಗಳ ಗತಿ ಏನು ಎಂಬುದನ್ನು ಊಹಿಸಿ. ನಮಗೆ ಯಾವ ಆಯ್ಕೆ ಉಳಿದಿದೆ ಎಂಬುದು ನಮಗೆ ಗೊತ್ತಿಲ್ಲ ಎಂದು ಅಸಹಾಯಕತೆ ಹೊರಹಾಕಿದ್ದಾರೆ.
No power in my locality for
more than 30 hours too. Guess thats the case in many places.Not Sure what options we have 🙏#ChennaiFloods https://t.co/gWArpwH3KI
— Ashwin 🇮🇳 (@ashwinravi99) December 5, 2023
ಚೆನ್ನೈನ ಗ್ರ್ಯಾಂಡ್ ಮಾಲ್ ಬಳಿಯ ಪ್ರದೇಶದಲ್ಲಿ ವಿದ್ಯುತ್ ಕಡಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಿವಾಸಿಯೊಬ್ಬರ ಎಕ್ಸ್ ಖಾತೆಯ ಪೋಸ್ಟ್ ಅನ್ನು ಮರುಟ್ವೀಟ್ ಮಾಡುವ ಮೂಲಕ ಅಶ್ವಿನ್ ತಮ್ಮ ಏರಿಯಾದ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ವಾರ್ನರ್ ಮನವಿ
ಚೆನ್ನೈ ಪ್ರವಾಹದ ಭೀಕರ ದೃಶ್ಯಗಳನ್ನು ನೋಡಿ ಮರುಕ ವ್ಯಕ್ತಪಡಿಸಿರುವ ಕ್ರಿಕೆಟರ್ ವಾರ್ನರ್, ಚೆನ್ನೈಗಾಗಿ ನೆರವಿನ ಹಸ್ತ ಚಾಚುವಂತೆ ಕರೆ ನೀಡಿದ್ದಾರೆ. ಚೆನ್ನೈ ಪ್ರವಾಹದ ಭೀಕರ ದೃಶ್ಯಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ವಾರ್ನರ್, ಚೆನ್ನೈನ ವಿವಿಧೆಡೆ ಮಳೆ ನೀರು ಸಂಗ್ರಹವಾಗುತ್ತಿರುವುದು ಆತಂಕಕಾರಿ ಸಂಗತಿ. ಇದರಿಂದ ಬಾಧಿತರಾದ ಎಲ್ಲರ ರಕ್ಷಣೆಗೆ ನಾನು ಪ್ರಾರ್ಥಿಸುತ್ತೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ. ಸಹಾಯ ಮಾಡುವ ಸ್ಥಿತಿಯಲ್ಲಿರುವ ಯಾರಾದರೂ ತಕ್ಷಣ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲು ಮತ್ತು ಸಹಾಯ ಹಸ್ತ ಚಾಚಲು ಸಿದ್ಧರಾಗಿರಬೇಕೆಂದು ನಾನು ವಿನಂತಿಸುತ್ತೇನೆ. ನಾವೆಲ್ಲರೂ ಸೇರಿ ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಎಂದಿದ್ದಾರೆ. (ಏಜೆನ್ಸೀಸ್)
ಚೆನ್ನೈಗಾಗಿ ಮಿಡಿದ ಡೇವಿಡ್ ವಾರ್ನರ್ ಹೃದಯ: ನೆರವಿನ ಹಸ್ತ ಚಾಚೋಣ ಎಂದ ಆಸೀಸ್ ಕ್ರಿಕೆಟಿಗ
ವಿಪಕ್ಷಗಳ ವಿಭಜಕ ಅಜೆಂಡಾ- ಪ್ರಧಾನಿ ಮೋದಿ ಎಚ್ಚರಿಕೆ: ಏನಿದು ‘ಉತ್ತರ vs ದಕ್ಷಿಣ’ ಫೈಟ್’?