ಬೆಂಗಳೂರು: ಕೋವಿಡ್ ಆಸ್ಪತ್ರೆಗಳಲ್ಲಿ ಹಲವು ರೋಗಿಗಳಿಗೆ ಕನಿಷ್ಠ ಮೂಲ ಸೌಲಭ್ಯವೂ ಸಿಗದೆ ‘ನರಕ’ ದರ್ಶನವಾಗುತ್ತಿದೆ. ರೋಗದಿಂದ ಬಳಲುತ್ತಿರುವವರಿಗೆ ಹಸಿವಿನ ಶಿಕ್ಷೆಯೂ ಕಾಡುತ್ತಿದೆ. ಈ ಬಗ್ಗೆ ಸ್ವತಃ ಕರೊನಾ ಸೋಂಕಿತರೇ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದು, ಎಚ್ಚೆತ್ತ ವೈದ್ಯಕೀಯ ಸಚಿವರು ಸಂಬಂಧಿಸಿದ ಆಸ್ಪತ್ರೆಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಸ್ವತಃ ಕ್ವಾರಂಟೈನ್ನಲ್ಲಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್, ಹಿರಿಯ ಅಧಿಕಾರಿಗಳು ಮತ್ತು ಕೋವಿಡ್ ಆಸ್ಪತ್ರೆ ನಿರ್ದೇಶಕರ ಜತೆ ಇಂದು(ಮಂಗಳವಾರ)ವಿಡಿಯೋ ಸಂವಾದ ನಡೆಸಿದರು. ವಿಕ್ಟೋರಿಯಾ ಆಸ್ಪತ್ರೆ, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ಮತ್ತು ಬೌರಿಂಗ್ ಆಸ್ಪತ್ರೆ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸಚಿವರು, ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ದೂರು ಬಂದಲ್ಲಿ ಸಂಸ್ಥೆಗಳ ಆಡಳಿತ ನೋಡಿಕೊಳ್ಳಲು ಹಿರಿಯ ಕೆಎಎಸ್ ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಇದನ್ನೂ ಓದಿರಿ ಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್ ಲಾಕ್ಡೌನ್?
ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಆಹಾರ ನೀಡಬೇಕು. ರೋಗಿಗಳ ದಾಖಲಾತಿ, ಆಹಾರ ಮತ್ತು ಸ್ವಚ್ಛತೆ ವಿಚಾರದಲ್ಲಿ ದೂರುಗಳಿಲ್ಲದಂತೆ ಕಾರ್ಯ ನಿರ್ವಹಿಸಬೇಕು. ಈ ವಿಚಾರದಲ್ಲಿ ಲೋಪಗಳಾದರೆ ಆಸ್ಪತ್ರೆಗಳ ನಿರ್ದೇಶಕರುಗಳನ್ನೇ ಹೊಣೆ ಮಾಡಲಾಗುವುದು. ತಜ್ಞರು, ಹಿರಿಯ ವೈದ್ಯರು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹೋಗದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.
ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗಳಿಗೆ ಸ್ಥಳಾಂತರಿಸಬೇಕು ಎಂದು ಸೂಚಿಸಿದರು. ನನ್ನ ತಂದೆ, ಪತ್ನಿ ಮತ್ತು ಪುತ್ರಿಗೆ ಕರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಣಮುಖರಾಗಲಿ ಎಂದು ಹಾರೈಸಿರುವ ಎಲ್ಲರಿಗೂ ನಾನು ಚಿರಋಣಿ ಎಂದು ಡಾ. ಕೆ.ಸುಧಾಕರ್ ಹೇಳಿದರು.
video/ ಕರೊನಾ ವಾರ್ಡಿನಲ್ಲಿ ‘ನರಕ’ ದರ್ಶನ, ಶೌಚಗೃಹದ ನೀರನ್ನೇ ಕುಡಿದ ಸೋಂಕಿತರು!