ಚಾಮರಾಜನಗರ: ಮಹಾಮಾರಿ ಕರೊನಾ ವೈರಸ್ ಜತೆ ಸರಸಾಟ ಸರಿಯಿಲ್ಲ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಳ್ ನಾಗರಾಜ್ ಅವರು ಎಚ್ಚರಿಸಿದರು.
ಚಾಮರಾಜನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸದಂತೆ ಸಿಎಂ ಹಾಗೂ ಶಿಕ್ಷಣ ಸಚಿವರ ಬಳಿ ಮನವಿ ಮಾಡಿಕೊಂಡರು. ಒಂದು ವೇಳೆ ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗೆ 50 ಲಕ್ಷ ಹಾಗೂ ಶಿಕ್ಷಕರಿಗೆ 25 ಲಕ್ಷ ರೂ. ಡೆಪಾಸಿಟ್ ಮಾಡಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕೆಲಸ, ಆದಾಯವಿಲ್ಲದೇ ದೇಶದ ಅರ್ಧದಷ್ಟು ಜನ ತಿಂಗಳಿಗೂ ಹೆಚ್ಚು ಕಾಲ ಬದುಕಲಾರರು: ಸ್ಪೋಟಕ ವರದಿ ಬಹಿರಂಗ
ರಾಜ್ಯದಲ್ಲಿ 9 ಲಕ್ಷ ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಉಪಾಧ್ಯಾಯ, ಸಿಬ್ಬಂದಿ ಸೇರಿ 12 ಲಕ್ಷ ಬೀದಿಗೆ ಬರಬೇಕು. ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಟವಾಡೋದು ಸರಿಯಲ್ಲ. ಸುರೇಶ್ ಕುಮಾರ್ ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಉತ್ತೀರ್ಣಗೊಳಿಸಬೇಕು. ಪರೀಕ್ಷೆ ಪಾಸ್ಗಿಂತ ಜೀವವೇ ಮುಖ್ಯವೆಂದರು.
ನಾಳೆ ವಿಧಾನಸೌಧದ ಮುಂದೆ ಮಲಗಿ ಸರ್ಕಾರದ ಗಮನ ಸೆಳೆಯುತ್ತೇನೆ. ಸ್ಕೂಲ್ ಫೀಸ್ ಹೊಣೆ ಸರ್ಕಾರ ವಹಿಸಲಿ. ಖಾಸಗಿ ಶಾಲೆಗಳು ಯಮಧರ್ಮನಂತೆ. ಶಾಲೆ ನಡೆಸುವ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ರಾಜಕೀಯ ಮುಖಂಡರು ಶುಲ್ಕ ವಸೂಲಿ ಮಾಡಬಾರದು. ಸರ್ಕಾರವೇ ಒಂದು ಪ್ಯಾಕೇಜ್ ಘೋಷಣೆ ಮಾಡಲಿ ಎಂದು ಒತ್ತಾಯಿಸಿದರು. (ದಿಗ್ವಿಜಯ ನ್ಯೂಸ್) ಇದನ್ನೂ ಓದಿ: ರಾಜ್ಯದಲ್ಲಿ ಆನ್ಲೈನ್ ಶಿಕ್ಷಣ ರದ್ದು: ಶಾಲಾ ಶುಲ್ಕ ಹೆಚ್ಚಳಕ್ಕೂ ಬ್ರೇಕ್ ಹಾಕಿದ ಸರ್ಕಾರ