ಕೋಲ್ಕತ: ಇತ್ತಿಚೆಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶಗಳಲ್ಲಿ ಅಪ್ಪಳಿಸಿದ ಅಂಫಾನ್ ಚಂಡಮಾರುತದಿಂದಾಗಿ ಉಭಯ ರಾಜ್ಯಗಳ ಜನಜೀವನ ಅಸ್ತವ್ಯಸ್ತವಾಗಿದೆ. ಒಡಿಶಾ ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮದಿಂದಾಗಿ ಅಲ್ಲಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಆದರೆ, ಪಶ್ಚಿಮ ಬಂಗಾಳದಲ್ಲಿ 80ಕ್ಕೂ ಹೆಚ್ಚು ಜನರನ್ನು ಬಲಿಪಡೆದುದ್ದಲ್ಲದೆ, ಸಾಕಷ್ಟು ಆಸ್ತಿ ನಷ್ಟವನ್ನುಂಟು ಮಾಡಿತು. ಹೀಗಾಗಿ ಜನರು ಅಂಫಾನ್ ಚಂಡಮಾರುತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಆದರೆ, ಕೋವಿಡ್-19 ಲಾಕ್ಡೌನ್ನಿಂದ ಉದ್ಯೋಗ ನಷ್ಟಕ್ಕೆ ಒಳಗಾಗಿ ವಿವಿಧ ರಾಜ್ಯಗಳಿಂದ ತವರು ಪಶ್ಚಿಮ ಬಂಗಾಳಕ್ಕೆ ಮರಳಿರುವ ವಲಸೆ ಕಾರ್ಮಿಕರ ಪಾಲಿಗೆ ಅಂಫಾನ್ ಚಂಡಮಾರುತ ಅದೃಷ್ಟಕಾರಿಯಾಗಿ ಪರಿಣಮಿಸಿದೆ. ಅದರಲ್ಲೂ ವಿಶೇಷವಾಗಿ ದಿನಗೂಲಿ ಕಾರ್ಮಿಕರು ಮತ್ತು ಎಲೆಕ್ಟ್ರೀಷಿಯನ್ಗಳಿಗೆ ಅವಕಾಶದ ದಿಡ್ಡಿಬಾಗಿಲೇ ತೆರೆದಂತಾಗಿದೆ. ಲಾಕ್ಡೌನ್ನಿಂದ ಉದ್ಯೋಗ ನಷ್ಟಕ್ಕೆ ಒಳಗಾಗಿದ್ದ ಅವರಿಗೆ ತಮ್ಮದೇ ರಾಜ್ಯದಲ್ಲಿ ಉದ್ಯೋಗ ಗಳಿಸಿಕೊಂಡು, ಹೊಟ್ಟೆ ತುಂಬಿಸಿಕೊಳ್ಳಲು ಇದರಿಂದ ಅನುಕೂಲವಾಗಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ಕೊವಿಡ್-19 ಕಂಟಕ, ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆ; ಚಿತ್ರದುರ್ಗಕ್ಕೆ ಶಾಕ್
ಚಂಡಮಾರುತಕ್ಕೆ ಸಿಲುಕಿ ಬುಡಮೇಲಾಗಿರುವ ಮರಗಳು ಮತ್ತಿತರ ವಸ್ತುಗಳನ್ನು ತೆರವುಗೊಳಿಸಲು ಪಶ್ಚಿಮ ಬಂಗಾಳದಲ್ಲಿ ಕೂಲಿಯಾಳುಗಳ ಕೊರತೆ ಉಂಟಾಗಿದೆ. ಆದರೆ, ವಲಸೆ ಕಾರ್ಮಿಕರು ಈ ಕೊರತೆಯನ್ನು ನೀಗಿಸಲು ಮುಂದಾಗಿದ್ದಾರೆ.
ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ, ವಿದ್ಯುತ್ ಮರುಸಂಪರ್ಕ ಒದಗಿಸುವುದು ಕಲ್ಕತ್ತಾ ವಿದ್ಯುತ್ ಸರಬರಾಜು ನಿಗಮದ ಜವಾಬ್ದಾರಿಯಾಗಿದೆ. ಆದರೂ ನಾವು ಸ್ಥಳೀಯ ಎಲೆಕ್ಟ್ರೀಷಿಯನ್ಗಳನ್ನು ಬಳಸಿಕೊಂಡು ತುಂಡಾಗಿರುವ ವಿದ್ಯುತ್ ತಂತಿಗಳನ್ನು ತೆರವುಗೊಳಿಸುತ್ತಿದ್ದೇವೆ. ಜತೆಗೆ ವಿದ್ಯುತ್ ಸಂಪರ್ಕ ಮರುಸ್ಥಾಪನೆ ಕಾರ್ಯದಲ್ಲೂ ಅವರನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಕೋಲ್ಕತ ಮಹಾನಗರಪಾಲಿಕೆಯ ಸದಸ್ಯರೊಬ್ಬರು ತಿಳಿಸಿದ್ದಾರೆ.