ನವದೆಹಲಿ: ಭಾರತದಲ್ಲಿ ಕೋವಿಡ್-19 ಪಿಡುಗು ಹಿನ್ನೆಲೆಯಲ್ಲಿ ದೇಶದ 247 ದಶಲಕ್ಷ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕಾರ್ಮೋಡ ಆವರಿಸಿದೆ. ಇವರೆಲ್ಲರೂ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವವರಾಗಿದ್ದಾರೆ ಎಂದು ಯೂನಿಸೆಫ್ ಸಿದ್ಧಪಡಿಸಿರುವ ವರದಿ ತಿಳಿಸಿದೆ. ಇವರದಲ್ಲದೆ, ಶಿಶುವಿಹಾರದಲ್ಲಿ ವ್ಯಾಸಂಗ ಮಾಡುತ್ತಿರುವ 28 ದಶಲಕ್ಷ ಮಕ್ಕಳ ಭವಿಷ್ಯವನ್ನೂ ಅಂಧಕಾರಕ್ಕೆ ದೂಡಿದೆ ಎಂದು ಹೇಳಲಾಗಿದೆ.
ಈ ವರದಿಯ ಪ್ರಕಾರ ದಕ್ಷಿಣ ಏಷ್ಯಾದ 600 ದಶಲಕ್ಷ ಮಕ್ಕಳ ವಿದ್ಯಾಭ್ಯಾಸಕ್ಕೆ ಕೋವಿಡ್-19 ಪಿಡುಗು ಸಂಚಕಾರ ತಂದಿದೆ.
ಭಾರತದಲ್ಲಿ ಶಾಲೆಗಳನ್ನು ಮುಚ್ಚಲಾಗಿರುವುದರಿಂದ ಪೂರ್ವಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳಲ್ಲಿ 247 ದಶಲಕ್ಷ ಮಕ್ಕಳ ಭವಿಷ್ಯ ಗಾಢಾಂಧಕಾರದಲ್ಲಿ ಸಿಲುಕಿಕೊಂಡಿದೆ. ಅಂಗನವಾಡಿ ಕೇಂದ್ರಗಳಲ್ಲಿ ಓದುತ್ತಿರುವ 28 ದಶಲಕ್ಷ ಮಕ್ಕಳ ಭವಿಷ್ಯಕ್ಕೂ ಸಂಚಕಾರ ತಂದಿದೆ. ಕೋವಿಡ್-19 ಪಿಡುಗು ಆವರಿಸುವ ಮುನ್ನವೇ 6 ದಶಲಕ್ಷ ಬಾಲಕಿಯರು ಮತ್ತು ಬಾಲಕರು ಶಾಲೆಗಳಿಂದ ಹೊರಗುಳಿದಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದ ಬಗ್ಗೆ ಮೆಚ್ಚುಗೆ: ಮಕ್ಕಳ ಓದಿಗೆ ತೊಂದರೆಯಾಗದ ರೀತಿಯಲ್ಲಿ ವೆಬ್ ಪೊರ್ಟಲ್, ಮೊಬೈಲ್ ಆ್ಯಪ್, ಟಿವಿ ಚಾನಲ್ಗಳು, ರೇಡಿಯೋ ಮತ್ತು ಪಾಡ್ಕಾಸ್ಟ್ನಂತ ಇ-ಪ್ಲ್ಯಾಟ್ಫಾರಂಗಳನ್ನು ಬಳಸಲು ಕ್ರಮ ಕೈಗೊಂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಕ್ಕೆ ವರದಿಯಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ದೀಕ್ಷಾ ಪ್ಲ್ಯಾಟ್ಫಾರಂ, ಸ್ವಯಂ ಪ್ರಭ ಟಿವಿ ಚಾನಲ್ಗಳು, ಇ-ಪಾಠಶಾಲಗಳು ಮತ್ತು ನ್ಯಾಷನಲ್ ರೆಪಾಸಿಟರಿ ಆಫ್ ಓಪನ್ ಎಜುಕೇಷನಲ್ ರಿಸೋಸರ್ಸ್ ಬಳಕೆಗೆ ಕ್ರಮ ಕೈಗೊಂಡಿರುವುದಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ: ಗಿಡ ನೆಡುವುದು ಇಸ್ಲಾಂ ವಿರೋಧಿಯೇ? ಪಾಕಿಸ್ತಾನದಲ್ಲಿ ಸಸಿಗಳನ್ನು ಕಿತ್ತು ಹಾಕಿದ್ಯಾಕೆ ಜನರು?
ಕೋವಿಡ್-19 ಲಾಕ್ಡೌನ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) 1ನೇ ತರಗತಿಯಿಂದ 12ನೇ ತರಗತಿವರೆಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಸಿದ್ಧಪಡಿಸಿದೆ. ಇದರಲ್ಲಿ ಮನೆಯಲ್ಲೇ ಕುಳಿತು ಕಲಿಯಲು ಪೂರಕವಾಗಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ.
ಇಂಟರ್ನೆಟ್ ಸಂಪರ್ಕದ ಕೊರತೆ: ಭಾರತದಲ್ಲಿ ಅಂದಾಜು ಶೇ.24 ಮನೆಗಳಲ್ಲಿ ಇಂಟರ್ನೆಟ್ ಸಂಪರ್ಕದ ಕೊರತೆ ಇದೆ. ಅಲ್ಲದೆ, ಗ್ರಾಮೀಣ-ನಗರ ಪ್ರದೇಶ ಹಾಗೂ ಲಿಂಗ ತಾರತಮ್ಯ ಅಗಾಧವಾಗಿದೆ ಎಂದು ಯೂನಿಸೆಫ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಭಾರಿ ಪ್ರಮಾಣದ ಮಕ್ಕಳು ದೂರಶಿಕ್ಷಣದ ಅವಕಾಶದಿಂದ ವಂಚಿತರಾಗಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದೆ.
ಒಳಉಡುಪು ಧರಿಸಿದ ನಿಗೂಢ ಕಳ್ಳರ ಕಾರ್ಯತಂತ್ರ ಪತ್ತೆಹಚ್ಚಲು ಅಧ್ಯಯನ ನಡೆಸಿದ ಪೊಲೀಸರು