ಚಿತ್ರದುರ್ಗ: ಜಿಲ್ಲೆಯಲ್ಲಿ ಡಿಎಪಿ 18-46-0 ಗೊಬ್ಬರ ಕಳಪೆ ಬಂದಿದೆ. 13 ಲಾರಿ ಲೋಡ್ ಗೊಬ್ಬರ ಈಗಾಗಲೇ ವಿತರಣೆಯಾಗಿದೆ ಎಂದು ಆರೋಪಿಸಿ ರೈತರು ಬುಧವಾರ, ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಳಪೆ ಡಿಎಪಿ ಗೊಬ್ಬರವನ್ನು ಮಾರಾಟ ಮಾಡುತ್ತಿದ್ದರೂ ಕೃಷಿ ಇಲಾಖೆ ವಿಚಕ್ಷಣ ದಳ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೆ ರೈತರಿಗೆ ಮೋಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಗಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಕಳಪೆ ಗೊಬ್ಬರ ಮಾರಾಟ ಮಾಡುತ್ತಿರುವ ಮಾಲೀಕರ ಲೈಸೆನ್ಸ್ ರದ್ದುಪಡಿಸಬೇಕು. ಕಳಪೆ ಗೊಬ್ಬರ ಎಲ್ಲಿಂದ ಸರಬರಾಜು ಆಗಿದೆ? ಎಂಬುದನ್ನು ಕಂಡು ಹಿಡಿದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈಗ ಮಳೆ ಬಿಡುವು ಕೊಟ್ಟಿದ್ದರಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವರು ಬಿತ್ತನೆ ಕಾರ್ಯ ಮುಗಿಸಿದ್ದಾರೆ. ಬಿತ್ತನೆ ನಡೆಸಿದ ರೈತರಿಗೆ ಈ ಗೊಬ್ಬರದ ಗುಣಮಟ್ಟದ ಅನುಭವವಾಗಿದೆ ಎಂದು ಅಸಮಾಧಾನ ತೋರಿದರು.
ರೈತ ಸಂಘದ ಸಿದ್ದವೀರಪ್ಪ, ಮಲ್ಲಿಕಾರ್ಜುನ್, ಬಸವರಾಜಪ್ಪ, ಸತೀಶ್, ಪ್ರವೀಣ್, ರಾಮರೆಡ್ಡಿ, ಜಯಣ್ಣ, ಎಚ್.ತಿಪ್ಪೇಸ್ವಾಮಿ ಇದ್ದರು.