ಲಖನೌ: ಕೋವಿಡ್ -19 ಪಾಸಿಟಿವ್ ಇರುವುದು ಗೊತ್ತಾದ ಬಳಿಕ ಉತ್ತರ ಪ್ರದೇಶದ ಲಖನೌದಲ್ಲಿರುವ ಸಂಜಯ್ ಗಾಂಧಿ ಮೆಡಿಕಲ್ ಸೈನ್ಸ್ ಆಸ್ಪತ್ರೆ(ಎಸ್ಜಿಪಿಜಿಐ)ಗೆ ದಾಖಲಾದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ವೈದ್ಯರಿಗೆ ಸರಿಯಾಗಿ ಸಹಕಾರ ನೀಡಲಿಲ್ಲವೆಂಬ ಆರೋಪ ಕೇಳಿಬಂದಿದೆ.
ಎಸ್ಜಿಪಿಜಿಐ ನಿರ್ದೇಶಕ ಆರ್.ಕೆ. ಧಿಮನ್ ಪ್ರಕಾರ, ಕನ್ನಿಕಾ ಕಪೂರ್ ರೋಗಿಯಂತೆ ವರ್ತಿಸಲಿಲ್ಲ. ಫೈವ್ಸ್ಟಾರ್ ಚಿಕಿತ್ಸೆ ಬೇಕೆಂದು ಬೇಡಿಕೆ ಇಟ್ಟರು. ಎಸ್ಜಿಪಿಜಿಐ ನಿಯಮದಂತೆ ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ. ಪ್ರತ್ಯೇಕ ಕೊಠಡಿಯನ್ನು ಸಹ ನೀಡಲಾಗಿದೆ. ಆದರೆ, ಇದ್ಯಾವುದೂ ಅವರಿಗೆ ಸಮಾಧಾನ ತರುತ್ತಿಲ್ಲ. ಅವರ ವರ್ತನೆ ಬಗ್ಗೆ ಸರ್ಕಾರಕ್ಕೆ ಪತ್ರದ ಮೂಲಕ ತಿಳಿಸಿರುವುದಾಗಿ ಧಿಮನ್ ಹೇಳಿದ್ದಾರೆ.
ಇದಕ್ಕೂ ಮುನ್ನ ಸಂದರ್ಶನದಲ್ಲಿ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ಅಸಮಾಧಾನ ಹೊರಹಾಕಿದ್ದ ಕನ್ನಿಕಾ, ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಯಾವ ಸೌಲಭ್ಯವನ್ನು ನೀಡಿಲ್ಲ. ನನಗೆ ನೀಡಿದ ಕೊಠಡಿ ಕೊಳಕಾಗಿ, ಸೊಳ್ಳೆಗಳು ತುಂಬಿಕೊಂಡಿವೆ. ತಿನ್ನಲು ಏನಾದರೂ ಕೇಳಿದರೆ, ನನಗೆ ಸಣ್ಣ ಬಾಳೆಹಣ್ಣು ಮತ್ತು ಕಿತ್ತಳೆ ಹಣ್ಣು ನೀಡುತ್ತಿದ್ದರಷ್ಟೇ. ಸಣ್ಣ ಬಾಟಲ್ನಲ್ಲಿ ನೀರು ನೀಡುತ್ತಿದ್ದರು. ಜೈಲಿನಲ್ಲಿ ಉಪಚರಿಸುವಂತೆ ಭಾಸವಾಗುತ್ತಿತ್ತು. ನನ್ನ ಕೊಠಡಿ ಶುಚಿಗೊಳಿಸಿ ಎಂದಾಗ, ಇದು ಫೈವ್ಸ್ಟಾರ್ ಆಸ್ಪತ್ರೆಯಲ್ಲ ಎನ್ನುತ್ತಿದ್ದರು ಎಂದು ಆರೋಪಗಳ ಸುರಿಮಳೆಗೈದಿದ್ದರು.
ಕನ್ನಿಕಾ ಹತ್ತು ದಿನಗಳ ಹಿಂದೆ ಯುಕೆ ಇಂದ ಭಾರತಕ್ಕೆ ವಾಪಾಸ್ಸಾದರು. ಮಾರ್ಚ್ 9ರಂದು ಲಂಡನ್ನಿಂದ ಮುಂಬೈಗೆ ಮರಳಿದ ಕನ್ನಿಕಾ ಬಳಿಕ ಕೆಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಲಖನೌಗೆ ತೆರಳಿದರು. ಈ ಕಾರ್ಯಕ್ರಮದಲ್ಲಿ ಅನೇಕ ರಾಜಕಾರಣಿಗಳು ಸಹ ಭಾಗಿಯಾಗಿದ್ದರು. ಸೋಂಕಿನ ಬಗ್ಗೆ ಮುಚ್ಚಿಟ್ಟ ಆರೋಪದ ಮೇಲೂ ಕನ್ನಿಕಾ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)
ಸಿಎಂ ಯೋಗಿ ಆದಿತ್ಯನಾಥ್ ಸೂಚನೆಯಂತೆ ಬಾಲಿವುಡ್ ಸಿಂಗರ್ ಕನ್ನಿಕಾ ಕಪೂರ್ ವಿರುದ್ಧ ಎಫ್ಐಆರ್ ದಾಖಲು