ನವದೆಹಲಿ: ಕಾಂಗ್ರೆಸ್ ಡಿಎನ್ಎಯಲ್ಲಿ ಭ್ರಷ್ಟಾಚಾರ ಅಡಕವಾಗಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ 42 ಕೋಟಿ ರೂಪಾಯಿ ಹಣ ಸಿಕ್ಕಿರುವುದು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜೀವ್ ಚಂದ್ರಶೇಖರ್, ಕಳೆದ ವರ್ಷ ನಮ್ಮ ಮೇಲೆ ಆರೋಪ ಮಾಡಿ ಗುತ್ತಿಗೆದಾರರಿಂದ ಪ್ರಧಾನಿಗೆ ಪತ್ರ ಬರೆಸಿದ್ದ ಕಾಂಗ್ರೆಸ್ನವರು ಈ ವಿಚಾರವಾಗಿ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಕರ್ನಾಟಕದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಹೊರಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದವರಲ್ಲಿ ಗುತ್ತಿಗೆದಾರ ಅಂಬಿಕಾಪತಿ ಕೂಡ ಒಬ್ಬರು. ಅಂಬಿಕಾಪತಿ ಹಾಗೂ ಕೆಲ ಗುತ್ತಿಗೆದಾರರು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದು, ಬಿಜೆಪಿ ವಿರುದ್ಧ ಸುಳ್ಳು ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿ ಕರ್ನಾಟಕ ಜನತೆಯ ದಾರಿ ತಪ್ಪಿಸಿದ್ದಾರೆ.
ಇದನ್ನೂ ಓದಿ: VIDEO| ಅಪರೂಪದ ಘಟನೆಗೆ ಸಾಕ್ಷಿಯಾಯಿತು ಭಾರತ-ಪಾಕ್ ನಡುವಿನ ಪಂದ್ಯ; ವಿಭಿನ್ನ ಅನುಭವ ಎಂದ ನೆಟ್ಟಿಗರು
ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿಯಾದ ಬಳಿಕ ಅನೇಕ ವಿಚಾರಗಳು ಹೊರಬಂದಿದ್ದು, ಅವರು ಆಡಿದ ನಾಟಕ ಒಂದೊಂದಾಗಿ ಬಯಲಾಗುತ್ತಿದೆ. ದುರಾದೃಷ್ಟವೇನೆಂದರೆ ಕಾಂಗ್ರೆಸ್ ನಾಯಕರು ಆಡಿಸಿದ ಈ ನಾಟಕಕ್ಕೆ ಜನರು ಮರುಳಾಗಿ ಅವರಿಗೆ ಅಧಿಕಾರ ನೀಡಿದ್ದಾರೆ. ಜನರ ದಿಕ್ಕನ್ನು ತಪ್ಪಿಸಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ ಎಂದು ಕಿಡಿಕಾರಿದ್ದಾರೆ.
ನಕಲಿ ಗ್ಯಾರಂಟಿ, ಸುಳ್ಲನ್ನು ಹೆಚ್ಚಾಗಿ ನಂಬುವ ಕಾಂಗ್ರೆಸ್ ಡಿಎನ್ಎಯಲ್ಲೇ ಭ್ರಷ್ಟಾಚಾರ ಅಡಕವಾಗಿದೆ. ನಾವು ಈಗಾಗಲೇ ಇದನ್ನು ಕರ್ನಾಟಕದಲ್ಲಿ ನೋಡಿದ್ದು, ಅದನ್ನು ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ಮಿಜೋರಾಂನಲ್ಲಿ ತನ್ನ ಸುಳ್ಳಿನ ಅಸ್ತ್ರವನ್ನು ಪ್ರಯೋಗಿಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಅಂಬಿಕಾಪತಿ ಪ್ರಕರಣವು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನರ ಮುಖವಾಡಗಳು ಕಳಚುವ ಸಾಧ್ಯತೆ ಇದೆ. ಭ್ರಷ್ಟಾಚಾರದಲ್ಲೇ ಮುಳುಗಿರುವ ಕಾಂಗ್ರೆಸ್ಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಗುಡುಗಿದ್ದಾರೆ.